ಮಸೀದಿ-ಚರ್ಚ್ಗಳಲ್ಲಿ ಜ್ಯೋತಿ ಬೆಳಗಿಸಲು ಅವಕಾಶ ಕಲ್ಪಿಸಿ : ಶ್ರೀರಾಮ ಸೇನೆ ಒತ್ತಾಯ
Team Udayavani, Nov 10, 2020, 1:30 PM IST
ಗದಗ: ಜಿಲ್ಲೆಯ ಎಲ್ಲ ಮಸೀದಿ ಹಾಗೂ ಚರ್ಚ್ಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಜ್ಯೋತಿ ಬೆಳಗಿಸಲು ಅವಕಾಶ ಕಲ್ಪಿಸುವ ಮೂಲಕ ಎಲ್ಲ ಧರ್ಮಗಳ ಧರ್ಮಗುರುಗಳು ಭಾತೃತ್ವ ಭಾವನೆ ಗಟ್ಟಿಗೊಳಿಸಬೇಕೆಂದು ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಸಹಿಷ್ಣುತೆಗೆ ಗದಗ ಜಿಲ್ಲೆ ಹೆಸರಾಗಿದ್ದು, ಐತಿಹಾಸಿಕ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ ಹಾಗೂ ಜುಮ್ಮಾ ಮಸೀದಿ ಒಳಗೊಂಡಂತೆ ಒಂದೇ ಒಂದು ಟ್ರಸ್ಟ್ ಕಮಿಟಿ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಹಿಂದೂ ದೇವಾಲಯ, ಮಸ್ಲಿಂರ ಮಸೀದಿಗೆ ಒಂದೇ ಟ್ರಸ್ಟ್
ಇರುವುದು ಇದೊಂದೇ. ಜ| ತೋಂಟದಾರ್ಯ ಮಠ ಹಾಗೂ ವೀರೇಶ್ವರ ಪುಣ್ಯಾಶ್ರಮಗಳು ಕೋಮು ಸೌಹಾರ್ದತೆಗೆ ಸಂಕೇತವಾಗಿವೆ ಎಂದರು.
ಮಸ್ಲಿಂರ ಪವಿತ್ರ ಮೊಹರಂ ಹಬ್ಬದ ನಿಮಿತ್ತ ಸೊರಟೂರಿನ ಅನ್ನದಾನೇಶ್ವರ ಮಠದಲ್ಲಿ ಯುಗಾದಿಯಂದು ಹಾಗೂ ಕುರ್ತಕೋಟಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯುವ
ಪುರಾಣದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ ಎಂದು ತಿಳಿಸಿದರು. 2010ರಲ್ಲಿ ವೀರೇಶ್ವ ಪುಣ್ಯಾಶ್ರಮದ ಪಂ|ಪುಟ್ಟರಾಜಕವಿ ಗವಾಯಿಗಳು ಅಸ್ವಸ್ಥರಾಗಿದ್ದಾಗ ಎಲ್ಲ ಮುಸ್ಲಿಂ ಬಾಂಧವರು ಪುಣ್ಯಾಶ್ರಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ಲಿ ಸೌಹಾರ್ದ ಭಾವನೆ ಹೆಚ್ಚಿಸಲು
ಎಲ್ಲ ಧಾರ್ಮಿಕ ಸಂಸ್ಥೆಗಳಲ್ಲಿ ಜಾತಿ, ಮತ ಮೀರಿ ಲೋಕ ಕಲ್ಯಾಣಾರ್ಥ ದೀಪಾವಳಿ ಆಚರಿಸಬೇಕಿದೆ. ಹೀಗಾಗಿ ಎಲ್ಲ ಧರ್ಮ ಗುರುಗಳು ನೇತೃತ್ವ ವಹಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:Lockdown ಗೂ ಮೊದಲು ಹಾಗೂ ನಂತರದ ದಿನಸಿ ವ್ಯಾಪಾರದ ಸ್ಥಿತಿ ಗತಿ
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಗಣೇಶ ಸಿಂತ್ರೆ, ಜಿಲ್ಲಾಧ್ಯಕ್ಷ ಮಹೇಶ ರೋಖಡೆ, ನಗರಾಧ್ಯಕ್ಷ ಬಸವರಾಜ ಕುರ್ತಕೋಟಿ, ನಗರ ಪ್ರಮುಖ ಶಿವಯೋಗಿ ಹಿರೇಮಠ ಇದ್ದರು.