ಸಾಮಾಜಿಕ ಏಕತೆಗೆ ಶಿವಾಜಿ ಕೊಡುಗೆ ಅನನ್ಯ: ಸಚಿವ ರೈ
Team Udayavani, Feb 20, 2017, 3:45 AM IST
ಮಂಗಳೂರು: ಅತ್ಯಂತ ಧೈರ್ಯಶಾಲಿಗಳೆಂದು ಗುರುತಿಸಿಕೊಂಡಿರುವ ಮರಾಠ ಸಮಾಜ ದೇಶ ರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ. ಇದೇ ಸಮಾಜದಲ್ಲಿ ಹುಟ್ಟಿದ ಶಿವಾಜಿ ಮಹಾರಾಜರು ರಾಷ್ಟ್ರದ ಸಾಮಾಜಿಕ ಏಕತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದ ಜಪ್ಪಿನಮೊಗರಿನಲ್ಲಿ ಆರ್ಯ ಯಾನೆ ಮರಾಠ ಸಮಾಜ ಸಂಘದ ವತಿಯಿಂದ ನಿರ್ಮಾಣಗೊಂಡ ಆರ್ಯ ಮರಾಠ ಭವನದ ಉದ್ಘಾಟನ ಸಮಾರಂಭದಲ್ಲಿ ಅವರು ರವಿವಾರ ಸ್ಮರಣ ಸಂಚಿಕೆ “ಆಯಾಮ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಿವಾಜಿ ಅವರ ಹೋರಾಟಗಳು ವ್ಯವಸ್ಥೆಯಲ್ಲಿ ಗಟ್ಟಿತನ ಕಾಣುವ ಉದ್ದೇಶ ಹೊಂದಿತ್ತೇ ವಿನಾ ಯಾವುದೇ ಧರ್ಮದ ವಿರುದ್ಧವಾಗಿ
ರಲಿಲ್ಲ. ಅವರ ಆದರ್ಶ ಪಾಲಿಸಿಕೊಂಡು ಬಂದಿರುವ ಮರಾಠ ಸಮಾಜವೂ ನಾಡಿಗೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು.
70 ಲಕ್ಷ ರೂ. ಅನುದಾನ
ಆರ್ಯ ಮರಾಠ ಭವನ ಉದ್ಘಾಟಿಸಿದ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಸೌಹಾರ್ದ ಸಮಾಜಕ್ಕೆ ಶಿವಾಜಿ ತಣ್ತೀಗಳು ಅನಿವಾರ್ಯ. ಅವರ ಆದರ್ಶಗಳಿಂದ ಬೆಳೆದಿರುವ ಸಮಾಜದ ಸಂಘಟನೆಗೆ ಭವನವೊಂದು ನಿರ್ಮಾಣವಾಗಿದ್ದು, ಇದಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನವಾಗಿ 70 ಲಕ್ಷ ರೂ. ನೀಡಿದೆ ಎಂದರು.
ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ ತಮ್ಮ ನಿಧಿಯಿಂದ ಭವನಕ್ಕೆ 2 ಲಕ್ಷ ರೂ. ಘೋಷಿಸಿದರು. ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ತಾನು ಈ ಹಿಂದೆ ಭವನಕ್ಕೆ 2 ಲಕ್ಷ ರೂ. ನೀಡಿರುವುದನ್ನು ನೆನಪಿಸಿಕೊಂಡರು. ಸಂಸದ ನಳಿನ್ಕುಮಾರ್ ಕಟೀಲು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಮನಪಾ ಕಾರ್ಪೊರೇಟರ್ಗಳಾದ ಸುರೇಂದ್ರ, ಪ್ರವೀಣ್ಚಂದ್ರ ಆಳ್ವ, ಸ್ಥಳೀಯ ಉದ್ಯಮಿ ಗಣೇಶ್ ಶೆಟ್ಟಿ ಗುಡ್ಡೆಗುತ್ತು, ಸಂಘದ ಅಧ್ಯಕ್ಷ ಎಂ. ದೇವೋಜಿ ರಾವ್ ಜಾಧವ್, ಸಮಾರಂಭ ಸಮಿತಿ ಪ್ರಧಾನ ಸಂಚಾಲಕ ಎಂ. ಯತೀಶ್ ಕುಮಾರ್ ಪಾಟೀಲ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಎ. ಯತೀಂದ್ರ ಬಹುಮಾನ್ ಸ್ವಾಗತಿಸಿದರು. ಸಂತೋಷ್ ಪಿ.ಎನ್. ಹಾಗೂ ದಿವ್ಯಾ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಕೆ. ಶ್ರೀಧರ ರಾವ್ ಬಹುಮಾನ್ ವಂದಿಸಿದರು.