Kannada Cinema; ಗರಡಿಯತ್ತ ಸೋನಾಲ್ ಮೊಂತೆರೋ ಚಿತ್ತ
Team Udayavani, Oct 6, 2023, 12:02 PM IST
ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಾ ಬಿಝಿಯಾಗುತ್ತಿರುವ ನಾಯಕಿಯರ ಸಾಲಿನಲ್ಲಿ ಕರಾವಳಿ ಬೆಡಗಿ ಸೋನಾಲ್ ಮೊಂತೆರೋ ಕೂಡಾ ಇದ್ದಾರೆ. ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಸೋನಾಲ್ ಈಗ “ಗರಡಿ’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡುವ ಸೋನಾಲ್, “ಇಲ್ಲಿ ನನಗೆ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆ. ಆರಂಭದಲ್ಲಿ ತುಂಬಾ ಜಾಲಿಯಾಗಿ, ಫನ್ ಮಾಡಿಕೊಂಡು ತಿರುಗುವ ಹುಡುಗಿ ಒಂದು ಹಂತಕ್ಕೆ ಏಕಾಏಕಿ ಸೀರಿಯಸ್ ಆಗುತ್ತಾಳೆ. ಅದಕ್ಕೊಂದು ಕಾರಣವಿದೆ. ಅದೇನೆಂಬುದನ್ನು ತೆರೆಮೇಲೆಯೇ ನೋಡಬೇಕು. ನಾಯಕಿಯರಿಗೆ ಹೆಚ್ಚು ಪರ್ಫಾರ್ಮೆನ್ಸ್ ಇರುವ ಪಾತ್ರಗಳು ಸಿಗುವುದಿಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ, “ಗರಡಿ’ ಚಿತ್ರದಲ್ಲಿ ನನಗೆ ನಟನೆಗೆ ಸಾಕಷ್ಟು ಅವಕಾಶವಿದೆ. ಚಿತ್ರದ ಟಿಸ್ಟ್-ಟರ್ನ್ಗಳಲ್ಲಿ ನನ್ನ ಪಾತ್ರ ಪ್ರಮುಖ ಪಾತ್ರ ವಹಿಸುತ್ತದೆ’ ಎನ್ನುತ್ತಾರೆ.
ಇನ್ನು, ಸಾಮಾನ್ಯವಾಗಿ ಸಿನಿಮಾದಲ್ಲಿ ನಾಯಕಿಯರು ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ಸಿನಿಮಾದಲ್ಲಿ ನಾಯಕರದ್ದೇ ಗ್ಲಾಮರ್ ಅಬ್ಬರ. ಅದಕ್ಕೆ ಕಾರಣ “ಗರಡಿ’ ಮನೆಯ ಕುಸ್ತಿ ಮತ್ತು ಆ ಸಮಯದ ಕಾಸ್ಟೂéಮ್. “ಗರಡಿ’ ಚಿತ್ರವನ್ನು ಬಿ.ಸಿ.ಪಾಟೀಲ್ ತಮ್ಮ ಕೌರವ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿದ್ದು, ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ “ಹೊಡಿರಲೇ ಹಲಗಿ..’ ಹಾಡು ಬಿಡುಗಡೆ ಯಾಗಿ ಹಿಟ್ಲಿಸ್ಟ್ ಸೇರಿದೆ. ಅಂದಹಾಗೆ, ಈ ಚಿತ್ರ ನ.10ರಂದು ಬಿಡುಗಡೆ ಯಾಗುತ್ತಿದ್ದು, ರಿಲಯನ್ಸ್ ಎಂಟರ್ಟೈನ್ಮೆಂಟ್ ಕೈ ಜೋಡಿಸಿದೆ. “ಗರಡಿ’ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ನಟ ದರ್ಶನ್ ಕೂಡಾ ಒಂದು.
ಹೌದು, ನಟ ದರ್ಶನ್ “ಗರಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅತಿಥಿ ಪಾತ್ರ ದಲ್ಲಿ. ಸಿನಿಮಾಕ್ಕೆ ಟ್ವಿಸ್ಟ್ ಕೊಡುವ ಪಾತ್ರ ಇದಾಗಿದ್ದು, ದರ್ಶನ್ ಅಭಿಮಾನಿಗಳಿಗೆ ಅವರ ಎಂಟ್ರಿ ಖುಷಿಕೊಡಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. ಯಶಸ್ ಸೂರ್ಯ ಈ ಚಿತ್ರದ ಹೀರೋ ಆಗಿದ್ದು, ಸುಜಯ್ ವಿಲನ್ ಆಗಿ ನಟಿಸಿದ್ದಾರೆ.