ಸೀಯಾಳ, ಹಣ್ಣುಗಳಿಗೆ ಬೇಡಿಕೆ; ಜಲ ಮಟ್ಟ ಕುಸಿತ
Team Udayavani, Mar 22, 2021, 4:40 AM IST
ಸುಳ್ಯ: ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಳಗ್ಗೆ 11ರಿಂದ ಅಪರಾಹ್ನ 3.30ರ ವರೆಗೆ ಹೊರಗಡೆ ಬರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ. ಹೊರಗೆ ಬಂದ ಅರ್ಧ ಗಂಟೆಗೆ ಕಣ್ಣು ಮಂಜು, ತಲೆ ಸುತ್ತು ಆದಂತೆ ಭಾಸವಾಗುತ್ತಿದ್ದು ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಒಂದು ವಾರದಿಂದ ಸುಳ್ಯ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು ತಾಪಮಾನ ಗರಿಷ್ಠ 35, 36, 38 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು. ಈ ವಾರ ತಾಪಮಾನ ಗರಿಷ್ಠ 40 ಡಿಗ್ರಿ ಸೆಲಿÏಯಸ್ವರೆಗೂ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಸೀಯಾಳ. ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ ಜನರು ಸೀಯಾಳವನ್ನು ಹೆಚ್ಚು ಇಷ್ಟ ಪಡುತ್ತಿದ್ದು, ಸದ್ಯ 35ರಿಂದ 40 ರೂ.ಗಳವರೆಗೆ ಮಾರಾಟವಾಗುತ್ತಿದೆ. ಜತೆಗೆ ಮನೆಯವರಿಗಿರಲಿ ಅಂತ ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆಯನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಕೃಷಿಕರಿಗೆ ಚಿಂತೆ :
ಪಯಸ್ವಿನಿ ನದಿಯ ನೀರಿನ ಒಳಹರಿವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಗ್ರಾಮಾಂತರ ಭಾಗದ ಕೃಷಿ ಹೊಂಡ, ಬಾವಿ, ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ತಗ್ಗಿದ್ದು ಕೃಷಿಕರ ನಿದ್ದೆಗೆಡಿಸಿದೆ. ಮೋಡ ಕವಿದ ವಾತಾವರಣದಿಂದ ಅಡಿಕೆ, ಗೇರು ಕೃಷಿ ಸೊರಗುತ್ತಿದೆ.
ಸುಳ್ಯ ನಗರದಲ್ಲಿ ಹಿಂದಿನ ವರ್ಷಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿ ನೀರಿನ ಜತೆಗೆ ಮಣ್ಣು ಕೂಡ ಪಂಪಿಗ್ ಆಗುವಷ್ಟರ ಮಟ್ಟಿಗೆ ನೀರಿನ ಪ್ರಮಾಣ ಕುಗ್ಗಿತ್ತು. ಈ ಬಾರಿ ಮಳೆ ನಿಲ್ಲುವಾಗ ಕಳೆದ ಬಾರಿಗಿಂದ ವಿಳಂಬವಾಗಿದ್ದರಿಂದ ಹಿಂದಿನ ವರ್ಷದಷ್ಟು ಪರಿಸ್ಥಿತಿ ಕೆಟ್ಟದಾಗಿಲ್ಲ. ಹಾಗಂತ ಸಾರ್ವಜನಿಕರು ನೀರಿನ ಬಳಕೆಯನ್ನು ಬೇಕಾಬಿಟ್ಟಿ ಮಾಡಿದರೆ ಮತ್ತದೇ ಸ್ಥಿತಿ ಎದುರಿಸಬೇಕಾಗಬಹುದು. ಹಾಗಾಗಿ ನ.ಪಂ. ನೀರಿನ ಬಳಕೆಯ ಮೇಲೆ ನಿಗಾ ವಹಿಸಿ ಪೋಲಾಗದಂತೆ ತಡೆಯಬೇಕು. ತಿಂಗಳ ಹಿಂದೆ ಸಚಿವ ಅಂಗಾರ ಜಾಕ್ವೆಲ್ ನಿರ್ಮಾಣ ಒಂದು ತಿಂಗಳಲ್ಲಿ ಆರಂಭ ಮಾಡುತ್ತೇವೆಂದು ಹೇಳಿದ ಕಾರ್ಯ ಆರಂಭ ವಾಗಿಲ್ಲ. ಎಪ್ರಿಲ್- ಮೇಯಲ್ಲಿನ ನೀರಿನ ಕೊರತೆಯಾಗದಂತೆ ಎಚ್ಚರವಹಿಸುವ ಕಾರ್ಯ ಆಡಳಿತ ಮಾಡಲೇ ಬೇಕಾದ ಅನಿವಾರ್ಯತೆಯಿದೆ.
ಪಯಸ್ವಿನಿ ನದಿಗೆ ಕಂದಡ್ಕ ಹಾಗೂ ಕಲ್ಲುಮುಟ್ಲುವಿನಲ್ಲಿ ಮರಳು ಕಟ್ಟ ಹಾಕಲಾಗಿದೆ. 10 ಬೋರ್ವೆಲ್ ಗಳ ಫಷ್ಔಟ್ ಮಾಡಿ ಬೇಸಗೆಯ ತಯಾರಿ ನಡೆದಿದೆ. ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು. ಕುಡಿ ಯುವ ನೀರನ್ನು ಬೇರೆ ಚಟುವಟಿಕೆಗಳಿಗೆ ಉಪಯೋಗಿಸಿದರೆ ಕ್ರಮ ಕೈಗೊಳ್ಳುತ್ತೇವೆ
-ವಿನಯ ಕುಮಾರ್ ಕಂದಡ್ಕ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ
ನಗರಕ್ಕೆ ಬರುವವರು ಹೆಚ್ಚಾಗಿ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಈಗ ವ್ಯಾಪಾರ ವೃದ್ಧಿಯಾಗಿದೆ. ಸೀಯಾಳ, ಕಲ್ಲಂಗಡಿ, ದಾಳಿಂಬೆ, ದ್ರಾಕ್ಷಿ ಹೆಚ್ಚು ಮಾರಾಟವಾಗುತ್ತಿದೆ.ೆ
-ಶರೀಫ್ ಬೆಳ್ಳಾರೆ, ಸುಳ್ಯ, ಹಣ್ಣಿನ ವ್ಯಾಪಾರಿ