ಜಿಟಿಡಿ ಮಣಿಸಲು ಅಖಾಡಕ್ಕಿಳಿದ ಎಚ್ಡಿಕೆ
ಜೆಡಿಎಸ್ ಪಾಳಯದಲ್ಲೇ ಜಿದ್ದಾಜಿದ್ದಿ,ರಂಗೇರಿದ ಮೈಮುಲ್ ಚುನಾವಣಾ ಕಣ
Team Udayavani, Mar 14, 2021, 11:58 AM IST
ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಾ.16ರಂದು ಚುನಾವಣೆ ನಡೆಯಲಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಜಿ.ಡಿ. ದೇವೇಗೌಡರ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿದೆ.
ಮೈಮುಲ್ ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಿರುವಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಬೆನ್ನಲ್ಲೆ ಇದೆ ಮೊದಲ ಬಾರಿಗೆ ಮೈಮುಲ್ ಚುನಾವಣಾ ಅಖಾಡಕ್ಕೆ ಕುಮಾರಸ್ವಾಮಿ ಧುಮುಕಿ, ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಗುಡುಗುತ್ತಾ ಮತಯಾಚನೆಯಲ್ಲಿ ತಲ್ಲೀನರಾಗಿದ್ದಾರೆ. ಇದಕ್ಕೆ ಪ್ರತಿ ಸವಾಲಾಗಿ ಜಿ.ಟಿ.ದೇವೇಗೌಡರೂ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸಿದ್ದು, ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲದೊಂದಿಗೆ ಪೈಪೋಟಿಯಿಂದ ಕೂಡಿದೆ.ಒಂದೇ ಪಕ್ಷದಲ್ಲಿದ್ದರೂ ನಾನೊಂದು ತೀರಾ, ನೀನೊಂದು ಎಂಬಂತೆ ಮುನಿಸಿಕೊಂಡಿರುವ ಶಾಸಕ ರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರು ತಮ್ಮ ಬೆಂಬಲಿಗರನ್ನು ಪ್ರತ್ಯೇಕವಾಗಿ ಕಣಕ್ಕಿಳಿಸಿ ರುವುದರಿಂದ ಮೈಮುಲ್ ಚುನಾವಣಾ ಅಖಾಡ ರಂಗೇರಿದೆ.
ಕಣದಲ್ಲಿ ಘಟಾನುಘಟಿಗಳು: ಮೈಸೂರು ಉಪ ವಿಭಾಗದ ಏಳು ನಿರ್ದೇಶಕರ ಸ್ಥಾನಗಳಿಗೆ 17 ಮಂದಿ ಕಣದಲ್ಲಿದ್ದು, ಇದರಲ್ಲಿ ಮಾಜಿ ಅಧ್ಯಕ್ಷರು, ನಿರ್ದಶಕರು ಮತ್ತೂಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಮಾಜಿ ಅಧ್ಯಕ್ಷರಾದ ಕೆ.ಜಿ.ಮಹೇಶ್, ಎಸ್.ಸಿದ್ದೇ ಗೌಡ, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಮಾಜಿ ಉಪಾಧ್ಯಕ್ಷ ಬಿ.ಎನ್.ಸದಾನಂದ, ಮಾಜಿ ನಿರ್ದೇಶಕರಾದ ಕೆ.ಸಿ.ಬಲರಾಮ್, ಕೆ.ಎಸ್. ಕುಮಾರ್, ಕೆ.ಈರೇಗೌಡ, ಪಿ.ಎಂ.ಪ್ರಸನ್ನ, ನಂ.ಸಿದ್ದಪ್ಪ, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡಕಣದಲ್ಲಿರುವ ಪ್ರಮುಖರಿದ್ದಾರೆ. ಅವರಲ್ಲದೆ, ಲೀಲಾ, ಎಂ.ಎನ್. ಪರಶಿವಮೂರ್ತಿ, ಬಿ.ನೀಲಾಂಬಿಕೆ, ಶಿವ ಮೂರ್ತಿ, ಬಿ.ಗುರುಸ್ವಾಮಿ, ಯಶೋಧ, ಆರ್.ಚೆಲುವರಾಜು, ಮಂಗಳಮ್ಮ, ರಂಗಸ್ವಾಮಿ, ಸಿ.ಓಂ ಪ್ರಕಾಶ್ ಕಣದಲ್ಲಿದ್ದಾರೆ. ಎ.ಶಿವಗಾಮಿ, ಕೆ.ಶಿವಣ್ಣ, ಎಸ್.ಕೆ.ಮಧುಚಂದ್ರ, ಎಚ್.ಡಿ.ರಾಜೇಂದ್ರ, ದಾಕ್ಷಾಯಿಣಿ, ಜಗದೀಶ್ ಉರುಫ್ ಬಸಪ್ಪ, ಬಿ.ಎ.ಪ್ರಕಾಶ್, ಪುಷ್ಪ ಲತಾ, ಸಿ.ಎಸ್.ರುದ್ರೇಗೌಡ, ಶಿವಣ್ಣ, ಎಂ.ಕೆ. ರಾಣಿ,ಪಿ.ಬಸವಣ್ಣ ಅವರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 15 ಸ್ಥಾನಗಳಿಗೆ 33 ಮಂದಿ ಕಣದಲ್ಲಿ ಉಳಿದಿದ್ದು, ಒಂದೊಂದು ಸ್ಥಾನಕ್ಕೂ ತೀವ್ರ ಪೈಪೋಟಿ ಎದುರಾಗಿದೆ.
ಇದರಿಂದಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಕಡಿಮೆ. ಮಾಜಿ ಸಚಿವ ಎಚ್.ಡಿ.ರೇವಣ್ಣಬಾಮೈದ ಎಸ್.ಕೆ.ಮಧುಚಂದ್ರ ನಾಮಪತ್ರ ಸಲ್ಲಿ ಸಿದ್ದು, ಮೊದಲ ಬಾರಿಗೆ ಭವಾನಿ ರೇವಣ್ಣ ಅವರ ಕುಟುಂಬದವರು ಅಖಾಡಕ್ಕೆ ಧುಮುಕಿರುವುದು ವಿಶೇಷ.
6 ಸ್ಥಾನ ಹೆಚ್ಚಳ: ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕಹಾಲು ಒಕ್ಕೂಟ ರಚನೆಯಾದ ಬಳಿಕ ನಿರ್ದೇಶಕ ಸ್ಥಾನಗಳು ಕಡಿಮೆಯಾಗಿದ್ದರಿಂದ ಬೈಲಾ ತಿದ್ದುಪಡಿಮಾಡಿ ಆರು ಸ್ಥಾನಗಳನ್ನು ಹೆಚ್ಚಿಸಲಾಗಿದೆ. ಹಾಲಿ 9 ನಿರ್ದೇಶಕರ ಸ್ಥಾನಗಳ ಜತೆಗೆ ಈಗ ಮೈಸೂರು ಉಪವಿಭಾಗದಿಂದ 7 ಮತ್ತು ಹುಣಸೂರು ಉಪ ವಿಭಾಗಕ್ಕೆ8 ಸ್ಥಾನಗಳನ್ನು ನಿಗದಿಪಡಿಸಿ 15 ನಿರ್ದೇಶಕರ ಸ್ಥಾನಗಳನ್ನು ಸೃಜಿಸಲಾಗಿದೆ. 15 ಸ್ಥಾನಗಳಲ್ಲಿ ಮಹಿಳೆಯರಿಗೆನಾಲ್ಕು ಸ್ಥಾನಗಳನ್ನು ಮೀಸಲಿರಿಸಿ ಪ್ರಾತಿನಿಧ್ಯ ಹೆಚ್ಚಿಸಲಾಗಿದೆ. ಈ ಮೊದಲು ಎರಡು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದವು. ಕರ್ನಾಟಕ ಸಹಕಾರಸಂಘ ಗಳ ಕಾಯ್ದೆ ಕಲಂ 12(6) ಪ್ರಕಾರ ಬೈಲಾ ತಿದ್ದುಪಡಿ ಮಾಡಿದ ನಿರ್ಣಯಕ್ಕೆ ರಾಜ್ಯ ಸರ್ಕಾರ ಅಸ್ತುನೀಡಿರುವ ಪರಿಣಾಮ ಈ ಬಾರಿಯ ಚುನಾವಣಾ ಕಣ ತೀವ್ರ ಸೆಣಸಾಟಕ್ಕೆ ವೇದಿಕೆಯಾಗಿದೆ.
ಜೆಡಿಎಸ್ ಪಾಳಯದಲ್ಲೇ ಜಿದ್ದಾಜಿದ್ದಿ: ಮೈಮುಲ್ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಪ್ರಯತ್ನ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಶತಾಯ ಗತಾಯ ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಅಧ್ಯಕ್ಷ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದು ಶಾಸಕ ಜಿ.ಟಿ.ದೇವೇಗೌಡರು ಸರ್ವ ಪ್ರಯತ್ನ ನಡೆಸಿದ್ದಾರೆ.
ಅದಕ್ಕಾಗಿ ಬಿಜೆಪಿ ನಾಯ ಕರ ಜತೆಗೆ ಆಂತರಿಕವಾಗಿ ಒಪ್ಪಂದ ಮಾಡಿಕೊಂಡು ತಮ್ಮ ಬೆಂಬಲಿಗರ ಪರವಾಗಿ ತೆರೆಮರೆಯಲ್ಲಿಕೆಲಸ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಜಿ.ಟಿ.ದೇವೇಗೌಡರು ಮೈಮುಲ್ ಆಡಳಿತ ತಮ್ಮ ಬೆಂಬಲಿಗರಿಂದಕೈಜಾರದಂತೆ ನೋಡಿಕೊಳ್ಳಲು ತಂತ್ರಗಾರಿಕೆ ಮಾಡಿದ್ದಾರೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರು ಹುಣಸೂರು ವಿಭಾಗದ ಚುನಾವಣೆ ಜವಾಬ್ದಾರಿ ಹೊತ್ತಿದ್ದಾರೆ.
ಇವರಿಗೆ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಜಿಟಿಡಿಗೆ ಕೈಜೋಡಿಸಿದ್ದಾರೆ. ಜಿ. ಟಿ.ದೇವೇಗೌಡರ ತಂಡದ ಅಭ್ಯರ್ಥಿಗಳನ್ನು ಸೋಲಿಸಲು ರಣತಂತ್ರ ಹೆಣೆದಿರುವ ಸಾ.ರಾ.ಮಹೇಶ್ ಕಾಂಗ್ರೆಸ್ ನಾಯಕರೊಂದಿಗೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಕಾಂಗ್ರೆಸ್-ಜಾ.ದಳ ಬೆಂಬಲಿತರನ್ನುಆಯ್ಕೆ ಮಾಡಿದ್ದಾರೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಮುಲ್ ಮಾಜಿ ನಿರ್ದೇಶಕ ಕೆ.ಸಿ.ಬಲರಾಮ್ ಸೇರಿದಂತೆ ಇನ್ನಿತರರು ಒಟ್ಟಾಗಿ ತಮ್ಮಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಿರುವುದರಿಂದ ಪೈಪೋಟಿ ಜೋರಾಗಿದೆ.
ಎಚ್ಡಿಕೆ-ಜಿಟಿಡಿ ಜಿದ್ದಾಜಿದ್ದಿ :
ಮೈಮುಲ್ ಆಡಳಿತವನ್ನು ಜಿಟಿಡಿ ಬೆಂಬಲಿಗರಿಂದ ಕಿತ್ತುಕೊಳ್ಳಲು ಹಾಗೂ ಜಿಟಿಡಿ ಶಕ್ತಿ ಕುಂದಿಸಲು ಮಾಜಿ ಸಿಎಂ ಎಚ್ಡಿಕೆ ಅಖಾಡಕ್ಕಿಳಿದು ಮತಯಾಚನೆಗೆ ಮುಂದಾಗಿದ್ದಾರೆ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಬದಲಿಗೆ ಪರ್ಯಾಯ ನಾಯಕರ ಹುಡುಕಾಟದಲ್ಲಿದ್ದಾರೆ. ಈ ನಡುವೆ ಶಾಸಕ ಜಿ.ಟಿ.ದೇವೇಗೌಡರೂ ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದು, 50 ವರ್ಷದ ಹಳೆ ಮರವನ್ನು ಅಷ್ಟು ಸುಲಭವಾಗಿ ಬೀಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿ, ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇದರಿಂದಾಗಿ ಎಚ್ಡಿಕೆ-ಜಿಟಿಡಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಚುನಾವಣೆ ಹೊಸ ಸ್ವರೂಪ ಪಡೆದುಕೊಂಡಿದೆ.