ಜೈಲಲ್ಲಿರುವ ಎಲ್ಲ ಕೈದಿಗಳಿಗೆ ಸಮಾನ ಆಹಾರ: ಸಿಎಂ ಯೋಗಿ ಆದೇಶ
Team Udayavani, Apr 20, 2017, 3:56 PM IST
ಲಕ್ನೋ : ಉತ್ತರ ಪ್ರದೇಶದ ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ, ಅವರು ಬೇಕಿದ್ದರೆ ಸಣ್ಣ ಪುಟ್ಟ ಅಪರಾಧಗಳ ಕೈದಿಗಳೇ ಇರಲಿ ಅಥವಾ ಕ್ರಿಮಿನಲ್ ಡಾನ್ಗಳೇ ಇರಲಿ – ಅವರೆಲ್ಲರಿಗೂ ಜೈಲಿನಲ್ಲಿ ಒಂದೇ ಬಗೆಯ ಆಹಾರವನ್ನು ಕೊಡತಕ್ಕದ್ದು; ಯಾವುದೇ ತಾರತಮ್ಯ ಎಸಗಕೂಡದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಉನ್ನತ ಅಧಿಕಾರಿಗಳಿಗೆ ಅಪ್ಪಣೆ ಕೊಡಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿನ್ನೆ ಬುಧವಾರ ರಾಜ್ಯದಲ್ಲಿನ ಜೈಲುಗಳು, ಸುಧಾರಣಾ ಕೇಂದ್ರಗಳು ಮತ್ತು ಜಾಗೃತ ಇಲಾಖೆಗಳ ಪರಾಮರ್ಶೆ ಸಭೆಯ ನಡೆಸಿದ್ದ ವೇಳೆ ಈ ಆದೇಶವನ್ನು ಕೊಟ್ಟರು.
ರಾಜ್ಯದ ಜೈಲುಗಳಲ್ಲಿರುವ ಸಣ್ಣ ಪುಟ್ಟ ಕೈದಿಗಳು, ಡಾನ್ಗಳ ನಡುವೆ ಆಹಾರ, ಸೌಕರ್ಯ ಇತ್ಯಾದಿಗಳ ವಿಷಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ; ಕೆಲವು ದೊಡ್ಡ ಕೈದಿಗಳು, ಮಾಫಿಯಾ ಡಾನ್ಗಳು ಜೈಲಿನಲ್ಲಿ ಫೋನ್ ಸೌಕರ್ಯ ಹೊಂದಿದ್ದಾರೆ ಎಂಬ ವರದಿಗಳ ಆಧಾರದಲ್ಲಿ ಈ ಆದೇಶ ನೀಡಿದ ಮುಖ್ಯಮಂತ್ರಿ ಯೋಗಿ, ಜೈಲುಗಳಲ್ಲಿ ಮೊಬೈಲ್ ಫೋನ್ ಜಾಮರ್ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.