ಬೆಳಗಾವಿ : ಹೊಲದಲ್ಲಿ ಚಿರತೆ ಪ್ರತ್ಯಕ್ಷ! ಗ್ರಾಮಸ್ಥರಲ್ಲಿ ಆತಂಕ
Team Udayavani, Jan 14, 2021, 2:48 PM IST
ಸಾಂಬ್ರಾ: ಬೆಳಗಾವಿ ತಾಲೂಕಿನ ಬೆಳಗುಂದಿ ಮತ್ತು ರಾಕಸಕೊಪ್ಪ ಗ್ರಾಮದ ಹತ್ತಿರದ ಹೊಲದಲ್ಲಿ ಬುಧವಾರ ಮಧ್ಯಾಹ್ನ ಚಿರತೆ
ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ.
ಮಧ್ಯಾಹ್ನ ಮಾರುತಿ ಗಾವಡೆ ಮತ್ತು ಆಕಾಶ ಘೋರ್ಪಡೆ ಎಂಬುವರು ಬೈಕ್ ಮೇಲೆ ಹೊಲದಿಂದ ಊರಿಗೆ ಹೋಗುವಾಗ ಕೇವಲ 25 ಮೀ. ದೂರದಲ್ಲಿ ಕ್ಯಾಬೀಜ್ ಬೆಳೆ ಹೊಲದಲ್ಲಿ ಚಿರತೆ ಕಾಣಿಸಿಕೊಂಡಿತು.
ಬೆದರಿದ ಇವರು ಅಕ್ಕ-ಪಕ್ಕ ಕೆಲಸ ಮಾಡುತ್ತಿದ್ದವರಿಗೆ ಕೂಗಿ ಹೇಳಿದ್ದಲ್ಲದೇ ಅಲ್ಲಿಂದ ತೆರಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿ ಶಿವಾನಂದ ಮಗದುಮ, ರಮೇಶ ಗಿರೆಪ್ಪನವರ, ರಾಹುಲ ಬೋಂಗಾಳೆ ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲನೆ ನಡೆಸಿದರು.
ಇನ್ನು ಭಯದಿಂದ ಗ್ರಾಮಸ್ಥರು ಹೊಲಕ್ಕೆ ತೆರಳುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಕುದ್ರೆಮನಿ ಗ್ರಾಮದ ಹೊರವಲಯದಲ್ಲಿ ಬುಧವಾರ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.