ಸಿದ್ದುಗೆ ಮೈಸೂರಲ್ಲೇ ಮೋಕ್ಷ ಕೊಡ್ತೀವಿ: ಬಿಎಸ್ವೈ
Team Udayavani, Jul 7, 2017, 3:45 AM IST
ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲೇ ಸೋಲಿಸುವ ಮೂಲಕ ಮೋಕ್ಷ ಕೊಡಿಸುತ್ತೇವೆ. ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಸಿಎಂ ಸ್ಪರ್ಧಿಸಲ್ಲ. ಅದು ಅವರಿಗೆ ರುಚಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಾದಾಮಿಗೆ ಬಂದು ಸ್ಪರ್ಧಿಸುತ್ತಾರೆ ಎಂಬುದು ವದಂತಿ. ಅವರಿಗೆ ಈ ಭಾಗದ ಚುನಾವಣೆ ರುಚಿಸುವುದಿಲ್ಲ ಎಂದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇಲಿದ್ದ ಎಲ್ಲ ಪ್ರಕರಣಗಳು ಖುಲಾಸೆಯಾಗಿವೆ. ಆದರೂ ಅವರ ವಿರುದ್ಧ ಸಿಎಂ ಹಗುರವಾಗಿ ಮಾತನಾಡಿದ್ದಾರೆ. ಆ ಮೂಲಕ ನ್ಯಾಯಾಲಯ ವ್ಯವಸ್ಥೆಗೆ ಅಗೌರವ ತೋರಿಸಿದ್ದಾರೆ. ಸಿಎಂ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಹಿರಿಯ ವಕೀಲರೊಂದಿಗೆ ಚರ್ಚಿಸಿದ್ದು, ಇದಕ್ಕೆ ಅಮಿತ್ ಶಾ ಅವರ ಅನುಮತಿ ಬೇಕು. ಅವರ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ರಾಹುಲ್ ಮೆಚ್ಯುರಿಟಿ ಬಂದಿಲ್ಲ!
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ,ರಾಹುಲ್ ಗಾಂಧಿಗೆ ಮೆಚ್ಯುರಿಟಿ ಆಗಿಲ್ಲ. ಹೀಗಾಗಿ ತಮಗೆ ಇರುವ ಅಲ್ಪ-ಸ್ವಲ್ಪ ಗೌರವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳು ಮೋದಿ ಅವರನ್ನು ಹಾಗೂ ಭಾರತವನ್ನು ಹೊಗಳುತ್ತಿವೆ. ಆದರೆ, ರಾಹುಲ್ ಗಾಂಧಿ, ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಡುತ್ತಿದ್ದಾರೆ. ಇದು ಅವರು ಪ್ರಬುದ್ಧತೆ ಇಲ್ಲದವರು ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಬಿಎಸ್ವೈ ಎದುರೇ ಭಿನ್ನಮತ ಸ್ಫೋಟ
ಬಾಗಲಕೋಟೆ: ಜಿಲ್ಲೆಯ ಹುನಗುಂದ ಮತ್ತು ಜಮಖಂಡಿ ಬಿಜೆಪಿಯಲ್ಲಿ ಬಹು ದಿನಗಳಿಂದ ಹೊಗೆಯಾಡುತ್ತಿದ್ದ ಪಕ್ಷದ ಮುಖಂಡರ ಭಿನ್ನಮತ ಗುರುವಾರ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಎದುರೇ ಸ್ಫೋಟಗೊಂಡಿದೆ.
ನಗರದ ಶಿವಾನಂದ ಜಿನ್ನಲ್ಲಿ ಬಿಜೆಪಿ ವಿಸ್ತಾರಕರ ಯೋಜನೆಗೆ ಯಡಿಯೂರಪ್ಪ ಚಾಲನೆ ನೀಡಿ ಲೋಕಾಪುರಕ್ಕೆ ಹೊರಡಲು ಅಣಿಯಾಗಿದ್ದರು. ಈ ವೇಳೆ ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ| ಮಾರುತೇಶ ಬೆಂಬಲಿಗರು ಬಿಜೆಪಿ, ಯಡಿಯೂರಪ್ಪ ಹಾಗೂ ಡಾ| ಮಾರುತೇಶ ಅವರ ಪರ ಘೋಷಣೆ ಕೂಗಿದರು. ಇದರಿಂದ ಆಕ್ರೋಶಗೊಂಡ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು, “ಏ! ಕೆಲ ಚೇಲಾಗಳನ್ನು ಕರೆದುಕೊಂಡು ಬಂದು ಇಲ್ಲಿ ನಾಟಕ ಮಾಡ್ತಿ ಏನು?’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. “ಅವರು ಚೇಲಾಗಳು ಅಲ್ಲ, ಕಾರ್ಯಕರ್ತರು’ ಎಂದು ಡಾ| ಮಾರುತೇಶ ಪ್ರತ್ಯುತ್ತರ ನೀಡಿದರು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.