ನಿರ್ಣಾಯಕ ಟೆಸ್ಟ್ ಪಂದ್ಯ :ಕೊಹ್ಲಿ ವಾಟರ್ಬಾಯ್
Team Udayavani, Mar 26, 2017, 3:51 PM IST
ಧರ್ಮಶಾಲಾದ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿದರೂ ವಿರಾಟ್ ಕೊಹ್ಲಿ ಅಂಗಳದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಆಗ ಪಂದ್ಯದ 6ನೇ ಓವರ್ ಜಾರಿಯಲ್ಲಿತ್ತು. ಬೌಲರ್ ಉಮೇಶ್ ಯಾದವ್. ಚೆಂಡಿನ ಆಕಾರದಲ್ಲೇನೋ ದೋಷ ಕಂಡುಬಂದುದರಿಂದ ಅಂಪಾಯರ್ಗಳು ಚೆಂಡನ್ನು ಪರಿಶೀಲಿಸುತ್ತಿದ್ದರು. ಹೀಗಾಗಿ ಸ್ವಲ್ಪ ಹೊತ್ತು ಪಂದ್ಯ ಸ್ಥಗಿತಗೊಂಡಿತು. ಈ ಅವಕಾಶಕ್ಕಾಗಿಯೇ ಕಾದು ಕುಳಿತಂತಿದ್ದ ಕೊಹ್ಲಿ ಅಂಗಳಕ್ಕೆ ಓಡಿ ಬಂದರು. ಆಗ ಅವರ ಕೈಯಲ್ಲಿ ಪಾನೀಯದ ಬಾಟಲ್ ಇತ್ತು!
ಅಂಗಳಕ್ಕಿಳಿಯುವ ಅವಕಾಶ ಲಭಿಸಿದ್ದರಿಂದಲೋ ಏನೋ, ಕೊಹ್ಲಿ ಮೊಗದಲ್ಲಿ ಸಂತಸ ಲಾಸ್ಯವಾಡುತ್ತಿತ್ತು. ಲಭಿಸಿದ ಒಂದೆರಡು ನಿಮಿಷಗಳ ಅವಕಾಶದಲ್ಲೇ ಅವರು ತಂಡದ ಆಟಗಾರರಿಗೆ ಕೆಲವು ಟಿಪ್ಸ್ ನೀಡಿದರು. ಮುಖ್ಯವಾಗಿ ಕರುಣ್ ನಾಯರ್ ಅವರತ್ತ ತೆರಳಿ ಸಮಾಧಾನಪಡಿಸಿದರು. ಇದಕ್ಕೊಂದು ವಿಶೇಷ ಕಾರಣವೂ ಇತ್ತು. ಪಂದ್ಯದ ಮೊದಲ ಎಸೆತದಲ್ಲೇ ವಾರ್ನರ್ ಅವರ ಕ್ಯಾಚನ್ನು 3ನೇ ಸ್ಲಿಪ್ನಲ್ಲಿದ್ದ ನಾಯರ್ ಕೈಚೆಲ್ಲಿದ್ದರು! ಅಂದಹಾಗೆ, 5.4 ಓವರ್ ಬಳಿಕ ಚೆಂಡನ್ನು ಬದಲಾಯಿಸಲಾಯಿತು.