ಯುಎಸ್ ಓಪನ್ ಬ್ಯಾಡ್ಮಿಂಟನ್: ಭಾರತೀಯರ ನಡುವೆ ಫೈನಲ್ ಹೋರಾಟ
Team Udayavani, Jul 24, 2017, 10:08 AM IST
(ಕ್ಯಾಲಿಫೋರ್ನಿಯ): ಭಾರತೀಯ ಶಟ್ಲರ್ಗಳಾದ ಪಾರುಪಳ್ಳಿ ಕಶ್ಯಪ್ ಮತ್ತು ಎಚ್ಎಸ್ ಪ್ರಣಯ್ ಅವರು ಯುಎಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿಗಾಗಿ ಪರಸ್ಪರ ಹೋರಾಡಲಿದ್ದಾರೆ. ಹೀಗಾಗಿ ಪ್ರಶಸ್ತಿ ಭಾರತ ಗೆಲ್ಲುವುದು ನಿಶ್ಚಿತವಾಗಿದೆ.
2015ರ ಅಕ್ಟೋಬರ್ನಿಂದ ಮೀನಖಂಡದ ನೋವಿನಿಂದಾಗಿ ಹಲವು ಕೂಟಗಳಿಂದ ಹೊರ ಗುಳಿದಿದ್ದ ಕಶ್ಯಪ್ ಅವರು 21 ತಿಂಗಳ ಬಳಿಕ ಮೊದಲ ಬಾರಿ ಫೈನಲ್ನಲ್ಲಿ ಆಡುತ್ತಿದ್ದಾರೆ. ಪ್ರಣಯ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ವರ್ಷ ಸ್ವಿಸ್ ಓಪನ್ ಗೆದ್ದ ಬಳಿಕ ಮೊದಲ ಬಾರಿ ಫೈನಲಿಗೆ ಏರಿದ್ದಾರೆ.
ಮೂರು ಗೇಮ್ಗಳ ಕಠಿನ ಹೋರಾಟದಲ್ಲಿ ಕೊರಿಯದ ಕ್ವಾಂಗ್ ಹೀ ಹಿಯೊ ಅವರನ್ನು ಉರುಳಿಸಿದ ಕಶ್ಯಪ್ ಫೈನಲಿಗೇರಿದರು. ಒಂದು ತಾಸು ಮತ್ತು ಆರು ನಿಮಿಷಗಳ ಪ್ರಬಲ ಹೋರಾಟ ದಲ್ಲಿ ಕಶ್ಯಪ್ 15-21, 21-15, 21-16 ಗೇಮ್ಗಳಿಂದ ಜಯ ಸಾಧಿಸಿದರು. ಇದೇ ವೇಳೆ ಪ್ರಣಯ್ ವಿಯೆಟ್ನಾಂನ ಟಿಯೆನ್ ಮಿನ್ ಗುಯೆನ್ ಅವರನ್ನು 21-14, 21-19 ಗೇಮ್ಗಳಿಂದ ಕೆಡಹಿದರು.
ಈ ಋತುವಿನಲ್ಲಿ ಅಂತಾರಾಷ್ಟ್ರೀಯ ಕೂಟ ದಲ್ಲಿ ಭಾರತೀಯರಿಬ್ಬರು ಪ್ರಶಸ್ತಿಗಾಗಿ ಹೋರಾಡುತ್ತಿರು ವುದು ಇದು ಎರಡನೇ ಸಲವಾಗಿದೆ. ಕಳೆದ ಎಪ್ರಿಲ್ನಲ್ಲಿ ಕೆ. ಶ್ರೀಕಾಂತ್ ಮತ್ತು ಬಿ ಸಾಯಿ ಪ್ರಣೀತ್ ಸಿಂಗಾಪುರ ಓಪನ್ನ ಫೈನಲ್ನಲ್ಲಿ ಆಡಿದ್ದರು ಮತ್ತು ಶ್ರೀಕಾಂತ್ ಪ್ರಶಸ್ತಿ ಜಯಿಸಿದ್ದರು. ಇದು ಶ್ರೀಕಾಂತ್ ಅವರ ಮೊದಲ ಸೂಪರ್ ಸೀರೀಸ್ನ ಪ್ರಶಸ್ತಿಯಾಗಿದೆ.
ಡಬಲ್ಸ್ನಲ್ಲಿ ಸೋಲು
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಅವರು ಮೂರು ಗೇಮ್ಗಳ ಕಠಿನ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಲು ಚಿಂಗ್ ಯಾವೊ ಮತ್ತು ಯಂಗ್ ಪೊ ಹಾನ್ ಅವರಿಗೆ 12-21, 21-12, 20-22 ಗೇಮ್ಗಳಿಂದ ಶರಣಾದರು.
ದೀರ್ಘ ಸಮಯದ ಬಳಿಕ ಫೈನಲಿಗೇರಿರುವುದು ಒಳ್ಳೆಯ ಸಾಧನೆ. ಕೊರಿಯ ಆಟಗಾರನ ವಿರುದ್ಧ ಗೆಲ್ಲಲು ಪ್ರಬಲ ಹೋರಾಟ ನಡೆಸ ಬೇಕಾಯಿತು. ಅವರು ಉತ್ತಮ ರೀತಿಯಲ್ಲಿ ಆಟ ಆರಂಭಿಸಿದ್ದರು. ತಾಳ್ಮೆಯಿಂದ ಆಡಿದ ಅವರು ಶಕ್ತಿಶಾಲಿಯಾಗಿ ಹೊಡೆಯುತ್ತಿದ್ದರು. ಆದರೆ ನಾನು ನಿಧಾನವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಪಂದ್ಯ ಒಲಿಸಿಕೊಂಡೆ ಎಂದು ಕಶ್ಯಪ್ ತಿಳಿಸಿದರು.