‘ಮದಗಜ’ ನಿರ್ದೇಶಕನಿಗೆ ‘ರಾಬರ್ಟ್’ ನಿರ್ಮಾಪಕರಿಂದ ದುಬಾರಿ ಗಿಫ್ಟ್
ರಾಬರ್ಟ್ ಚಿತ್ರಕ್ಕೆ ಅಮೋಘ ಗೆಲುವು ದೊರೆತಿದೆ. ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ.
Team Udayavani, Mar 26, 2021, 2:33 PM IST
ಬೆಂಗಳೂರು: ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ‘ಮದಗಜ’ ಚಿತ್ರದ ನಿರ್ದೇಶಕ ಎಸ್. ಮಹೇಶ್ ಕುಮಾರ್ ಅವರಿಗೆ ದುಬಾರಿ ಬೆಲೆಯ ಕಾರು ಉಡುಗೊರೆ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಗೆಲುವು ನಿರ್ಮಾಪಕ ಉಮಾಪತಿ ಗೌಡ ಅವರಿಗೆ ಖುಷಿ ನೀಡಿದೆ. ಈ ಚಿತ್ರಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರಕ್ಕೆ ಮಹೇಶ್ ಕುಮಾರ್ ಅವರು ಸಪೋರ್ಟ್ ಮಾಡಿದ್ದರು. ರಾಬರ್ಟ್ ಚಿತ್ರದ ಪ್ರತಿಯೊಂದು ಕಾರ್ಯಕ್ಕೆ ಕೈ ಜೋಡಿಸಿದ್ದರು. ಚಿತ್ರತಂಡಕ್ಕೆ ಬೇಕಾದ ನೆರವು ನೀಡಿದ್ದರು. ಅವರ ಈ ಸಹಕಾರಕ್ಕೆ ಖುಷಿಪಟ್ಟಿರುವ ಉಮಾಪತಿ ಅವರು ಮಹೇಶ್ ಅವರಿಗೆ ಉಡುಗೊರೆಯಾಗಿ ಹೊಸ ಕಾರು ನೀಡಿದ್ದಾರೆ.
ಇನ್ನು ತಮ್ಮ ಮನೆಗೆ ಉಡುಗೊರೆ ರೂಪದಲ್ಲಿ ಬಂದ ಹೊಸ ಕಾರಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿರುವ ಮಹೇಶ್, ನನ್ನ ಜೀವನದ ಮೊದಲ ಕಾರು ಉಡುಗೊರೆಯಾಗಿ ನೀಡಿದ ನನ್ನ ಪ್ರೀತಿಯ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಶತಕೋಟಿ ಧನ್ಯವಾದಗಳು ಎಂದಿದ್ದಾರೆ.
ಇನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಬಹುನಿರೀಕ್ಷಿತ ಮದಗಜ ಚಿತ್ರಕ್ಕೆ ಮಹೇಶ್ ಕುಮಾರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಉಮಾಪತಿ ಗೌಡ ನಿರ್ಮಾಪಕರಾಗಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪೈಕಿ ಮದಗಜ ಕೂಡ ಒಂದಾಗಿದೆ.
ಇನ್ನು ಮಾರ್ಚ್ 11 ರಂದು ಬಿಡುಗಡೆಯಾಗಿರುವ ರಾಬರ್ಟ್ ಚಿತ್ರಕ್ಕೆ ಅಮೋಘ ಗೆಲುವು ದೊರೆತಿದೆ. ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ.
View this post on Instagram