ಉತ್ಕಾಲ್ ಎಕ್ಸ್ಪ್ರೆಸ್ ರೈಲು ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ
Team Udayavani, Aug 21, 2017, 9:00 AM IST
ಮುಜಾಫರನಗರ: ಶನಿವಾರ 23 ಮಂದಿ ಯನ್ನು ಬಲಿತೆಗೆದುಕೊಂಡ ಉತ್ಕಾಲ್ ಎಕ್ಸ್ಪ್ರೆಸ್ ರೈಲು ದುರಂತಕ್ಕೆ ಸ್ಥಳೀಯ ಮಟ್ಟದಲ್ಲಿನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇನ್ನೊಂದೆಡೆ, ರೈಲ್ವೇ ಇಲಾಖೆ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ದುರಂತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಅವಘಡದ ವೇಳೆ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕಾರ್ಮಿಕರು ಹಳಿಯ ಒಂದು ಭಾಗವನ್ನು ಅಳವಡಿಸದೇ ಅರ್ಧಕ್ಕೆ ಎದ್ದು ಹೋಗಿದ್ದೇ ಬೋಗಿಗಳು ಹಳಿ ತಪ್ಪಲು ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ರೈಲ್ವೇ ಮಂಡಳಿ ಅಧ್ಯಕ್ಷ ಮೊಹಮ್ಮದ್ ಜಮ್ಶೆàದ್ ತಿಳಿಸಿ ದ್ದಾರೆ. ಅಲ್ಲದೆ, ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದಾಗ, ದುರಸ್ತಿ ಉಪಕರಣಗಳು ಹಳಿಯಲ್ಲೇ ಬಿದ್ದಿದ್ದವು ಎಂಬ ಮಾಹಿತಿಯನ್ನೂ ಅವರು ಹೊರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ದಿಲ್ಲಿ ವಲಯದ ಎಂಜಿನಿಯರಿಂಗ್ ವಿಭಾಗದ ಮೇಲೆ ದುರಂತದ ಹೊಣೆ ಹೊರಿಸಲಾಗಿದೆ. ಜತೆಗೆ, ಕರ್ತವ್ಯ ಲೋಪದ ಆರೋಪದಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ದುರಸ್ತಿ ಕಾರ್ಯಕ್ಕೆ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸುವುದಾಗಿ ಜಮ್ಶೆàದ್ ತಿಳಿಸಿದ್ದಾರೆ. ಇದೇ ವೇಳೆ, ರವಿವಾರ ಬೆಳಗ್ಗೆ 140 ಟನ್ ತೂಕದ ಹೈಟೆಕ್ ಕ್ರೇನ್ಗಳನ್ನು ಬಳಸಿ ಹಳಿತಪ್ಪಿದ ಬೋಗಿಗಳ ತೆರವು ಕಾರ್ಯಾ ಚರಣೆಯನ್ನು ನಡೆಸಲಾಗಿದೆ.
ಜಾಲತಾಣಗಳಲ್ಲಿ ಹರಿದಾಡಿದ ಆಡಿಯೋ ಕ್ಲಿಪ್
ರೈಲು ದುರಂತದ ಬೆನ್ನಲ್ಲೇ ರವಿವಾರ ಇಬ್ಬರ ಫೋನ್ ಸಂಭಾಷಣೆಯುಳ್ಳ ಆಡಿಯೋ ಕ್ಲಿಪ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. “ಹಳಿ ಯಲ್ಲಿ ವೆಲ್ಡಿಂಗ್ ಕೆಲಸ ನಡೀತಿತ್ತು. ಕಾರ್ಮಿಕರು ಹಳಿಯ ತುಂಡನ್ನು ಅಳವಡಿಸದೇ ಅರ್ಧದಿಂದಲೇ ಎದ್ದು ಹೋದರು. ಅಲ್ಲದೆ, ರಿಪೇರಿ ಕೆಲಸದ ವೇಳೆ ಹಾಕುವಂಥ ಕೆಂಪು ಬಾವುಟವನ್ನೂ ನೆಟ್ಟಿರಲಿಲ್ಲ. ಅದೇ ಸಮಯಕ್ಕೆ ರೈಲು ಬಂದಿದ್ದರಿಂದ ಅವಘಡ ನಡೆಯಿತು. ಈಗ ಸಿಕ್ಕಿಬಿದ್ದರೆ ಎಲ್ಲ ಅಧಿಕಾರಿಗಳ ಕೆಲಸಕ್ಕೂ ಕುತ್ತು ಬರುತ್ತದೆ,’ ಎಂಬ ಸಂಭಾಷಣೆ ಅದರ ಲ್ಲಿದೆ. ಈ ಕುರಿತೂ ಪರಿಶೀಲಿಸುವುದಾಗಿ ರೈಲ್ವೇ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.