ಬೆಲ್ಲ ತಯಾರಿಕಾ ಘಟಕದ ಮೇಲೆ ದಾಳಿ
Team Udayavani, Mar 22, 2021, 8:06 PM IST
ಹೊಸಪೇಟೆ: ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳು, ನಗರದ ಬೆನಕಾಪುರ ಮಾಗಣಿ ಪ್ರದೇಶದಲ್ಲಿರುವ ಬೆಲ್ಲ ತಯಾರಿಕಾ (ಆಲೆಮನೆ) ಘಟಕದ ಮೇಲೆ ದಿಢೀರ್ ದಾಳಿ ನಡೆಸಿದರು.
ಈ ವೇಳೆ ಘಟಕದಲ್ಲಿ ಸಂಗ್ರಹಿಸಿ ಇಡಲಾಗಿದ್ದ 250 ಕೆ.ಜಿ ತೂಕದ ಬೆಲ್ಲ ಮತ್ತು ಬಣ್ಣದ ಡಬ್ಬಗಳನ್ನು ವಶಪಡಿಸಿಕೊಂಡರು. ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರ ನಿರ್ದೇಶನದ ಮೇರೆಗೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಉಮೇಶ್ ಮತ್ತು ಅವರ ಸಿಬ್ಬಂದಿ ಸಮೀಪದ ಬೆನಕಾಪುರದಲ್ಲಿ ಕೆ.ಈಶ್ವರಪ್ಪ ಎನ್ನುವವರಿಗೆ ಸೇರಿದ ಬೆಲ್ಲ ತಯಾರಿಕಾ ಘಟಕದ ಮೇಲೆ ದಿಢೀರ್ ದಾಳಿ ನಡೆಸಿ, ಬೆಲ್ಲ ಹಾಗೂ ಬಣ್ಣದ ಡಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ತಾಲೂಕಿನ ಮಲಪನಗುಡಿ ಸುತ್ತಮುತ್ತ ಬೆಲ್ಲ ತಯಾರಿಕಾ ಘಟಕಗಳ ಮೇಲೆ ಉಪವಿಭಾಗಾ ಧಿಕಾರಿ ಸಿದ್ದರಾಮೇಶ್ವರ ಅವರು, ದಿಢೀರ್ ದಾಳಿ ನಡೆಸಿ, ಬೆಲ್ಲದ ಗುಣಮಟ್ಟ ಪರಿಶೀಲನೆ ನಡೆಸಿದ್ದರು. ಬೆಲ್ಲ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕ ವಸ್ತು ಬಳಕೆ ಮಾಡದೇ ಉತ್ತಮ ಗುಣಮಟ್ಟದ ಬೆಲ್ಲ ತಯಾರಿಸುವಂತೆ ಗಾಣದ ಮಾಲೀಕರಿಗೆ ಸೂಚನೆ ನೀಡಿದ್ದರು.