ಸರಕಾರ ಮಾಡದೇ ಇದ್ದದ್ದಕ್ಕೆ ದಿಗ್ವಿಗೆ ಪಾರೀಕರ್ ಥ್ಯಾಂಕ್ಸ್
Team Udayavani, Apr 1, 2017, 2:22 AM IST
ಹೊಸದಿಲ್ಲಿ: ‘ಮಾನ್ಯ ದಿಗ್ವಿಜಯ ಸಿಂಗ್ ಅವರೇ ಗೋವಾದಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪನೆ ಮಾಡದೇ ಇದ್ದದ್ದಕ್ಕೆ ನಿಮಗೆ ಧನ್ಯವಾದ. ಹೀಗಾಗಿಯೇ ನನಗೆ ಬಿಜೆಪಿ ನೇತೃತ್ವದ ಸರಕಾರ ರಚನೆ ಮಾಡಲು ಸಾಧ್ಯವಾಯಿತು’ ಹೀಗೆಂದು ಹೇಳಿದ್ದು ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ ರಾಜ್ಯಸಭೆಗೆ ಶುಕ್ರವಾರ ಹಾಜರಾಗಿ ಧನ್ಯವಾದ ಸಮರ್ಪಣೆ ಮಾತುಗಳನ್ನಾಡುವ ಅವರು ಈ ಮಾತುಗಳನ್ನಾಡಿದರು.
ಅದಕ್ಕೆ ಕಾಂಗ್ರೆಸ್ ಸಂಸದರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತಲ್ಲದೆ, ಸದನ ಬಾವಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ, ದಿಗ್ವಿಜಯ ಸಿಂಗ್ ಆಕ್ಷೇಪಿಸಿದರು. ಇದರ ಜತೆಗೆ ರಕ್ಷಣಾ ಸಚಿವನಾಗಿದ್ದ ವೇಳೆ ಸಹಕಾರ ನೀಡಿದ, ಸಭಾಪತಿ, ಉಪಸಭಾಪತಿ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಪಾರೀಕರ್. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸಂಸದೆ ರಜಿನಿ ಪಾಟೀಲ್ ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆಯೇ ಪಾರೀಕರ್ ಸದನ ಪ್ರವೇಶಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ಗೋವಾ ಸಿಎಂ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.