ಶಾಸಕಾಂಗ ಸಭೆಯಲ್ಲೇ ಸಿಎಂ ಅಭ್ಯರ್ಥಿ ನಿರ್ಧಾರ
Team Udayavani, Jun 3, 2017, 12:32 PM IST
ತುಮಕೂರು: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದು, ಮುಖ್ಯಮಂತ್ರಿ ಯಾರಾಗಬೇಕೆಂದು ಶಾಸಕಾಂಗಸಭೆಯಲ್ಲಿ ನಿರ್ಧಾರ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶುಕ್ರವಾರ ನಗರದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮಿಯವರ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರು ಆಗಬೇಕು ಎಂದು ನಿರ್ಧಾರ ಮಾಡುವುದು ಮತದಾರ. ಆದರೆ ,ಬಿಜೆಪಿ ಯವರು ಈಗಲೇ ಸಿಎಂ ಆಗಿದ್ದೇವೆ ಎಂದು ಬೀಗುತ್ತಿದ್ದಾರೆ.
ಆದರೆ ನಮ್ಮ ಪಕ್ಷದಲ್ಲಿ ಚುನಾವಣೆ ನಂತರ ಶಾಸಕಾಂಗ ಸಭೆಯಲ್ಲಿ ಶಾಸಕರು ಸಿಎಂ ಆಯ್ಕೆ ಮಾಡುತ್ತಾರೆ ಎಂದ ಅವರು ದಲಿತ ಸಿಎಂ ಕುರಿತು ಈಗ ಯಾವುದೇ ಪ್ರಸ್ತಾಪ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮತ್ತೆ ಅಧಿಕಾರವೇ ಏಕೈಕ ಗುರಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಗುರಿ ಎಂದ ಅವರು, ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬ ಗುರಿ ಬಗ್ಗೆ ಈಗ ಏನೂ ಹೇಳಲ್ಲ ಆದರೆ, ಎಐಸಿಸಿ ನೀಡಿದ ಗುರಿಯಂತೆ ಅತಿ ಹೆಚ್ಚು ಶಾಸಕರು ಆಯ್ಕೆಯಾಗುವಂತೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲು ಅದ್ಯತೆ ಎಂದು ಹೇಳಿದರು.
ಅನುರಾಗ್ ತಿವಾರಿ ಸಾವಿನ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಉನ್ನತ ಸಂಸ್ಥೆಯೊಂದು ತನಿಖೆ ನಡೆಸುತ್ತಿರುವಾಗ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ . ಪ್ರಕರಣವನ್ನು ಅರಿತು ಮಾತ ನಾಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಹೈಕಮಾಂಡ್ ಹೇಳಿದಲ್ಲಿ
ಸ್ಪರ್ಧೆ: ಪರಂ
ಹೈಕಮಾಂಡ್ ತೀರ್ಮಾನದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡು ಎಂದು ಹೇಳಿದರೂ ನಾನು ಆ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದೇನೆ. ಮೀಸಲು ಕ್ಷೇತ್ರವೇ ಬೇಕೆಂದೇನೂ ಇಲ್ಲ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಪಕ್ಷದ ಅಭಿವೃದ್ಧಿ ದೃಷ್ಟಿಯಿಂದ ಕೆಪಿಸಿಸಿಯಿಂದ ಬ್ಲಾಕ್ ಕಾಂಗ್ರೆಸ್ ವರೆಗೆ ಎಕ್ಸಿಕ್ಯೂಟಿವ್ ಕಮಿಟಿ ಸೇರಿದಂತೆ ಎಲ್ಲಾ ಸಮಿತಿಗಳನ್ನು ಅಗತ್ಯ ವಿರುವ ಕಡೆ ಪರಿಷ್ಕರಣೆ ಮಾಡಲಾಗುವುದು.ಎಲ್ಲಾ ಹಂತದ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದು ನುಡಿದರು.