ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ : ಸಿದ್ದರಾಮಯ್ಯ
Team Udayavani, May 28, 2021, 1:56 PM IST
ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ, ಮತ್ತೊಬ್ಬ ಸಮರ್ಥರು ಯಾರಿದ್ದಾರೆ. ಯಾರು ಇಲ್ಲ, ಅದಕ್ಕೆ ಬಿಜೆಪಿಯಲ್ಲಿ ಬೀದಿಕಾಳಗ ನಡೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ನನಗೆ ವೈಯಕ್ತಿಕ ಪ್ರೀತಿಯು ಇಲ್ಲ, ದ್ವೇಷನೂ ಇಲ್ಲ. ಮನುಷತ್ವದ ಪ್ರೀತಿ ಇದೆ ಎಂದರು. ಸಚಿವ ಸಿ.ಪಿ.ಯೋಗೇಶ್ವರಗೆ ಲೂಟಿ ಹೊಡೆಯುವ ಖಾತೆ ಸಿಗಲಿಲ್ಲವೆಂದು, ಸಿಎಂ ಬದಲಾವಣೆಗೆ ಮುಂದಾಗಿದ್ದಾರೆಂದು, ಸಿಎಂ ರಾಜಕೀಯ ಕಾರ್ಯದರ್ಶಿಯೇ ಆರೋಪಿಸಿದ್ದಾರೆ. ಇದು ಬಿಜೆಪಿಯ ಬೀದಿರಂಪ ಅಲ್ಲದೆ ಮತ್ತೇನು ಎಂದರು. ಕೊರೊನಾ ನಿರ್ವಹಣೆಯಲ್ಲಿ ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ.
ದೇಶದ ಇತಿಹಾಸದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಜೊತೆ ಗೃಹ ಸಚಿವರು ಭೇಟಿಯಾದರು, ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ರಮೇಶ ಜಾರಕಿಹೋಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಸಂತ್ರಸ್ತೆಯು ಅವರ ವಿರುದ್ಧ ಹೇಳಿಕೆ ಕೊಟ್ಟ ನಂತರವು ಸರ್ಕಾರ ಆರೋಪಿಯನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಇಡೀ ದೇಶದಲ್ಲಿ ಇಂತಹ ಬೆಳವಣಿಗೆ ಎಲ್ಲಿಯಾದರೂ ನೋಡಲು ಸಾಧ್ಯವೇ, ಎಸ್ ಐಟಿಯ ತನಿಖಾಧಿಕಾರಿಯನ್ನು ರಜೆ ಮೇಲೆ ಕಳಿಸಿದ್ದಾರೆ. ಇದರ ಅರ್ಥ ಏನು ಎಂದರು.