ತೆಲಂಗಾಣದ 28 ಕಾರ್ಮಿಕರ ರಕ್ಷಣೆ
Team Udayavani, Feb 5, 2021, 7:52 PM IST
ಗದಗ: ಜೀತ ಪದ್ಧತಿ ಕಾನೂನು ಬಾಹಿರ ಹಾಗೂ ಮಾನವೀಯತೆಗೆ ವಿರುದ್ಧವಾದದ್ದು ಎಂಬುದು ದಶಕಗಳ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಈ ಅನಿಷ್ಠ ಪದ್ಧತಿ ಗದಗಿನಲ್ಲಿ ಇತ್ತೀಚಿನವರೆಗೂ ಜೀವಂತವಾಗಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಸಮೀಪದ ಮಲ್ಲಸಮುದ್ರದ ಜಿಮ್ಸ್ ಆಸ್ಪತ್ರೆಗೆ ಹೊಂದಿ ಕೊಂಡು ಮತ್ತೂಂದು ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡದ ಗುತ್ತಿಗೆದಾರನೊಬ್ಬ ಹತ್ತಾರು ಜನ ಕಾರ್ಮಿಕರನ್ನು ಜೀತದಾಳುಗಳನ್ನಾಗಿಸಿಕೊಂಡಿದ್ದ. ಈ ಕುರಿತು ದೂರು ಸ್ವೀಕರಿಸುತ್ತಿದ್ದಂತೆ ಗದಗ ಉಪವಿಭಾಗ ಅಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಎರಡು ದಿನಗಳ ಹಿಂದೆಯೇ ತೆಲಂಗಾಣ ಮೂಲದ 28 ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ :ನರೇಗಾ ತಾರತಮ್ಯ: ಗ್ರಾಪಂಗೆ ಸ್ಥಳೀಯರ ಮುತ್ತಿಗೆ
ಅವರಿಗೆ ನಗರದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಬುಧವಾರ ಸಾರಿಗೆ ಬಸ್ ಮೂಲಕ ತೆಲಂಗಾಣಕ್ಕೆ ರವಾನಿಸಿದ್ದಾರೆ. ಜೊತೆಗೆ ಗುತ್ತಿಗೆದಾರ ವಿರುದ್ಧ ಜೀತ ಪದ್ಧತಿ ಅಡಿ ಪ್ರಕರಣ ದಾಖಲಿಸಲಾಗಿದೆ.