ಕೊನೆಗೂ ತೆರೆದ ಬಂಡಿಮಠ ಕೆಎಸ್ಆರ್ಟಿಸಿ ಕೌಂಟರ್ : ಮೂಲಸೌಕರ್ಯ ಅಳವಡಿಕೆ ತುರ್ತು ಅಗತ್ಯ
Team Udayavani, Mar 7, 2021, 5:30 AM IST
ಕಾರ್ಕಳ: ಕೊರೊನಾ ಸಂದರ್ಭ ಬಂದ್ ಆಗಿದ್ದ ಕಾರ್ಕಳ ಬಂಡಿಮಠ ಹೊಸ ಬಸ್ ನಿಲ್ದಾಣದ ಕೆಎಸ್ಆರ್ಟಿಸಿ ಕೌಂಟರ್ ಕೊನೆಗೂ ಬಾಗಿಲು ತೆರೆದುಕೊಂಡಿದೆ.
ಲಾಕ್ಡೌನ್ ವೇಳೆ ಇಲ್ಲಿನ ಬಂಡಿಮಠ ಹೊಸ ಬಸ್ ನಿಲ್ದಾಣ ಬಳಿ ಪುರಸಭೆ ಕಟ್ಟಡದಲ್ಲಿದ್ದ ಕೆಎಸ್ಆರ್ಟಿಸಿ ಕಚೇರಿ ಬಂದ್ ಆಗಿದ್ದು ಬಳಿಕ ತೆರೆದಿರಲಿಲ್ಲ.
ಪ್ರಯಾಣಿಕರಿಗೆ ಕೌಂಟರ್ ಇಲ್ಲದೆ ಆಗುವ ಅನನುಕೂಲಗಳ ಕುರಿತು ಸುದಿನ ವಿಸ್ಕೃತ ವರದಿಯನ್ನು ಇತ್ತೀಚೆಗೆ ಪ್ರಕಟಿಸಿತ್ತು. ಈ ವೇಳೆ ಉಡುಪಿ ಜಿಲ್ಲೆ ವಿಭಾಗದ ಡಿಪೋ ಮ್ಯಾನೇಜರ್ ಶೀಘ್ರವೇ ಕೌಂಟರ್ ತೆರೆಯುವ ಭರವಸೆಯನ್ನು ನೀಡಿದ್ದರು. ಅದರಂತೆ ಸಂಸ್ಥೆಯ ಟಿಸಿ (ಟ್ರಾಫಿಕ್ ಕಂಟ್ರೋಲರ್) ಸಿಬಂದಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.
ಮೂಲಸೌಕರ್ಯ ಇಲ್ಲ
ಕಚೇರಿಗೆ ಬೇಕಾದ ಮೂಲಸೌಕರ್ಯ ಜೋಡಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕನಿಷ್ಠ ಫ್ಯಾನಿನ ವ್ಯವಸ್ಥೆಯೂ ಇಲ್ಲ. ರಾತ್ರಿ ತಂಗುವ ನಿರ್ವಾಹಕರಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಕಿಟಿಕಿ, ಬಾಗಿಲುಗಳನ್ನು ತೆರೆದೇ ಮಲಗಬೇಕಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಕೂಡ ಸರಿಯಾದ ವ್ಯವಸ್ಥೆಗಳಿಲ್ಲ.
ಇಪ್ಪತ್ತೈದು ಮಂದಿ ಕುಳಿತುಕೊಳ್ಳುವಷ್ಟೆ ವ್ಯವಸ್ಥೆಯಿದೆ. ಅಗಲ ಕಿರಿದಾದ ಸಣ್ಣ ಕೊಠಡಿಯಾಗಿದ್ದು, ಅದರಲ್ಲಿ ಸಾಕಷ್ಟು ಆಸನ ವ್ಯವಸ್ಥೆಗಳಿಲ್ಲ.
ರಾತ್ರಿಯೂ ತೆರೆದಿದ್ದರೆ ಉತ್ತಮ
ಕೌಂಟರ್ ಇಲ್ಲದೆ ಇದ್ದುದರಿಂದ ಪಕ್ಕದಲ್ಲಿ ಅವರಿವರ ಜತೆ ಕೇಳುವ ಸ್ಥಿತಿ ಇತ್ತು. ಈಗ ಸದ್ಯಕ್ಕೆ ಕೌಂಟರ್ ತೆರೆದಿರುವುದರಿಂದ ತುಸು ಅನುಕೂಲವಾಗಿದೆ. ರಾತ್ರಿ ಹೊತ್ತು ಕೂಡ ತೆರೆದಿದ್ದಲ್ಲಿ ಇನ್ನೂ ಅನುಕೂಲವಾಗುತ್ತಿತ್ತು.
-ಗಾಯತ್ರಿ , ಖಾಸಗಿ ಸಂಸ್ಥೆ ಉದ್ಯೋಗಿ