ಸೇವಾ ಮನೋಭಾವನೆಯಿಂದ ಉತ್ತಮ ಕೆಲಸ
Team Udayavani, Apr 24, 2017, 1:05 PM IST
ಬನ್ನೂರು: ಕಣ್ಣು ಮಾನವನ ಪ್ರಮುಖವಾದ ಅಂಗವಾಗಿದ್ದು, ಬಹು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು ಎಂದು ಸಮಾಜಸೇವಕ ಮಹೇಂದ್ರ ಸಿಂಗ್ ಕಾಳಪ್ಪ ಹೇಳಿದರು.
ಪಟ್ಟಣದ ರೋಟರಿ ಶಾಲೆಯ ಆವರಣ ದಲ್ಲಿ ಕಾನ್ಸಿಂಗ್ಜೀ ರಾಜ್ಪುರೋಹಿತ್ ಸ್ಮರಣಾರ್ಥವಾಗಿ, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಬನ್ನೂರು ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಯಸ್ಸಾದಂತೆ ಹಲವರು ದೃಷ್ಟಿಯನ್ನು ಕಳೆದು ಕೊಂಡರೆ, ಮತ್ತೆ ಕೆಲವರು ಕೆಲಸದ ವೇಳೆ ಯಲ್ಲಿ ಸಂಭವಿಸುವ ಅಪಘಾತ ಗಳಿಂದ ತಮ್ಮ ದೃಷ್ಟಿ ಕಳೆದುಕೊಂಡು ತುಂಬು ಕಷ್ಟದ ಜೀವನವನ್ನು ನಡೆಸುತ್ತಿರುತ್ತಾರೆ ಎಂದರು.
ವಿವೇಕಾನಂದ ಶಾಲೆಯ ಟ್ರಸ್ಟಿ ಎಂ.ಪ್ರಕಾಶ್ ಮಾತನಾಡಿ, ಸೇವಾ ಮನೋಭಾವನೆಯಿಂದ ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಹಲವರ ಜೀವನಕ್ಕೆ ಬೆಳಕನ್ನು ನೀಡುವಂತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಾದದ್ದು ಎಂದು ಹೇಳಿದರು.
ಇಂದು ಎಷ್ಟೋ ಗ್ರಾಮಾಂತರ ಭಾಗ ದಲ್ಲಿ ವಿಚಾರದ ಕೊರತೆಯಿಂದ ಕಣ್ಣಿನ ತೊಂದರೆ ಇರುವವರು ಹಾಗೆ ಜೀವನ ನಿರ್ವಹಣೆ ಮಾಡುತ್ತಿದ್ದು, ಇಂತಹ ಸೇವಾ ಕಾರ್ಯಕ್ರಮಗಳಿಂದ ಅವರಿಗೆ ತುಂಬಾ ಉಪಯುಕ್ತವಾಗುತ್ತದೆ ಎಂದರು.
ಸುತ್ತಮುತ್ತಲಿನ ಗ್ರಾಮಗಳಾದ ಮಾಕನ ಹಳ್ಳಿ, ಮಾದಿಗಹಳ್ಳಿ, ಬಸವನಹಳ್ಳಿ, ಕೊಡಗಳ್ಳಿ, ಬೇವಿನಹಳ್ಳಿ, ಸೋಮನಾಥ ಪುರ, ರಂಗ ಸಮುದ್ರ, ಯಾಚೇನಹಳ್ಳಿ, ಅತ್ತಳ್ಳಿ, ಚಾಮನ ಹಳ್ಳಿ, ಅರಕೆರೆ, ಮಂಡ್ಯಕೊಪ್ಪಲು, ದಾಸೇಗೌಡನ ಕೊಪ್ಪಲು, ಗಾಡಿಜೊಗಿಹುಂಡಿ, ಬೀಡನಹಳ್ಳಿ ವಿವಿಧ ಗ್ರಾಮಗಳಿಂದ ಆಗಮಿಸಿ ಸುಮಾರು 300ಕ್ಕೂ ಹೆಚ್ಚು ಜನರು ತಮ್ಮ ಕಣ್ಣಿನ ತೊಂದರೆ ಪರೀಕ್ಷಿಸಿ ಕೊಂಡರೆ, 90 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
ಗೌರಿದೇವಿ ಕಾನ್ಸಿಂಗ್, ರಾಜೇಶ್ ಸಿಂಗ್, ಭಗವಾನ್ ಸಿಂಗ್, ರೋಟರಿ ಅಧ್ಯಕ್ಷ ಕೆಂಪೇಗೌಡ, ಡಾ. ವಿಜಯ್ಕುಮಾರ್, ಯೋಗೇಂದ್ರ, ರಂಗನಾಥ್, ಚಿದಾನಂದಾ, ಮನುನಾಗ್, ಮಹೇಶ್, ಮುರಳಿ ಇದ್ದರು.