ದುರಂತಕ್ಕೆ ಕಾರಣವಾದ ಕೋಳಿ ಸಾಕಣೆ ಕೇಂದ್ರ ರದ್ದತಿಗೆ ನಿರ್ಣಯ
Team Udayavani, Mar 6, 2021, 4:30 AM IST
ಪಾಣಾಜೆ: ಇಲ್ಲಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಗ್ರಾಮದ ಕಡಮಾಜೆ ಖಾಸಗಿ ಸ್ಥಳದಲ್ಲಿ ಮಾ. 4ರಂದು ನಡೆದ ದುರಂತಕ್ಕೆ ಕಾರಣ ವಾದ ಕೋಳಿ ಸಾಕಣೆಯ ಕೇಂದ್ರವನ್ನು ರದ್ದು ಪಡಿಸಲು ಸಭೆಯು ಸರ್ವಾನು ಮತದಿಂದ ನಿರ್ಣಯ ಕೈಗೊಂಡಿದೆ.
ಪಿಡಿಒ ಚಂದ್ರಮತಿ ಮಾಹಿತಿ ನೀಡಿ ಕಳೆದ 2 ವರ್ಷಗಳಿಂದ ದುರಂತಕ್ಕೆ ಕಾರಣವಾದ ಕೋಳಿ ಸಾಕಣೆ ಕೇಂದ್ರವು ಪರವಾನಿಗೆ ನವೀಕರಣಗೊಳಿಸಿಲ್ಲ.
ಫೋನ್ ಮೂಲಕ ನವೀಕರಣ ಗೊಳಿಸುವಂತೆ ವಿನಂತಿಸಲಾಗಿದೆ. ಯಾವುದೇ ಸ್ಪಂದನೆ ನೀಡಿರಲಿಲ್ಲ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತಿ ಇದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಇಡೀ ಪರಿಸರ ದುರ್ವಾಸನೆ ಬೀರಿದೆ. ನೊಣಗಳು ಸುತ್ತಲಿನ ಪರಿಸರದಲ್ಲಿ ಹಾರಾಡುತ್ತಿದೆ. ಗ್ರಾಮದಲ್ಲಿರುವ ಕೋಳಿ ಸಾಕಣೆ ಕೇಂದ್ರಗಳಿಗೆ ನೊಟೀಸ್ ನೀಡಿ ಕೋಳಿ ತ್ಯಾಜ್ಯ ವಿಲೇವಾರಿ ನಿರ್ವಹಣೆಗಳ ಮಾಹಿತಿ ಪಡೆದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕೋಳಿ ತ್ಯಾಜ್ಯದ ವಿಲೇವಾರಿಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಮನೆಗಳು ಇರುವಲ್ಲಿ ಕೋಳಿ ತ್ಯಾಜ್ಯದ ವಿಲೇವಾರಿಗೆ ಅವಕಾಶ ನೀಡಬಾರದು ಎಂದು ಸದಸ್ಯ ನಾರಾಯಣ ನಾಯಕ್ ಆಗ್ರಹಿಸಿದರು. ಎಲ್ಲ ಕೋಳಿ ಸಾಕಣೆ ಕೇಂದ್ರ ಗಳಿಗೆ ನೋಟಿಸ್ ಜಾರಿ ಮಾಡಿ ಕೋಳಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಕೈ ಗೊಂಡ ಕ್ರಮಗಳನ್ನು ಪಂಚಾಯತ್ಗೆ ತಿಳಿಸುವಂತೆ ಸಭೆಯಲ್ಲಿ ನಿರ್ಣಯಿ ಸಲಾಯಿತು.
ಪಾಣಾಜೆ ಗ್ರಾಮ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಕೋವಿಡ್ 19 ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಪಾಣಾಜೆ ಪಶು ಚಿಕಿತ್ಸಾ ಕೇಂದ್ರದ ಜಾನುವಾರು ಅಧಿಕಾರಿ ಪುಷ್ಪರಾಜ್ ಶೆಟ್ಟಿ ಇಲಾಖೆಯ ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಗ್ರಾ.ಪಂ. ಉಪಾಧ್ಯಕ್ಷ ಅಬೂಬಕರ್ ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ. ಸಿಬಂದಿ ವಿಶ್ವನಾಥ, ಅರುಣ ಕಲಾಪದಲ್ಲಿ ಸಹಕರಿಸಿದರು.
ಜಲ ಜೀವನ್ ಪ್ರತೀ ಮನೆಗೆ ತಲುಪಿಸಿ
ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಲಹೆ ನೀಡಿ ಜಲ ಜೀವನ್ ಯೋಜನೆಯಡಿಯಲ್ಲಿ ಪಂಚಾಯತ್ ವ್ಯಾಪ್ತಿಯ ಪ್ರತೀ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ 2023-24ರಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಮಾಡ ಲಾಗಿದೆ. ಪ್ರತೀ ಸದಸ್ಯರು ಪ್ರತೀ ಮನೆಗೆ ಈ ಯೋಜನೆಯನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.