ಮೂರನೇ ಅಲೆ ತಡೆಗೆ ಸಲಹೆ ನೀಡಿ
Team Udayavani, Jun 3, 2021, 10:56 PM IST
ಚಿಕ್ಕಮಗಳೂರು: ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ನೇಮಿಸಿರುವ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವಂತೆ ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ತಜ್ಞ ವೈದ್ಯರಿಗೆ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಮತ್ತು ಖಾಸಗಿ ತಜ್ಞವೈದ್ಯರ ಸಭೆ ನಡೆಸಿ ಮಾತನಾಡಿದ ಅವರು, 3ನೇ ಅಲೆ ನಿಯಂತ್ರಿಸಲು ಕೋವಿಡ್ ಮಾರ್ಗಸೂಚಿ, ಆಸ್ಪತ್ರೆ ಸೌಲಭ್ಯಗಳ ಕುರಿತು ತಜ್ಞರ ಸಮಿತಿ ನೇಮಿಸಿದ್ದು, ಕಾಲಕಾಲಕ್ಕೆ ವರದಿ ನೀಡುವಂತೆ ಸರ್ಕಾರ ಮತ್ತು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿದರು.
ತಜ್ಞರ ಸಮಿತಿ ಕೋವಿಡ್ ನಿರ್ವಹಣೆ ಪ್ರತಿ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸು ವುದರ ಜತೆಗೆ ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಲಹೆ, ವೈದ್ಯರಿಗೆ ತರಬೇತಿ, ಔಷಧ ಪೂರೈಕೆ, ಹಾಸಿಗೆ ಲಭ್ಯತೆ, ಬ್ಲಾ ಕ್ ಫಂಗಸ್, ಆಸ್ಪತ್ರೆಯಲ್ಲಿ ಮೂಲ ಸೌಲಭ್ಯ ಈ ಎಲ್ಲಾ ಕ್ರಮಗಳ ಕುರಿತ ವರದಿ ನೀಡುವಂತೆ ಹೇಳಿದರು. ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗಿರುವ ಕಡೂರು ಮತ್ತು ತರೀಕೆರೆ ತಾಲೂಕುಗಳಿಗೆ ತಜ್ಞರ ಸಮಿತಿ ಭೇಟಿ ನೀಡಲಿದ್ದು ಸೋಂಕಿತರಿಗೆ ಊಟ ಉಪಾಹಾರದ ವ್ಯವಸ್ಥೆ, ಆಕ್ಸಿಜನ್, ಆಸ್ಪತ್ರೆಗಳಲ್ಲಿ ಮಾರ್ಗಸೂಚಿ ಅನುಸರಿಸಲಾಗುತ್ತಿದೆಯೇ, ಸಾವಿನ ಲೆಕ್ಕವನ್ನು ಸಮರ್ಪಕವಾಗಿ ನೀಡುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಜಿಲ್ಲಾಸರ್ಜನ್ ಡಾ|ಮೋಹನ್ ಕುಮಾರ್ ತಿಳಿಸಿದರು.
ಕೋವಿಡ್ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಯಾವ ಮಾದರಿಯಲ್ಲಿ ಜಾಗೃತಿ ಮೂಡಿಸಬೇಕೆಂದು ತಜ್ಞರ ಸಮಿತಿ ಸಲಹೆ ನೀಡಿದರೆ, ಕೂಡಲೇ ಗ್ರಾಪಂ ಮಟ್ಟದಲ್ಲಿ ಆರಂಭಿಸಲಾಗುವುದು ಎಂದು ಜಿ.ಪಂ ಸಿಇಒ ಎಸ್.ಪೂವಿತ ಹೇಳಿದರು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. 32 ಜನ ಸೋಂಕಿತರನ್ನು ನೋಡಿಕೊಳ್ಳಲು ಕನಿಷ್ಠ ಸಿಬ್ಬಂದಿ ಅಗತ್ಯವಿದೆ. ಬೇರೆ ಇಲಾಖೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಪ್ರಯೋಜನವಾಗುವುದಿಲ್ಲ. ತಕ್ಷಣ ಸಿಬ್ಬಂದಿ ನೇಮಕವಾಗಬೇಕು. ಹಾಗೂ ಕ್ಷಕಿರಣ ಯಂತ್ರದ ಅಗತ್ಯವಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಜಿಲ್ಲಾಡಳಿತಕ್ಕೆ ಸಲಹೆ ನೀಡಿ ದರು.
ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಇಬ್ಬರು ಕ್ಷಕಿರಣ ತಜ್ಞರನ್ನು ತಕ್ಷಣ ನೇಮಿಸಿಕೊಳ್ಳುವ ಅಗತ್ಯವಿದೆ. ಒಬ್ಬೊಬ್ಬ ವೈದ್ಯರು ಒಂದೊಂದು ರೀತಿಯ ಚಿಕಿತ್ಸೆ ನೀಡುವ ಬದಲು ತಜ್ಞ ವೈದ್ಯರು ಚರ್ಚಿಸಿ ಒಂದೇ ರೀತಿಯ ಚಿಕಿತ್ಸೆಗೆ ಮುಂದಾಗಬೇಕು. 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿ ಸಲಿದೆ ಎಂದು ತಜ್ಞರು ಹೇಳುತ್ತಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಎಂದರು. ತಜ್ಞ ವೈದ್ಯ ಚಂದ್ರಶೇಖರ್ ಹಿರೇಮಠ ಮಾತನಾಡಿ, ಲಸಿಕೆ ವಿತರಣೆ ಚುರುಕುಗೊಳಿಸಬೇಕು. ಅಗತ್ಯ ಸಿಬ್ಬಂದಿಯನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಮುಂದೆ ತೊಂದರೆಯಾಗಲಿದೆ ಎಂದು ಹೇಳಿದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸಲು ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡಬೇಕು. ಕೋವಿಡ್ 3ನೇ ಅಲೆ ಎರಡು ತಿಂಗಳು ಮೂರು ತಿಂಗಳಲ್ಲಿ ಬರುತ್ತದೆ. ಅದು ಮಕ್ಕಳಿಗೆ ಅಪಾಯ ಉಂಟು ಮಾಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ಶುದ್ಧಸುಳ್ಳು, ಮುಂದಿನ ಮಾರ್ಚ್ ಅಂತ್ಯಕ್ಕೆ ಬರಬಹುದು ಬಾರದೇ ಇರಬಹುದು.
ಅಗತ್ಯ ಮೂಲ ಸೌಲಭ್ಯ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು ಎಂದು ಡಾ|ರಾಜು ತಿಳಿಸಿದರು. ಮಕ್ಕಳಿಗೆ ಜ್ವರ ಬಂದರೆ ಆಸ್ಪತ್ರೆಗೆ ತೋರಿಸಲು ಬರುತ್ತಾರೆ. ಮನೆಗೆ ಹೋದ ಮೇಲೆ ದೂರವಾಣಿ ಕರೆಮಾಡಿ ತಮಗೂ ಸೋಂಕು ತಗುಲಿರುವ ಬಗ್ಗೆ ಪೋಷಕರು ತಿಳಿಸುತ್ತಾರೆ. ಲಸಿಕೆ ಹಾಕಿಕೊಳ್ಳಬೇಕು. ಇದರೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ವೈದ್ಯ ರಮೇಶ್ಕುಮಾರ್ ಹೇಳಿದರು. ಕಲ್ಮನೆಯಲ್ಲಿ 50ರಿಂದ60 ಮಕ್ಕಳಿಗೆ ಚಿಕಿತ್ಸೆ ನೀಡುವಷ್ಟು ಸ್ಥಳವಕಾಶವಿದೆ.
ಅಲ್ಲಿ ಚಿಕಿತ್ಸೆ ಮುಂದುವರಿಸಬಹುದಾಗಿದೆ. 3ನೇಅಲೆ ಸೂಕ್ಷ್ಮವಾಗಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರು ಕೈ ಜೋಡಿಸುವುದಾಗಿ ತಿಳಿಸಿದರು. ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಭಯಹುಟ್ಟಿಸಬಾರದು. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯಿಂದ ಸೋಂಕು ತಗುಲದಂತೆ ನಮ್ಮನ್ನು ಕಾಪಾಡಿಕೊಳ್ಳಬಹುದು.
ಮಕ್ಕಳಿಗೆ ಸೋಂಕು ತಗುಲಿದರೇ ಪೋಷಕರು ಎಚ್ಚರ ವಹಿಸಬೇಕು. ಕೆಲವು ಮಕ್ಕಳು ಮಾಸ್ಕ್ ಧರಿಸಲು ಖುಷಿಪಡುತ್ತಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದಾಗ ಕಾಟೂìನ್ ಚಿತ್ರವಿರುವ ಮಾಸ್ಕ್ ತಯಾರಿಸಿದರೇ ಮಕ್ಕಳು ಖುಷಿಯಿಂದ ಧರಿಸುತ್ತಾರೆ ಎಂದು ಸಲಹೆ ನೀಡಿದರು.
ಡಾ|ಪ್ಯಾಟ್ರಿಕ್, ಡಾ|ನಿಯತ್, ಡಾ|ರಾಜು, ಡಾ|ರಮೇಶ್ಕುಮಾರ್, ಡಾ|ಚಂದ್ರಶೇಖರ್ ಸಾಲಿಮಠ, ಹರಿದರ್ಶನ್, ಬಾಳೆಹೊನ್ನೂರು ಡಾ|ರಮೇಶ್, ಡಾ|ರಾಮಕೃಷ್ಣ, ಡಾ|ಅಶ್ವಿನಿ, ಎಸ್ಪಿ ಎಚ್.ಎಂ.ಅಕ್ಷಯ್, ಡಾ|ಅಶ್ವತ್ಬಾಬು, ಡಾ|ಉಮೇಶ್ ಉಪಸ್ಥಿತರಿದ್ದರು.