ಮೈಸೂರಿನ ಹಳೆ ಗತವೈಭವ ಮರುಕಳಿಸಲು ಯೋಜನೆ
Team Udayavani, Mar 14, 2021, 12:03 PM IST
ಮೈಸೂರು: ಮೈಸೂರಿನ ಹಳೆ ಗತವೈಭವವನ್ನು ನೆನಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತಹ ಕೆಲಸವಾಗಬೇಕಿದೆ. ಇದಕ್ಕಾಗಿ ಸರ್ಕಾರ ಪ್ರವಾಸೋದ್ಯಮಕ್ಕೆ ಈ ಬಾರಿಯ ಬಜೆಟ್ನಲ್ಲಿ ಅತಿ ಹೆಚ್ಚು ಒತ್ತು ನೀಡಿದೆ ಎಂದು ಪ್ರವಾಸೋದ್ಯಮ ಸಚಿವ ಸಿ .ಪಿ.ಯೋಗೇಶ್ವರ್ ತಿಳಿಸಿದರು.
ಶನಿವಾರ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಹೋಟೆಲ್, ಟ್ರಾವೆಲ್ಸ್, ಗೈಡ್ಸ್ , ಯೋಗ ಕೇಂದ್ರ ನಿಯೋಗದವರ ಜೊತೆ ಸಂವಾದ ನಡೆಸಿ ಮಾತನಾಡಿದರು.
ಬಹಳ ವರ್ಷಗಳ ಹಿಂದೆಯೇ ಕಾವೇರಿ ನದಿಯು ಹರಿಯುವ 5 ಜಿಲ್ಲೆಗಳನ್ನು ಒಟ್ಟುಗೂಡಿಸಿ ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಿದ್ದು, ಈಗ ಇದನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೈಸೂರಿಗೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರ ವಾಹನಕ್ಕೆ ಪಾರ್ಕಿಂಗ್ಗಾಗಿ ಒಂದೇ ಬಾರಿ ಹಣ ಪಾವತಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು. ಇದರ ಜೊತೆಗೆ ವಿದೇಶಗಳ ಮಾದರಿಯಲ್ಲೇ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಮೈಸೂರಿಗೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಚೆಕ್ ಪೋಸ್ಟ್ನಲ್ಲಿಯೇ ತೆರಿಗೆ ಪಾವತಿಸಿ, ದಾಖಲೆಯನ್ನು ತೋರಿಸಿ ಬಂದರೂ ಸಹ ಪ್ರವಾಸಿಗರಿಗೆ ಪೊಲೀಸರು ದಾಖಲೆತೋರಿಸುವಂತೆ ತೊಂದರೆ ನೀಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಕಳೆದ ಆರ್ಥಿಕ ಸಾಲಿನಲ್ಲಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ದೇಶದಲ್ಲಿ ಪಾರಂಪರಿಕ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾಪವಾಗಿದ್ದು, ಅದು ಮೈಸೂರಿನಲ್ಲಿಯೇ ಸ್ಥಾಪನೆಯಾಗ ಬೇಕು ಎಂಬ ಪ್ರಸ್ತಾಪ ಪ್ರವಾಸೋದ್ಯಮ ಇಲಾಖೆಯಿಂದಲೇ ಹೋಗಿದೆ. ಇದರಲ್ಲಿ ಮೈಸೂರು ಸ್ಕೂಲ್ ಆಫ್ ಯೋಗ ಎಂಬ ಶಾಲೆ ಸ್ಥಾಪಿಸಿ ಯೋಗವನ್ನು ಬ್ರಾಂಡ್ ಮಾಡಲು ತಿಳಿಸಿದರು.
ಸಭೆಗೂ ಮುನ್ನ ಹೆಲಿಟೂರಿಸಂಗಾಗಿ ಹೆಲಿಪ್ಯಾಡ್ ಮಾಡಲು ಉದ್ದೇಶಿರುವ ಲಲಿತ್ ಮಹಲ್ ಪ್ಯಾಲೇಸ್ ಮೈದಾನ ವನ್ನು ಅಧಿಕಾಗಳೊಂದಿಗೆ ಪರಿಶೀಲಿಸಿದರು. ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ಗೌಡ, ಪಾರಂಪರಿಕ ಇಲಾಖೆಯ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಮೋತಿಲಾಲ್, ಮೈಸೂರು ಟ್ರಾವೇಲ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಇತರರಿದ್ದರು.