ಬಡವರಿಗೆ ಕೋವಿಡ್ ಚಿಕಿತ್ಸೆ ಉಚಿತ: ಪಾಟೀಲ
Team Udayavani, Apr 29, 2021, 7:27 PM IST
ಹಿರೇಕೆರೂರ: ಕೋವಿಡ್ ಕಾಯಿಲೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರಟ್ಟಿಹಳ್ಳಿ-ಹಿರೇಕೆರೂರ ತಾಲೂಕಿನ ಬಡತನ ರೇಖೆಗಿಂತ ಕೆಳಗಿನವರಿಗೆ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಕಟಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡ ಅವಳಿ ತಾಲೂಕಿನಲ್ಲಿನ ಬಡತನ ರೇಖೆಗಿಂತ ಕೆಳಗಿನವರು ತಮ್ಮ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಮತ್ತು ವೆಚ್ಚ ಮಾಡಿದ ಬಿಲ್ಗಳನ್ನು ನೀಡಿದರೆ ಚಿಕಿತ್ಸೆ ವೆಚ್ಚವನ್ನು ನೀಡಲಾಗುವುದು. ಮಾಹಿತಿಗಾಗಿ ಸಚಿವರ ಆಪ್ತ ಸಹಾಯಕ ನಾಗರಾಜ ಬಣಕಾರ ಮೊ: 9739310272, ಮನೋಜ್ ಹಾರ್ನಳ್ಳಿ ಮೊ: 9164704080 ಸಂಪರ್ಕಿಸಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ತಾಲೂಕಿಗೆ ಹೊರಗಿನಿಂದ ಬಂದವರು ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಿಡಿಒ ಮತ್ತು ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ಹೊರಗಿನಿಂದ ಬಂದವರನ್ನು ಪತ್ತೆ ಮಾಡಿ ಅವರನ್ನು ಕೋವಿಡ್ ಪರೀಕ್ಷೆ ಒಳಪಡಿಸಬೇಕು ಎಂದು ಸೂಚಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ, ಶಂಭಣ್ಣ ಗೊಳಪ್ಪನವರ, ಗಣೇಶ ವೆರ್ಣೇಕರ ಇದ್ದರು.