Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು
Team Udayavani, May 5, 2024, 1:19 AM IST
ಸುರತ್ಕಲ್: ಸೂರಿಂಜೆ ಸಹಿತ ಮೂರು-ನಾಲ್ಕು ಗ್ರಾಮ ಪಂಚಾಯತ್ಗಳ ಕೃಷಿಕರ ಜೀವನಾಡಿಯಾಗಿದ್ದ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬೆಟ್ಟು ಮಠದ ಬಳಿಯ ಕಿಂಡಿ ಅಣೆಕಟ್ಟು ಕುಸಿದುಬಿದ್ದಿದೆ. ಇದರಿಂದ ಕಟೀಲು ಶಿಬರೂರು ಕಾಲುದಾರಿಯ ಸಂಪರ್ಕವೂ ಕಡಿತಗೊಂಡಿದೆ.
15 ವರ್ಷಗಳ ಹಿಂದೆ ಇದರ ನಿರ್ಮಾಣವಾಗಿತ್ತು. ಸೂರಿಂಜೆ, ಎಕ್ಕಾರು, ಕಟೀಲು ಗ್ರಾಮದ ಕೃಷಿಕರ ತೋಟಗಳಿಗೆ ಈ ಅಣೆಕಟ್ಟಿನ ನೀರು ಬಳಕೆಯಾಗುತ್ತಿತ್ತು. ನೂರಾರು ಎಕರೆ ಗದ್ದೆ, ಅಡಿಕೆ, ತೆಂಗುಗಳಿಗೆ ಆಧಾರವಾಗಿತ್ತು. ಕಟೀಲು ಸೂರಿಂಜೆಯನ್ನು ಕಾಲ್ನಡಿಗೆ ಮೂಲಕ ಸಂಪರ್ಕ ಕಲ್ಪಿಸುವ ಈ ಅಣೆಕಟ್ಟನ್ನು ಹೆಚ್ಚಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮದ ಜನರು ಪೇಟೆ ತಲುಪಲು ಬಳಸುತ್ತಿದ್ದು, ಇನ್ನು ಮಳೆಗಾಲದಲ್ಲಿ ಕನಿಷ್ಠ 10 ಕಿ.ಮೀ. ಸುತ್ತು ಬಳಸಿ ಹೋಗಬೇಕಾದ ಸ್ಥಿತಿ ಉಂಟಾಗಿದೆ.
ಮಳೆಗಾಲ ಆರಂಭವಾಗಲು ಒಂದೇ ತಿಂಗಳು ಇರುವುದರಿಂದ ಇದರ ದುರಸ್ತಿ ಕಾರ್ಯವೂ ಅಸಾಧ್ಯ. ಇನ್ನು ಹೊಸದಾಗಿಯೇ ಅಣೆಕಟ್ಟು ನಿರ್ಮಿಸಬೇಕಿದೆ. ಇದಕ್ಕೆ ನಾನಾ ಪ್ರಕ್ರಿಯೆ ಆಗಬೇಕಿರುವುದರಿಂದ ಮುಂದಿನ ಒಂದೆರಡು ವರ್ಷ ಸ್ಥಳೀಯ ಕೃಷಿ ಚಟುವಟಿಕೆಗೆ ನೀರಿಲ್ಲದೆ ಸಮಸ್ಯೆಯಾಗುವ ಆತಂಕ ಎದುರಾಗಿದೆ.
ನದಿಯಲ್ಲಿ ಸಾಕಷ್ಟು
ನೀರಿಲ್ಲದಿದ್ದರೂ ಕುಸಿತ!
ಕಿರು ಕಿಂಡಿ ಅಣೆಕಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ನೀರನ್ನು ಹಿಡಿದಿಡುವ ಪ್ರಯತ್ನ ನಡೆದಿತ್ತು. ಆದರೆ ಆಣೆಕಟ್ಟಿನ ತಳಭಾಗವೇ ನೀರು ಶೇಖರಿಸಿರುವ ಕಡೆ ವಾಲಿದಂತಿದೆ. ಅಣೆಕಟ್ಟು ಬುಡದಿಂದಲೇ ಭಾರೀ ಪ್ರಮಾಣದಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಒಂದೇ ಸಮನೆ ಮರಳು ಕೊರೆತವಾದ ಕಾರಣ ತಳಭಾಗದಲ್ಲಿ ಪಿಲ್ಲರ್ಗಳಿಗೆ ಆಧಾರ ಸಿಗದೆ ಆಣೆಕಟ್ಟು ಕುಸಿದು ಬಿದ್ದಿರುವ ಸಾಧ್ಯತೆಯಿದೆ ಎಂಬುದು ಕೃಷಿಕರ ಅನಿಸಿಕೆ. 50 ವರ್ಷ ಬಾಳಿಕೆ ಬರಬೇಕಾದ ಸೇತುವೆ ಕೇವಲ 15 ವರ್ಷಗಳಲ್ಲಿ ಕುಸಿದು ಬೀಳಲು ಕಾರಣವೇನು ಎಂಬ ಬಗ್ಗೆ ಲೋಕೋಪಯೋಗಿ ಇಲಾಖೆ ತನಿಖೆ ನಡೆಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.