“2023ರ ವೇಳೆಗೆ ಬುಲೆಟ್ ರೈಲ್ವೇ ಯೋಜನೆ ಪೂರ್ಣಗೊಳ್ಳದು”
Team Udayavani, May 27, 2021, 1:14 PM IST
ಮುಂಬಯಿ: ಮುಂಬಯಿ- ಅಹಮದಾಬಾದ್ ಬುಲೆಟ್ ರೈಲು ಯೋಜನೆ ಗಾಗಿ ಭೂಸ್ವಾಧೀನ ಸ್ಥಗಿತಗೊಂಡಿದ್ದು, ಬಾಂದ್ರಾ – ಕುರ್ಲಾ ಸಂಕೀರ್ಣದ ನಿರ್ಮಾಣದ ಟೆಂಡರ್ಗಳನ್ನು ಹಲವಾರು ಬಾರಿ ಮುಂದೂಡಲಾಗಿದೆ.
ಕಳೆದ ಹತ್ತು ತಿಂಗಳಲ್ಲಿ ಅಗತ್ಯವಿರುವ ಒಟ್ಟು ಭೂಮಿಯಲ್ಲಿ ಶೇ. 1 ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಕೆಲಸ ಸ್ಥಗಿತ ಗೊಂಡಿದೆ. ಇತರ ಭಾಗಗಳಲ್ಲಿ ಕೆಲಸವು ವೇಗ ವನ್ನು ಗಳಿಸಿಲ್ಲ. ಲಾಕ್ಡೌನ್ ಕಾರಣ 2023ರ ವೇಳೆಗೆ ಬುಲೆಟ್ ರೈಲು ಯೋಜನೆಯನ್ನು ಪೂರ್ಣಗೊಳಿಸುವುದು ಅಸಾಧ್ಯ ಎಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಹೈ ಸ್ಪೀಡ್ ರೈಲ್ವೆ ನಿಗಮ ಸ್ಪಷ್ಟಪಡಿಸಿದೆ.
ಬಾಂದ್ರಾ ಕುರ್ಲಾ ಸಂಕೀರ್ಣವು ಬುಲೆಟ್ ರೈಲು ಯೋಜನೆಯ ಆರಂಭಿಕ ಭೂಗತ ನಿಲ್ದಾಣವಾಗಿರುತ್ತದೆ. ಇದಕ್ಕಾಗಿ ಸುರಂಗ ಕೆಲಸ, ನಿಲ್ದಾಣ ನಿರ್ಮಾಣ ಮತ್ತು ಇತರ ತಾಂತ್ರಿಕ ಕಾರ್ಯಗಳ ಟೆಂಡರ್ ಅನ್ನು ಹೈ ಸ್ಪೀಡ್ ರೈಲ್ವೇ ನಿಗಮ ಫೆ. 19ರಂದು ತೆರೆಯಬೇಕಿತ್ತು. ನಿಲ್ದಾಣವನ್ನು ಸ್ಥಾಪಿಸಬೇಕಾದ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಪೆಟ್ರೋಲ್ ಪಂಪ್ ಇದೆ. ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ತೆರೆಯಲು ಮೇ 5ರಂದು ನಿರ್ಧರಿಸಲಾಯಿತು. ಆದರೆ ಯಾವುದೇ ಒಪ್ಪಂದಕ್ಕೆ ಬಾರದ ಕಾರಣ ಜೂನ್ನಲ್ಲಿ ಮತ್ತು ಈಗ ಆಗಸ್ಟ್ನಲ್ಲಿ ಟೆಂಡರ್ ತೆರೆಯಲು ನಿಗಮ ನಿರ್ಧರಿಸಿದೆ. ಇದರ ಪರಿಣಾಮವಾಗಿ ನಿಲ್ದಾಣದ ನಿರ್ಮಾಣ ಮತ್ತಷ್ಟು ವಿಳಂಬವಾಗಿದೆ.
ಪಾಲ^ರ್ ಮತ್ತು ಥಾಣೆ ಜಿಲ್ಲೆ ಗಳಲ್ಲಿ ಬುಲೆಟ್ ರೈಲಿಗೆ ಸರಾಸರಿ ಭೂಸ್ವಾಧೀನವು ರಾಜ್ಯದಲ್ಲಿ ಕೇವಲ ಶೇ. 24ರಷ್ಟಾಗಿದೆ. ದಾದ್ರಾ-ನಗರ ಹವೇಲಿಯಲ್ಲಿ ಇದು ಶೇ. 100 ಮತ್ತು ಗುಜರಾತ್ನಲ್ಲಿ ಶೇ. 94ರಷ್ಟಿದೆ. ಕೊರೊನಾ ಲಾಕ್ಡೌನ್ ಕಾರಣ ಕೆಲಸ ಕುಂಠಿತವಾಗಿದೆ. ಮಹಾರಾಷ್ಟ್ರದಲ್ಲಿ ಭೂಸ್ವಾಧೀನಕ್ಕೆ ಮುಂದುವರಿಯಲು ಸಾಧ್ಯವಾಗಲಿಲ್ಲ.