ಉಗ್ರ ತಪ್ಪಿಸಿಕೊಳ್ಳಲು 45 ಲಕ್ಷ ಲಂಚ ? ತನಿಖೆಗೆ ಯೋಗಿ ಆದೇಶ
Team Udayavani, Sep 21, 2017, 11:40 AM IST
ಬರೇಲಿ : 2016ರ ನಭಾ ಜೈಲೈ ಬ್ರೇಕ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಖಾಲಿಸ್ಥಾನ್ ಉಗ್ರ ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯೋರ್ವರು 45 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಪಂಜಾಬ್ ಪೊಲೀಸ್ ಆರೋಪಿಸಿದೆ.
45 ಲಕ್ಷ ರೂ. ಲಂಚ ವ್ಯವಹಾರ ಕುದುರಿಸಲಾಗಿರುವ ಆಡಿಯೋ ಸಾಕ್ಷ್ಯವೊಂದನ್ನು ಪಂಜಾಬ್ ಪೊಲೀಸರು ಬಿಡುಗಡೆ ಮಾಡಿರುವುದನ್ನು ಅನುಸರಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತತ್ಕ್ಷಣವೇ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
“ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯ ಲಂಚ ಪ್ರಕರಣವನ್ನು ರಾಜ್ಯ ಗೃಹ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ. ಅಂತೆಯೇ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಮಟ್ಟದ (ಎಡಿಜಿ) ಅಧಿಕಾರಿಯಿಂದ ಈ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ’ ಎಂದು ಡಿಜಿಪಿ ಸುಲ್ಖಾನ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಂಜಾಬ್ ಪೊಲೀಸರ ಪ್ರಕಾರ ಆರೋಪಿ ಗೋಪಿ ಘನ್ಶ್ಯಾಮ್ಪುರ್ ಕೊನೇ ಬಾರಿ ಕಂಡು ಬಂದದ್ದು ಸೆ.10ರಂದು ಶಹಜಹಾನ್ಪುರದಲ್ಲಿ .
ನಭಾ ಜೈಲ್ ಬ್ರೇಕ್ ಪ್ರಕರಣದ ಓರ್ವ ಪ್ರಮುಖ ಸಂಚುಕೋರನಾಗಿರುವ ಗೋಪಿಯನ್ನು ಪತ್ತೆ ಹಚ್ಚಲು ನಾವು ಯತ್ನಿಸುತ್ತಿದ್ದೇವೆ; ಆತ ಕಳೆದ ಸೆ.10ರಂದು ಶಹಜಹಾನ್ಪುರದಲ್ಲಿ ಗೋಚರಿಸಲ್ಪಟ್ಟರೂ ಪರಾರಿಯಾಗುವಲ್ಲಿ ಆತ ಸಫಲನಾಗಿದ್ದ’ ಎಂದು ಪಂಜಾಬ್ ಉಗ್ರ ನಗ್ರಹ ದಳದ ಐಜಿ ವಿಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷ ನ.27ರಂದು ಘಟಿಸಿದ್ದ ನಭಾ ಜೈಲ್ ಬ್ರೇಕ್ಗೆ ಸಂಬಂಧಿಸಿ ಪಂಜಾಬ್ ಪೊಲೀಸರು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದೊಂದಿಗೆ ಕೂಡಿಕೊಂಡು ಆರು ಶಂಕಿತರನ್ನು ಬಂಧಿಸಿದ್ದರು.
ವರದಿಗಳ ಪ್ರಕಾರ ಉತ್ತರ ಪ್ರದೇಶ ಹಿರಿಯ ಐಪಿಎಸ್ ಅಧಿಕಾರಿ ಈ ಜೈಲ್ ಬ್ರೇಕ್ ಡೀಲ್ಗೆ 1 ಕೋಟಿ ರೂ. ಕೇಳಿದ್ದು ಅನಂತರದಲ್ಲಿ 45 ಲಕ್ಷ ರೂ.ಗೆ ವ್ಯವಹಾರ ಕುದುರಿತ್ತು.