ಕಾಮಿಡಿ ಕಿಲಾಡಿ ಲೋಕೇಶ್ ಈಗ ಹೀರೋ
Team Udayavani, Jun 22, 2017, 4:24 PM IST
ಕಿರುತೆರೆಯಲ್ಲಿ ಮೂಡಿ ಬಂದ “ಕಾಮಿಡಿ ಕಿಲಾಡಿಗಳು’ ಎಂಬ ಕಾಮಿಡಿ ಶೋನಲ್ಲಿ ಎಲ್ಲರನ್ನೂ
ನಗಿಸಿ, ಸೈ ಎನಿಸಿಕೊಂಡ ಪ್ರತಿಭೆ ಲೋಕೇಶ್ ಕುಮಾರ್. ಅವರೀಗ ಸಿನಿಮಾವೊಂದರ ಹೀರೋ ಆಗಿದ್ದಾರೆ. ಹೌದು, “ನಾವೇ ಭಾಗ್ಯವಂತರು’ ಎಂಬ ಚಿತ್ರಕ್ಕೆ ಲೋಕೇಶ್ ಕುಮಾರ್ ನಾಯಕರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ.
ಚಿತ್ರದಲ್ಲಿ ಮೂವರು ನಾಯಕರಿದ್ದು, ಆ ಪೈಕಿ ಲೋಕೇಶ್ಕುಮಾರ್ ಕೂಡ ಒಬ್ಬರು. “ನೆನಪಿದೆಯಾ’ ಚಿತ್ರದ ನಾಯಕ ಶ್ರವಂತ್ ಹಾಗೂ ಕಿರುತೆರೆಯ ನಟ ಸೂರಜ್ ಕೂಡ ನಾಯಕರಾಗಿ ನಟಿಸುತ್ತಿದ್ದಾರೆ. ಈ ಮೂವರು ನಾಯಕರಿಗೆ ದಿವ್ಯಾ, ಶಿಲ್ಪ ರೈ, ಚಂದನ್ ಮೂವರು ನಾಯಕಿಯರೂ ಇದ್ದಾರೆ.
ಎಂ. ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ತೊಡಗಿರುವ ಹರಿಕೃಷ್ಣ, “ಮಂಗಾಟ’ ಚಿತ್ರ ಸೇರಿದಂತೆ ಹಲವು ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಇದು ಮೂವರು ನಿರೊದ್ಯೋಗಿ ವಿದ್ಯಾವಂತರ ಕಥೆ ಹೊಂದಿರುವ ಸಿನಿಮಾ.
ಬೆಂಗಳೂರು,ನೆಲಮಂಗಲ, ಕುಮಟಾ, ಮಂಗಳೂರು ಹಾಗೂ ಹೊನ್ನಾವರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ ನಿರ್ಮಾಪಕ ಇ. ಕೃಷ್ಣಪ್ಪ ಅವರು ಅಡಕಮಾರನಹಳ್ಳಿಯ ಬೈಲಾಂಜನೇಯ ದೇವಸ್ಥಾನದಲ್ಲಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಬಿ. ನಾರಾಯಣರಾವ್ ಕ್ಯಾಮೆರಾಗೆ ಚಾಲನೆನೀಡಿದರು.
ಚಿತ್ರದಲ್ಲಿ ಶ್ರೀನಾಥ್, ರಾಮಕೃಷ್ಣ, ಎಸ್.ಮಹೇಂದರ್, ಸುಚೇಂದ್ರ ಪ್ರಸಾದ್, ಪ್ರವೀಣ್,ಗೀತಾಭಟ್, ನಾರಾಯಣ ಸ್ವಾಮಿ, ರತನ್ತೇಜ ಇತರರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಎಂ.ಪ್ರಕಾಶ್ ಕುಮಾರ್ ನಿರ್ಮಾಪಕರು. ಕುಮಾರ್ಗೌಡ ಛಾಯಾಗ್ರಹಣವಿದೆ. ಬಸವಣ್ಣ ಮೆಳ್ಳಹಳ್ಳಿ ಸಂಗೀತ ಮತ್ತು ಸಾಹಿತ್ಯವಿದೆ. ಜೋನಿ ಹರ್ಷ ಸಂಕಲನ ಮಾಡಿದರೆ, ಆಂತೋನಿ ಸಂಭಾಷಣೆ ಬರೆದಿದ್ದಾರೆ.