ಐಗಿನಬೈಲಿನಲ್ಲಿ ವೀರಗಲ್ಲು ಪತ್ತೆ
Team Udayavani, Apr 12, 2021, 9:10 PM IST
ಸಾಗರ: ತಾಲೂಕಿನ ಐಗಿನಬೈಲಿನಲ್ಲಿ 16 ಅಥವಾ 17ನೇ ಶತಮಾನಕ್ಕೆ ಸೇರಿದ ಒಂದು ವೀರಗಲ್ಲು ಶನಿವಾರ ಪತ್ತೆಯಾಗಿದೆ.
ಐಗಿನಬೈಲಿನಲ್ಲಿ ದಿನೇಶ ಎಂಬುವವರು ಶುಂಠಿ ಬೆಳೆಯುವ ಸಲುವಾಗಿ ಕೆಲಸ ಮಾಡುತ್ತಿದ್ದಾಗ ವೀರಗಲ್ಲು ಪತ್ತೆಯಾಗಿದೆ. ವೀರಗಲ್ಲಿಗೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ಲಿಪಿಯಿರುವ ಪಟ್ಟಿಕೆಗಳಿಗೆ ಸಂಪೂರ್ಣ ಕುಂಕುಮ ಹಚ್ಚಿದ್ದಾರೆ.
ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾದ ವೀರಗಲ್ಲಿನ ಬಗ್ಗೆ ತಜ್ಞರು ಆಸಕ್ತಿ ತೋರಿಸಬೇಕು. ಇಂತಹ ವೀರಗಲ್ಲುಗಳ ಸಂರಕ್ಷಣೆ ಸಂಬಂಧ ಸ್ಥಳೀಯ ಆಡಳಿತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ವೀರಗಲ್ಲಿನ ಎರಡು ಪಟ್ಟಿಕೆಗಳಲ್ಲಿ ಬರಹ ಮತ್ತು 3 ಹಂತದಲ್ಲಿ ಚಿತ್ರಣವಿದೆ. ಮೊದಲ ಹಂತದಲ್ಲಿ ಯುದ್ಧದ ಚಿತ್ರಣ, ನಂತರ ವೀರನ ಸ್ವರ್ಗ ಪ್ರಯಾಣದ ಚಿತ್ರಣ ಇದೆ. 3ನೇ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯ ಪಡೆದ ಚಿತ್ರಣ ಕಾಣಬಹುದಾಗಿದೆ. ಶೈಲಿಯನ್ನು ಗಮನಿಸಿದಾಗ ಇದು ವಿಜಯನಗರ ಕಾಲದ ವೀರಗಲ್ಲು ಎಂದು ಅನಿಸುತ್ತದೆ ಎಂದು ಇತಿಹಾಸ ತಜ್ಞ ಡಾ| ಕೆ.ಪ್ರಭಾಕರರಾವ್ ಅಭಿಪ್ರಾಯಪಡುತ್ತಾರೆ.