ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಕನ್ನಡಿಗ ಮೋಹನ್ ಶಾಂತನಗೌಡರ್ ನಿಧನ
Team Udayavani, Apr 25, 2021, 7:54 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ, ಕರ್ನಾಟಕದ ಮೋಹನ್ ಮಲ್ಲಿಕಾರ್ಜುನ ಶಾಂತನಗೌಡರ್ (61 ವ) ಅವರು ಶನಿವಾರ ರಾತ್ರಿ ನಿಧನರಾದರು.
ಇತ್ತೀಚೆಗೆ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದ ಅವರು ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಜನಿಸಿದ್ದ ಮೋಹನ್ ಶಾಂತಗೌಡರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. 1980ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಅವರು, 2003ರಲ್ಲಿ ರಾಜ್ಯ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2004ರಲ್ಲಿ ನ್ಯಾಯಮೂರ್ತಿಯಾಗಿ ಮೋಹನ್ ಶಾಂತಗೌಡರ್ ನೇಮಕವಾಗಿದ್ದರು.
2016ರಲ್ಲಿ ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದ ಅವರು 2017ರಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.