ಪೋಷಕರೇ ಗಮನಿಸಿ… ರಜಾ ಅವಧಿಯು ಮೋಜಿನ ಜೊತೆ ನಿರಂತರ ಕಲಿಕೆಯಾಗಲಿ

ಶಾಲೆಯಿಲ್ಲದಿರುವ  ರಜಾ ದಿನಗಳಲ್ಲಿ ಮಕ್ಕಳು ಕಳೆಯುವ ಸಮಯ ಕಲಿಕೆಯಾಗುವಂತೆ ನಾವೆಲ್ಲರೂ ಪರಿವರ್ತಿಸಬೇಕಾಗಿದೆ.

Team Udayavani, Apr 15, 2022, 9:20 AM IST

ಪೋಷಕರೇ ಗಮನಿಸಿ… ರಜಾ ಅವಧಿಯು ಮೋಜಿನ ಜೊತೆ ನಿರಂತರ ಕಲಿಕೆಯಾಗಲಿ

ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್ 19 ಭಯದಿಂದಾಗಿ ಶಾಲೆಗಳಿಗೆ ರಜೆ ನೀಡಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯ ಗಳೆಲ್ಲವನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಪೋಷಕರೆಲ್ಲರು ಬೇಸಿಗೆ ರಜೆಯಲ್ಲಿ  ಮಕ್ಕಳಿಗೆ ಕಲಿಕಾ ಅಂತರ ಹೋಗಲಾಡಿಸಿ  ನಿರಂತರ ಕಲಿಕೆಯ ಪ್ರಗತಿಗಾಗಿ ಮಕ್ಕಳ ಜೊತೆಯಾಗಬೇಕಿದೆ.

ನಾವೆಲ್ಲ ಚಿಕ್ಕವರಿದ್ದಾಗ ರಜಾ ಬರುವುದೆಂದರೆ ಖುಷಿಯೋ ಖುಷಿ. ಏಕೆಂದರೆ ಶಾಲೆಗಳಿಲ್ಲದೆ ನಾವು ಮುಕ್ತವಾಗಿ ಆನಂದಿಸಬಹುದಲ್ಲ ಎನ್ನುವ ದೃಷ್ಟಿಯಿಂದ ರಜೆಯಲ್ಲಿ ಅನುಭವಿಸಬಹುದಾದ ಅನೇಕ ಸಂತೋಷದ ಪಟ್ಟಿಗಳನ್ನು ತಯಾರಿಸಿ ಅವುಗಳ ಕನಸು ಕಾಣ್ತಾ ರಜೆಯ ರುಜುತ್ವವನ್ನು ಅನುಭವಿಸುತ್ತಿದ್ದೇವು. ಆದರೆ ಆಗಿನ ಕನಸುಗಳೆಂದರೆ  ಗಾಳಿಪಟ ಸ್ಪರ್ಧೆ, ಬೆಟ್ಟದಲ್ಲಿ ಜೀರಂಗಿ ಹಿಡಿದು ಆಡಿಸುವುದು, ಗೋಲಿ, ಗಜಗ ಆಡುವುದು, ಚಿನ್ನಿದಾಂಡು, ಅಪ್ಪನ ಜೊತೆ ನದಿಯಲ್ಲಿ ಈಜು ಕಲಿಯುವುದು, ಸಂಬಂಧಿಕರ ಊರುಗಳಿಗೆ ಸುತ್ತಾಟ, ಅಜ್ಜ ಅಜ್ಜಿಯರಿಂದ ಕಥೆ ಕಲಿಯುವುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಸಂಬಂಧಿಕರ ಊರಿಗೆ ಸುತ್ತಿದಾಗ ಅಲ್ಲಿ ನೀಡುತ್ತಿದ್ದ ಹಣ ಸಂಗ್ರಹಿಸಿ ಹುಂಡಿಗಾಕಿ ಅದರಲ್ಲಿ ಶಾಲೆಗೆ ಬೇಕಾಗಿದ್ದನ್ನು ತೆಗೆದುಕೊಳ್ಳುವುದು,  ಜಾತ್ರೆ ಹಾಗೂ ಉತ್ಸವಗಳಲ್ಲಿ ನಾಟಕವನ್ನು ನೋಡಿ ಸಂಭ್ರಮಿಸುವ ಸಂತೋಷಕ್ಕೆ ಪಾರವೇ ಇರಲಿಲ್ಲ. ರಜೆಯ ರಚನಾತ್ಮಕತೆಯಲ್ಲಿ ಶೈಕ್ಷಣಿಕ  ಔಪಚಾರಿಕತೆ ಅಷ್ಟೊಂದು ಪ್ರಮುಖವಾಗಿರಲಿಲ್ಲ. ಅದರಲ್ಲಿಯೇ ಅನೌಪಚಾರಿಕ ಶಿಕ್ಷಣ ಪಡೆದು ಮನಸ್ಸು ಹಾಗೂ ಮೆದುಳನ್ನು ರಜೆಯಲ್ಲಿ ಪ್ರಫುಲ್ಲಿತಗೊಳಿಸಿಕೊಂಡು ನಾವು ಕಲಿಕೆಗೆ ಸಿದ್ಧರಾಗುತ್ತಿದ್ದೇವು. ಆದರೆ ರಜೆಯನ್ನು ಶೈಕ್ಷಣಿಕವಾಗಿ ಹೀಗೆ ಬಳಸಬೇಕೆಂಬ ಅರಿವಿಲ್ಲದೆ ಕಳೆದಿದ್ದೇವು.

ಇಂದಿನ ಹಾಗೆ ಮೊಬೈಲ್, ದೂರದರ್ಶನ ಇವುಗಳು ಅಷ್ಟೊಂದು ಸನಿಹಕ್ಕೆ ಲಭ್ಯವಿರಲಿಲ್ಲ. ಆದರೆ ಇಂದು ಪ್ರತಿ ಮನೆಗಳಲ್ಲೂ ಇವುಗಳ ಲಭ್ಯತೆಯಿಂದಾಗಿ ಮಕ್ಕಳು ಹೊರಾಂಗಣ ಕ್ರೀಡೆ ಹಾಗೂ ಮನರಂಜನೆಗಿಂತ ಓಳಾಂಗಣ ಕ್ರೀಡೆಗಳಿಗೆ ಮಹತ್ವ ಕೊಟ್ಟು ಕೈಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಗೇಮ್ ಜೊತೆ ಮಕ್ಕಳೆಲ್ಲರೂ ಮನೆಯೊಳಗೆ ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಇದು ಮಕ್ಕಳಲ್ಲಿ ಕಲಿಕೆ ಉಂಟು ಮಾಡಿದರೂ, ಮತ್ತೊಂದು ರೀತಿಯಲ್ಲಿ ಮಕ್ಕಳನ್ನು ಏಕಾಂಗಿಗಳನ್ನಾಗಿ ಹಾಗೂ ಕೆಲವು ಬಾರಿ ಮಾನಸಿಕ ಒತ್ತಡಕ್ಕೆ ಸಿಲುಕುವ ಪಬ್ಜಿ, ಬ್ಲೂವೆಲ್ ನಂತ ಗೇಮ್ ನೋಡಿದಾಗ ಮಕ್ಕಳು ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚು  ಪೋಷಕರು ಮಕ್ಕಳಿಗೆ ಮೊಬೈಲ್ ನೀಡಿದಾಗ  ಗಮನ ನೀಡಬೇಕು.

ಈ ಶೈಕ್ಷಣಿಕ ರಜೆ ಮಕ್ಕಳ ಕಲಿಕೆ ನಿರಂತರವಾಗಲು ಶ್ರಮಿಸಲೆಬೇಕಾಗಿದೆ. ಮನೋವೈಜ್ಞಾನಿಕವಾಗಿ ಕಲಿಕೆ ಹೆಚ್ಚು ಆಸಕ್ತಿಯಾಗಿ ಹಾಗೂ ಹೆಚ್ಚು ಪರಿಪಕ್ವ ಕಲಿಕೆಯಾಗಬೇಕಾದರೆ ಕಲಿಕೆಯ ನಡುವೆ ಸ್ವಲ್ಪ ಅಂತರವಿರಬೇಕೆ ಹೊರತು ದೀರ್ಘ ಅಂತರವಲ್ಲ. ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್ 19 ಭಯದಿಂದಾಗಿ ಶಾಲೆಗಳಿಗೆ ರಜೆ ನೀಡಿ ಮಕ್ಕಳು ಗಳಿಸಬೇಕಾದ  ಕಲಿಯಬೇಕಾದ ಸಾಮರ್ಥ್ಯಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಮಕ್ಕಳು ಒತ್ತಡರಹಿತವಾಗಿ ಮೋಜಿನ ಜೊತೆ ಕಲಿಯುವಂತೆ ರಜೆಯನ್ನು ರೂಪಿಸಬೇಕಿದೆ. ಏಪ್ರಿಲ್ 9 ರಿಂದ ಮೇ 15ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. ಈ ರಜಾ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತು, ಹಲವಾರು ಚಟುವಟಿಕೆ/ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಅವರ ಕಲಿಕೆಯನ್ನು ಆಸಕ್ತಿದಾಯಕವಾಗಿಸಿ. ಮುಂದಿನ ಕಲಿಕೆಗೆ ಸಜ್ಜುಗೊಳಿಸಬೇಕಾಗಿದೆ.

ಪ್ರವಾಸ : ಮಕ್ಕಳಿಗೆ ಬೇಸರವಾಗಿರುವುದನ್ನು ಹೋಗಲಾಡಿಸಬೇಕಾದರೆ ಮಕ್ಕಳಿಗೆ ಮೋಜು ಹಾಗೂ ಕುತೂಹಲ ಹುಟ್ಟಿಸುವ ಸ್ಥಳಗಳ ಪ್ರವಾಸ ಮಾಡಿ. ಇಲ್ಲಿ ಮಕ್ಕಳಿಗೆ ತೋರಿಸುವ ಸ್ಥಳವು ಅವರಲ್ಲಿ ಐತಿಹಾಸಿಕ, ವೈಜ್ಞಾನಿಕ ಹಾಗೂ ಕಲಾತ್ಮಕ ಜ್ಞಾನವನ್ನು ಹೆಚ್ಚಿಸುವಂತೆ ಅವರಿಗೆ ಪ್ರಶ್ನೆಗಳೊಂದಿಗೆ ಮಾರ್ಗದರ್ಶನ ಮಾಡಬೇಕು. ನಾವೆಲ್ಲರೂ ಭೇಟಿ ಕೊಟ್ಟ ಸ್ಥಳದ ಬಗ್ಗೆ ಸಂಪೂರ್ಣ ಅರಿವು ಮಕ್ಕಳಿಗೆ ಮೂಡಿಸಬೇಕು. ಅಲ್ಲಿ ಎಲ್ಲ ವಿಷಯಗಳು ಮಗುವಿನ ಮನಸ್ಸನ್ನು ಮುಟ್ಟುತ್ತವೆ ಹಾಗೂ ತಾನು ಮುಂದೆ ನೋಡುವ ಎಲ್ಲ ಪ್ರವಾಸಗಳಿಗೆ ಒಂದು ಜ್ಞಾನ ಯೋಜನೆಯನ್ನು ರೂಪಿಸಿಕೊಳ್ಳುತ್ತದೆ.

ಹಿಂದೆ  ಕೂಡು ಕುಟುಂಬದ ಜೊತೆ ಅನೇಕ ಸಂಬಂಧಿಕರ ಊರುಗಳಿಗೆ  ಹೋಗುತ್ತಿದ್ದರು. ಇದರಿಂದ ವಿವಿಧ ಸ್ಥಳಗಳ ಪರಿಚಯ ಹಾಗೂ ವಿವಿಧ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳು, ಹಾಗೂ ಬದುಕಿನ ವೃತ್ತಿಗಳ ಅರಿವು ಸಿಗುತ್ತಿತ್ತು. ಆದರೆ ಇಂದು ನಾವು ಅವಿಭಕ್ತ ಕುಟುಂಬಗಳಾಗಿ ಎಲ್ಲೊ ಒಂದು ಕಡೆ ಸಂಬಂಧಗಳಿಂದ ದೂರವಾಗುತ್ತಿದ್ದೇವೆ. ಮಕ್ಕಳಿಗೆ ಕಷ್ಟಗಳ ಅರಿವಿಲ್ಲದೆ ಸಣ್ಣ ವಿಷಯವನ್ನು ದೊಡ್ಡದಾಗಿಸುವ ಮನೋಭಾವ ಹಾಗೂ ಏಕಾಂಗಿತನ ರೂಪಿತವಾಗುತ್ತಿದೆ. ಮಕ್ಕಳನ್ನು ಈ ಸಂಬಂಧಿಕರ ಮನೆಗಳಿಗೆ ಹೋಗಿ ಆ ಬಾಂಧವ್ಯ ಹಾಗೂ ಪ್ರೀತಿಯನ್ನು ತೋರಿಸಿ ಜೀವನವನ್ನು ಕಲಿಸಬೇಕು.

ದಿನಚರಿ ಬರೆಯುವ ಹವ್ಯಾಸ: ಮಕ್ಕಳು ರಜಾ ದಿನಗಳಲ್ಲಿ ಪ್ರತಿದಿನ ಏನು ಮಾಡಿದರು ಅದರಿಂದ ಅವರ ಮನಸ್ಸು ಹಾಗೂ ದೇಹದ ಮೇಲೆ ಆದ ಲಾಭಗಳನ್ನು ಬರೆಯಲು ತಿಳಿಸಬೇಕು. ಇದು ಮಗುವಿಗೆ ಸ್ವತಂತ್ರವಾಗಿ ಬರೆಯುವ ಸೃಜನಶೀಲ ಶಕ್ತಿಯನ್ನು ರೂಪಿಸುತ್ತದೆ. ಇದನ್ನು ಬರೆಯಲು ಪೋಷಕರ ಮಾರ್ಗದರ್ಶನ ಅತ್ಯಗತ್ಯ. ಜೊತೆಯಲ್ಲಿ ಮಗು ಹೇಳಿಕೊಳ್ಳದಿರುವ ವಿಚಾರಗಳನ್ನು ಹಂಚಿಕೊಳ್ಳಲು ದಿನಚರಿ ಬರಹ ಉತ್ತಮವಾಗುತ್ತದೆ. ಇದು ಜೀವನದ ದಿನಚರಿಯಾಗಲು ಪೂರಕವಾಗುತ್ತದೆ.

ಓದುವ ಕೋಣೆ/ಸ್ಥಳವನ್ನು ವ್ಯವಸ್ಥಿತವಾಗಿಸುವುದು: ಓದುವ ಕೊಠಡಿಯಲ್ಲಿ ಅನುಪಯುಕ್ತವಾಗಿರುವ ವಸ್ತುಗಳನ್ನು ತೆಗೆದು ಓದುವ ಪರಿಸರ ಮೂಡಿಸುವ ಅಂಶಗಳಿಗಷ್ಟೆ ಆದ್ಯತೆ ಸಿಗುವಂತೆ ಜೋಡಿಸಬೇಕು. ಮನಸ್ಸು ಕಲಿಕೆಯೊಳಗೆ ತನ್ಮಯಿಯಾಗಲು ನಮ್ಮ ಕೊಠಡಿ ಹಾಗೂ ಸ್ಥಳ ಕಾರಣವಾಗುತ್ತದೆ. ಉತ್ತಮ ಸಾಧಕರ ನುಡಿಗಳು ಪ್ರೇರೇಪಿಸಲು ಸೂಕ್ತವಾಗುವಂತೆ ಸಜ್ಜುಗೊಳಿಸಿಕೊಳ್ಳಬೇಕು.ಪುಸ್ತಕಗಳು ಸೂಕ್ತ ಸಮಯಕ್ಕೆ ಸಿಗುವಂತೆ ಹೊಂದಿಸುವುದು.

ಹಿರಿಯ ವಯಸ್ಸಿನವರು ಕಿರಿಯ ವಯಸ್ಸಿನವರಿಗೆ ಗೃಹಪಾಠ/ ಕಲಿಸುವುದು: ರಜೆ ಇರುವುದರಿಂದ ಕಿರಿಯರಿಗೆ ಕಲಿಸಿಕೊಡುವುದರಲ್ಲಿ ತೊಡಗಿದಾಗ ಅವರಿಗೆ ಹೇಳಿಕೊಡಲು ನಾವು ಪೂರ್ವಾಭ್ಯಾಸ ಮಾಡುತ್ತೇವೆ ಹಾಗೂ ಕಲಿತ ಕಲಿಕೆ ಅರ್ಥಪೂರ್ಣ ಕಲಿಕೆಯಾಗಿ ಮಾರ್ಪಟ್ಟು ಅದು ದೀರ್ಘಕಾಲ ಉಳಿಯಲು ಸಾಧ್ಯವಾಗುತ್ತದೆ. ಡಾ.ಎ.ಪಿ.ಜೆ ಅಬ್ದುಲ್ ಕಲಾಂ  Each one teach one’ ಅಂತ ಹೇಳಿದ್ದಾರೆ. ಇದರ ಉದ್ದೇಶ ಬೇರೆಯವರಿಗೆ ಕಲಿಸುವುದರಿಂದ ನಾವು ಹೆಚ್ಚು ಕಲಿಯುತ್ತೇವೆ.

ಗ್ರಂಥಾಲಯದ ಸದಸ್ಯರಾಗಬೇಕು: ನಮ್ಮ ವ್ಯಾಪ್ತಿಯಲ್ಲಿರುವ ಗ್ರಂಧಾಲಯಕ್ಕೆ ಭೇಟಿ ಕೊಟ್ಟು ಆ ಜ್ಞಾನಖಜಾನೆಯಲ್ಲಿ ಎಷ್ಟು ವಿಷಯ ಪ್ರಕಾರದ ಪುಸ್ತಕಗಳಿವೆ, ಎಷ್ಟು ಪತ್ರಿಕೆಗಳು, ಮಾಸಿಕ ಪತ್ರಿಕೆಗಳು ಲಭ್ಯವಿವೆ ಎಂಬ ಸೂಕ್ಷ್ಮ ಅವಲೋಕನ ಮಾಡಿ, ಆ ಗ್ರಂಥಾಲಯದ ಸದಸ್ಯರಾಗಿ ಅಲ್ಲಿರುವ ಪುಸ್ತಕಗಳ ಸದುಪಯೋಗಗಳನ್ನು ಪಡೆದುಕೊಳ್ಳಿ. ಗ್ರಂಥಾಲಯ ವಾಚನ ಮಾಡುವ ಅವಧಿ  ದೈನಂದಿನ ಹವ್ಯಾಸವಾದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಸ್ಫೂರ್ತಿಯಾಗಿ ಓದುವ ಹವ್ಯಾಸವನ್ನು ಹೆಚ್ಚಿಸುತ್ತದೆ.

ಹೊಸ ಭಾಷೆಯನ್ನು ಕಲಿಯಿರಿ: ವಿಶ್ವದಲ್ಲಿ ಅನೇಕ ಭಾಷೆಗಳಿವೆ. ಅದರಲ್ಲಿ ನಮಗೆ ಬರುವ ಭಾಷೆಯನ್ನು ಹೊರತುಪಡಿಸಿ ಬೇರೊಂದು ಭಾಷೆಯನ್ನು ಕಲಿಯಿರಿ. ಈ ಮೂಲಕ ಸಮಯದ ಉಪಯೋಗದ ಜೊತೆ ಬಹುಭಾಷಾ ಚತುರರಾಗಲು ಅವಕಾಶವಾಗುತ್ತದೆ. ಆದ್ದರಿಂದ ತಮಗೆ ಇಷ್ಟವಾದ ಭಾಷೆಯನ್ನು ಕಲಿಯಿರಿ.

ಪರಿಸರ ರಕ್ಷಣೆ: ಮನೆಯ ಆವರಣದಲ್ಲಿ ಸಣ್ಣ ಸಸ್ಯಗಳ ಉದ್ಯಾನ ನಿರ್ಮಿಸಿ ಹಸಿರುಮಯವಾಗಿಸಿ ಹಾಗೂ ಪರಿಸರದ ಸಂರಕ್ಷಣೆಗಾಗಿ ಅಗತ್ಯವಾದ ಜಾಗೃತಿ ತಂಡಗಳಲ್ಲಿ ಭಾಗವಹಿಸಿ. ಈ ಮೂಲಕ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು, ಪೋಷಕರು ಸಹ ಕ್ರಿಯಾಶೀಲರಾಗಿ ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕು.

ವಿವಿಧ ಬೇಸಿಗೆ ಶಿಭಿರಗಳಲ್ಲಿ ಭಾಗವಹಿಸಿ: ಮಕ್ಕಳಿಗಾಗಿಯೇ ಅನೇಕ ಬೇಸಿಗೆ ಶಿಬಿರಗಳನ್ನು ವಿವಿಧ ಚಟುವಟಿಕೆಗಳ ವಿವಿಧ ಸಂಸ್ಥೆಗಳವರು ಕಾರ್ಯಕ್ರಮಗಳನ್ನು ರೂಪಿಸಿರುತ್ತಾರೆ. ರಂಗಕಲೆ, ಬರವಣಿಗೆ ಕೌಶಲ್ಯ ವೃದ್ಧಿ,ಸ್ಪರ್ಧಾತ್ಮಕ ಪರೀಕ್ಷಾ ತಯಾರಿ, ನೃತ್ಯ ತರಭೇತಿ, ಕಸೂತಿ ತರಭೇತಿ, ಸ್ಪೀಕಿಂಗ್ ಕೋರ್ಸ್, ಹಾಡುಗಾರಿಕೆ ತರಭೇತಿ, ರಕ್ಷಣಾ ತರಬೇತಿ  ಕರಾಟೆ, ಕ್ರೀಡಾ ತರಬೇತಿ, ವ್ಯಕ್ತಿತ್ವ ವಿಕಾಸ ತರಭೇತಿ. ಚಿತ್ರಕಲೆ, ಸ್ವಿಮ್ಮಿಂಗ್, ಸೈಕ್ಲಿಂಗ್ ಇತ್ಯಾದಿ ಇವುಗಳಲ್ಲಿ ಮಕ್ಕಳನ್ನು ತೊಡಗಿಸಿ ಅವರಲ್ಲಿ ಪ್ರತಿಭೆಯನ್ನು ಅರಳಿಸಲು ಹಾಗೂ ಪ್ರದರ್ಶಿಸಲು ಅವಕಾಶವನ್ನು ಮಾಡಬೇಕು. ಯಾವುದೇ ತರಭೇತಿ ಜೀವನವನ್ನು ಸುಲಭವಾಗಿ ಜಯಿಸಲು ಹಾಗೂ ಆಸಕ್ತಿದಾಯಕ ಕಲಿಕೆಯಾಗಲು ಅನುಕೂಲವಾಗುವಂತಾಗಬೇಕು.

ಚಲನಚಿತ್ರಗಳ ವೀಕ್ಷಣೆ: ನಮ್ಮ ನಾಡು ನುಡಿ ಸಂಸ್ಕೃತಿ ಹಾಗೂ ಧನಾತ್ಮಕ ಸಂದೇಶ ನೀಡುವಂತ ಐತಿಹಾಸಿಕ ಹಾಗೂ ವ್ಯಕ್ತಿ ಚಿತ್ರದ ಚಲನಚಿತ್ರಗಳನ್ನು ವೀಕ್ಷಿಸಬೇಕು. ಕುಟುಂಬದವರೆಲ್ಲರೂ ಮಗುವಿನ ಜೊತೆ ನೋಡುತ್ತಾ ಅದರ ಮಹತ್ವವನ್ನು ಮಧ್ಯದಲ್ಲಿ ಪ್ರಶ್ನಿಸುತ್ತಾ ಸಾಗಿದಲ್ಲಿ ಮಗು ಸಕ್ರಿಯವಾಗಿ ವೀಕ್ಷಣೆಯಲ್ಲಿ ಪಾಲ್ಗೊಳ್ಳುತ್ತದೆ. ವೈವಿಧ್ಯಮಯ ಪ್ರೇರಣಾ ಚಲನಚಿತ್ರಗಳಿರುವುದರಿಂದ ಪೋಷಕರ ಮಾರ್ಗದರ್ಶನ ಅಗತ್ಯವಾಗಿದೆ.

ಕೌಶಲಭರಿತ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು: ಮಣ್ಣಿನಲ್ಲಿ ಮಾದರಿಗಳ ತಯಾರಿಕೆ, ವ್ಯರ್ಥ ವಸ್ತುಗಳಿಂದ ಆಕರ್ಷಕ ವಸ್ತುಗಳ ರಚನೆ, ಗಾಳಿಪಟಗಳನ್ನು ವಿಭಿನ್ನವಾಗಿ ತಯಾರಿಸಿ ಸೂಕ್ತ ಸ್ಥಳದಲ್ಲಿ ಹಾರಿಸುವುದು, ಜನಪದ ಕಲೆಯಾದ ವರ್ಲಿ ರಚನೆ, ಕಸೂತಿ ಕಲೆ ಹೀಗೆ ವಿಭಿನ್ನ ಕೌಶಲ್ಯಗಳನ್ನು ಮನೆಯಲ್ಲಿ ಮಗುವಿಗೆ ಕಲಿಸಿಕೊಡಬೇಕು. ಹಳೆಯ ಫೋಟೋಗಳನ್ನು ವರ್ಷಗಳನುಸಾರ ವ್ಯವಸ್ಥಿತವಾಗಿ ಆಲ್ಬಮ್ ನಲ್ಲಿ ಜೋಡಿಸುವುದು ಹಾಗೂ ಅವುಗಳಿಗೆ ಟೈಟಲ್ ಸ್ಲಿಪ್ ಹಾಕುವುದು.

ಪತ್ರ ಬರಹ: ರಜಾ ಆವಧಿಯಲ್ಲಿ ಮಕ್ಕಳೆಲ್ಲರೂ ತಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಪತ್ರವನ್ನು ಬರೆಯಬೇಕು. ಅದರಲ್ಲಿ ನಿಮ್ಮ ವೈಯಕ್ತಿಕ ಭಾಷೆ, ಕಲೆ ಎಲ್ಲವೂ ಮೂಡಲಿ, ಇದು ನಮಗೆ ಮಾತನಾಡುವುದಕ್ಕಿಂತ ಬರೆಯುವುದು ಎಷ್ಟು ಕಷ್ಟ ಹಾಗೂ ಭಾವನೆಗಳನ್ನು ಶಬ್ಧರೂಪದಲ್ಲಿ ಸಂಗ್ರಹಿಸಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಹಿತ್ಯಿಕ ಹವ್ಯಾಸಗಳ ವೃದ್ಧಿ: ಪುಸ್ತಕ ವಾಚನದ ಜೊತೆ ಕವನ, ಕಥೆ, ಪ್ರಬಂಧಗಳನ್ನು ರಚಿಸುವ ಹವ್ಯಾಸದ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿರಿ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಂದೆ ಮಹಾನ್ ಸಾಹಿತಿಗಳಾಗುವ ಬುನಾದಿಯನ್ನು ಹಾಕಬೇಕು.

ಶಾಲಾ ಗೃಹಾಭ್ಯಾಸ ಚಟುವಟಿಕೆಗಳು: ರಜಾ ಅವಧಿಗೆ ನೀಡಿರುವ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಹಾಗೂ ಮುಂದಿನ ವರ್ಷ ಅಭ್ಯಸಿಸುವ ತರಗತಿ ಪುಸ್ತಕಗಳಿಂದ ನಿಮಗಿಷ್ಟವಾದ ಪಾಠಗಳನ್ನು ಪ್ರತಿದಿನವು ನಿಮಗಿಷ್ಟವಾಗುವಷ್ಟು ಪುಟಗಳನ್ನು ಅಂದವಾಗಿ, ತಪ್ಪಿಲ್ಲದೆ ಬರೆಯಿರಿ ಹಾಗೂ ಒಂದು ಪುಟ ಬರೆಯಲು ಎಷ್ಟು ನಿಮಿಷಗಳನ್ನು ತೆಗೆದುಕೊಂಡೆ ಹಾಗೂ ಎಷ್ಟು ಶಬ್ಧಗಳನ್ನು ಬರೆದಿರುವೆ ಎಂಬುದನ್ನು ದಿನಾಂಕವಾರು ಬರೆದಿಡುತ್ತ ಹೋಗಿ ಇದು ನಿಮ್ಮ ಬರಹ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಓದುಗಾರಿಕೆಯಲ್ಲಿಯೂ ಸಹ ನಾನು ಹತ್ತು ನಿಮಿಷದಲ್ಲಿ ಎಷ್ಟನ್ನು ಓದಿರುವೆ ಹಾಗೂ ಅದರಿಂದ ಏನನ್ನು ತಿಳಿದುಕೊಂಡಿರುವೆ ಎಂಬುದನ್ನು ಬರೆದು ಅಂತರಾವಲೋಕನ ಮಾಡಿಕೊಳ್ಳಿ. ನಿಮಗೆ ಕ್ಲಿಷ್ಟವೆನಿಸಿದ ವಿಷಯಗಳನ್ನು ಬರೆದು ಅಭ್ಯಸಿಸಿ, ಅರ್ಥವಾಗದಿರುವುದನ್ನು ನಿಮ್ಮ ಗುರುಗಳಿಂದ ತಿಳಿದುಕೊಳ್ಳಬೇಕು.

ಆರೋಗ್ಯ ರಕ್ಷಣೆ: ಬೇಸಿಗೆಯಾಗಿರುವುದರಿಂದ ಮಕ್ಕಳು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲಿ. ಪ್ರತಿದಿನ ಬೆಳಗ್ಗೆ ವ್ಯಾಯಾಮ ಹಾಗೂ ಯೋಗಾಭ್ಯಾಸಗಳು ದೈಹಿಕ ಸದೃಡತೆಗೆ ಸೂಕ್ತ. ಜೊತೆಯಲ್ಲಿ ಮಗು ಪೂರ್ಣ ಅವಧಿ ಮನೆಯಲ್ಲಿಯೆ ಇರುವುದರಿಂದ ನಿಯಮಿತವಾಗಿ ಆಹಾರ ಸೇವಿಸುವ ಅಭ್ಯಾಸವನ್ನು ಮಾಡಿಸಿ. ಕೆಲವು ಮಕ್ಕಳು ಜಂಕ್ ಫುಡ್ ಗಳಿಗೆ ಹೊಂದಿಕೊಂಡಿರುತ್ತವೆ ಈಗ ಅವರಿಗೆ ರುಚಿಕರ ಅಡುಗೆಗಳನ್ನು, ಅವರಿಗಿಷ್ಟವಾದ ತಿನಿಸುಗಳನ್ನು ಮನೆಯಲ್ಲಿಯೆ ಮಾಡಿ ತಿನ್ನಿಸುವುದರ ಮೂಲಕ ಮನೆಯೂಟವನ್ನು ಹೆಚ್ಚು ಆಧರಿಸುವ ಅಭ್ಯಾಸ ರೂಡಿಯಾಗಲಿ.

ದಿನಪತ್ರಿಕೆ ವಾಚನ: ಪ್ರತಿದಿನವು ಸುದ್ಧಿ ಪತ್ರಿಕೆಗಳನ್ನು ಓದಬೇಕು. ಇದರಲ್ಲಿ ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರೀಯ ವಿದ್ಯಮಾನಗಳನ್ನು  ಒಂದು ನೋಟ್ ಪುಸ್ತಕದಲ್ಲಿ ಪಟ್ಟಿ ಮಾಡಬೇಕು. ಇದು ಮುಂದೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ  ಜ್ಞಾನವನ್ನು ಹೆಚ್ಚಿಸುತ್ತದೆ.

ಮೇಲ್ಕಂಡ ಅಂಶಗಳಲ್ಲಿ ಗುರಿಗನುಸಾರ ಪೋಷಕರು ಮಕ್ಕಳಿಗೆ ರಜಾ ಅವಧಿಯನ್ನು ಒತ್ತಡ ರಹಿತವಾಗಿ ಹಾಗೂ ಆಸಕ್ತಿದಾಯಕವಾಗಿ ಬಳಸಿ, ಅವರ ಕಲಿಕೆ ನಿರಂತರವಾಗುವಂತೆ ನೋಡಿಕೊಳ್ಳಬೇಕು. ಶಾಲೆಗಳಲ್ಲಿ ಶಿಕ್ಷಕರು ಸಹ ಶಾಲಾ ರಜಾ ಘೋಷಣೆಯ ದಿನ ಶಿಕ್ಷಕರು ರಜೆಯನ್ನು ಅರ್ಥಪೂರ್ಣವಾಗಿ ವಿವಿಧ ರೀತಿಯ ಕಲಿಕಾ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಬೇಕು. ಮಕ್ಕಳು ಮೊಬೈಲ್ ಹಾಗೂ ಟಿವಿ ಲೋಕದಿಂದ ಹೊರಬಂದು ರಜೆಯನ್ನು ಕಲಿಕೆಯೊಂದಿಗೆ ವಿನೋದವಾಗಿ, ಸಂತೋಷದಾಯಕವಾಗಿ ಅಮೂಲ್ಯವಾದ ರಜಾ ಸಮಯವನ್ನು ಬಳಸಿಕೊಳ್ಳಬೇಕು. ವರ್ಷದ 365 ದಿನಗಳಲ್ಲಿ ಸಾಮಾನ್ಯವಾಗಿ 223 ಶಾಲಾ ಕರ್ತವ್ಯದ ದಿನಗಳಿರುತ್ತವೆ, ಶಾಲೆಯಿಲ್ಲದಿರುವ  ರಜಾ ದಿನಗಳಲ್ಲಿ ಮಕ್ಕಳು ಕಳೆಯುವ ಸಮಯ ಕಲಿಕೆಯಾಗುವಂತೆ ನಾವೆಲ್ಲರೂ ಪರಿವರ್ತಿಸಬೇಕಾಗಿದೆ.

ಜಗದೀಶ ಬಳೆಗಾರ, ಕೆ.ಇ.ಎಸ್.

ಕ್ಷೇತ್ರ ಸಮನ್ವಯಾಧಿಕಾರಿ,

ಕ್ಷೇತ್ರ ಸಂಪನ್ಮೂಲ ಕೇಂದ್ರ.

ಹಿರೇಕೆರೂರ. ಹಾವೇರಿ (ಜಿ)

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.