ರಸ್ತೆ ಉಬ್ಬಿಗೆ ಬಣ್ಣ ಬಳಿದ ಅಂಗನವಾಡಿ ಕಾರ್ಯಕರ್ತೆಯರು
Team Udayavani, Mar 10, 2021, 4:50 AM IST
ಮೂಡುಬಿದಿರೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಲ್ಲೆಡೆ ಸಭೆ, ಸಮಾರಂಭ, ಸಮ್ಮಾನಗಳು ನಡೆಯುವುದು ಸಾಮಾನ್ಯ ವಾಗಿದ್ದರೆ ಮೂಡುಬಿದಿರೆಯ ಸುಭಾಸ್ನಗರದ ಪುಚ್ಚೇರಿಕಟ್ಟೆ ಅಂಗನವಾಡಿಯ ಬಳಿಯ ರಸ್ತೆಯ ಉಬ್ಬು ಇರುವಲ್ಲಿಗೆ ಹಳದಿ ಪೈಂಟ್ ಬಳಿಯುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ದಿನವನ್ನು ಸ್ಮರಣೀಯಗೊಳಿಸಿದ್ದಾರೆ.
ಪುಚ್ಚೇರಿಕಟ್ಟೆ ಅಂಗನವಾಡಿಯ ಬಳಿ ಹಾದುಹೋಗುವ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸಿ ಅಪಘಾತಗಳಾಗದಂತೆ ಉಬ್ಬು ನಿರ್ಮಿಸಲಾಗಿದೆ. ಆದರೆ ಅದರ ಅಸ್ತಿತ್ವವನ್ನು ವಾಹನಚಾಲಕರಿಗೆ ತೋರಗೊಡುವಂತೆ ಬಣ್ಣ ಬಳಿದಿಲ್ಲ. ಹಾಗಾಗಿ ಆಗಾಗ ಇಲ್ಲಿ ಅವಘಡಗಳಾಗುವುದು ಸಹಜವಾಗಿದೆ. ಇದನ್ನು ಗಮನಿಸಿದ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ವಿಜಯಾ ಅವರು ತಮ್ಮದೇ ವೆಚ್ಚದಲ್ಲಿ ಸಹಾಯಕರಾದ ರಾಜಶ್ರೀ, ಜಲಜಾ ದೇವಾಡಿಗ ಅವರ ಜತೆಗೂಡಿ ಸೋಮವಾರ ರಸ್ತೆ ಉಬ್ಬು ಇರುವಲ್ಲಿ ಹಳದಿ ಪೈಂಟ್ ಬಳಿದಿದ್ದಾರೆ. ಲೋಕೋಪಕಾರ ಮಾಡಿದ್ದಾರೆ ಎಂದು ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.