ಅಂತ್ಯಕ್ರಿಯೆಗೆ ಬಾರದ ಆರೋಗ್ಯ ಇಲಾಖೆ ಸಿಬ್ಬಂದಿ
ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Team Udayavani, Apr 29, 2021, 7:17 PM IST
ಹಾವೇರಿ: ಕೋವಿಡ್ ಸೋಂಕಿನಿಂದ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಅಧಿಕಗೊಂಡಿದ್ದು, ನಿತ್ಯ ಸರಾಸರಿ 2-3 ಸೋಂಕಿತರು ಮೃತರಾಗುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಮೃತದೇಹವನ್ನು ಪ್ಯಾಕ್ ಮಾಡಿಕೊಂಡು ಆಂಬ್ಯುಲೆನ್ಸ್ನಲ್ಲಿ ಮಲಗುಂದ ಗ್ರಾಮಕ್ಕೆ ತರಲಾಗಿತ್ತು. ಆದರೆ ಕೊರೊನಾ ಆತಂಕದಿಂದಾಗಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕಿದ್ದರಿಂದ ಅಂಬ್ಯುಲೆನ್ಸ್ ಚಾಲಕ ಸುಮಾರು 2 ಗಂಟೆಗಳ ಕಾಲ ಮೃತದೇಹವನ್ನು ವಾಹನದಲ್ಲಿಯೇ ಇಟ್ಟುಕೊಂಡು ಕಾಲ ಕಳೆಯುವಂತಾಯಿತು.
ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾರೊಬ್ಬರೂ ಬಾರದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.