ಚಿಕ್ಕಬಳ್ಳಾಪುರ: ರಕ್ತದಾನದಲ್ಲಿ ಮಾದರಿಯಾದ ಶಿರಸ್ತೆದಾರ ಮಂಜುನಾಥ್ ಮತ್ತು ಟಿ.ಟಿ ನರಸಿಂಹ
Team Udayavani, Jun 14, 2021, 3:25 PM IST
ಚಿಕ್ಕಬಳ್ಳಾಪುರ: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ ಎಂದು ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಆದರೂ ಸಹ ರಕ್ತದಾನ ಮಾಡಲು ಜನ ಹಿಂದೆ ಮುಂದೆ ನೋಡುವುದು ಸಹಜ. ಆದರೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಹಾಗೂ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿರುವ ಟಿ.ಟಿ ನರಸಿಂಹ ಅವರು ತಲಾ 50 ಮತ್ತು 45 ಬಾರಿಗೆ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಜೂನ್ 14 ರಂದು ವಿಶ್ವದಲ್ಲಿ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಕೋವಿಡ್ ಸೋಂಕಿನ ಪ್ರಭಾವದಿಂದ ರಕ್ತದಾನಿಗಳ ಕೊರತೆಯೂ ಪ್ರಸಕ್ತ ಸಾಲಿನಲ್ಲಿ ಕಾಡುತ್ತಿದೆ. ಜೊತೆಗೆ ಕೋವಿಡ್-19 ಲಸಿಕೆ ಪಡೆದುಕೊಂಡ ಬಳಿಕ ಕನಿಷ್ಠ 2 ತಿಂಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಜಿಲ್ಲೆಯಲ್ಲಿ ಭಾರತೀಯ ರೆಡ್ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹ ಆಗುತ್ತಿಲ್ಲ. ಈ ಮಧ್ಯೆ ಜಿಲ್ಲೆಯಲ್ಲಿ ಶಿಡ್ಲಘಟ್ಟ ನಗರದ ತಾಲೂಕು ಕಚೇರಿಯಲ್ಲಿ ಹಕ್ಕುದಾಖಲೆ ವಿಭಾಗ ದಲ್ಲಿ ಶಿರಸ್ತೆದಾರ ಆಗಿ ಸೇವೆ ಸಲ್ಲಿಸುತ್ತಿರುವ ಕೆ.ಎನ್.ಎಂ ಮಂಜುನಾಥ್ ರಕ್ತದಾನಿಗಳಿಗೆ ಮಾದರಿಯಾಗಿದ್ದಾರೆ. ಹೌದು, ಇವರು ಇದುವರೆಗೆ ಸುಮಾರು 50 ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಗೆ ರಕ್ತದ ಕೊರತೆ ಕಂಡಬಂದ ಹಿನ್ನೆಲೆಯಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ರಕ್ತದಾನ ಮಾಡಿದ ಶಿರಸ್ತೇದಾರ ಮಂಜುನಾಥ್ ನಂತರ ವಿವಿಧಡೆ ಕಾರ್ಯ ನಿರ್ವಹಿಸಿ ಇದುವರೆಗೆ 50 ಬಾರಿ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿರುವ ನಿಜವಾದ ಹೀರೋ ಆಗಿದ್ದಾರೆ. ರಕ್ತದಾನ ಮಾಡುವುದು ಬಡವರ ಸೇವೆಯಿಂದ ಸಿಗುವ ತೃಪ್ತಿ ಬೇರೆ ಯಾವುದರಲ್ಲಿ ಸಿಗುವುದಿಲ್ಲ ಎನ್ನುತ್ತಾರೆ ಮಂಜುನಾಥ್.
ಶಿಡ್ಲಘಟ್ಟ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನೇಷಿಯನ್ ಆಗಿ ಪ್ರಸ್ತುತ ಕೆ.ಮುತ್ತಕದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜನೆಗೆ ಮೇರೆಗೆ ಸೇವೆ ಸಲ್ಲಿಸುತ್ತಿರುವ ಟಿ.ಟಿ ನರಸಿಂಹ ಈಗಾಗಲೇ 45 ಬಾರಿ ರಕ್ತದಾನ ಮಾಡಿದ್ದಾರೆ. ತಾಲೂಕು ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಟಿಟಿ ನರಸಿಂಹ ಅವರು ಬಿಎ ವ್ಯಾಸಂಗ ಮಾಡುವ ವೇಳೆಯಲ್ಲಿ ಪ್ರಥಮ ಬಾರಿ ರಕ್ತದಾನ ಮಾಡಿದ್ದರು. 9 ತರಗತಿ ಎನ್.ಸಿ.ಸಿಯಲ್ಲಿ ಸೇರಿಕೊಂಡಾಗ ಅವರ ಕಾಲಿಗೆ ಪೆಟ್ಟು ಬಿದ್ದಿತ್ತು ಚಿಕ್ಕಬಳ್ಳಾಪುರದ ಸಿ.ಎಸ್.ಐ ಆಸ್ಪತ್ರೆಯಲ್ಲಿ ದಾಖಲೆ ಆಗಿದ್ದಾಗ ರಕ್ತದಾನ ಮಾಡಲು ಹಿಂಜರಿದಿದ್ದರು. ಅದರಿಂದ ಪ್ರಭಾವಿತರಾಗಿ ರಕ್ತದಾನ ಮಾಡಲು ಆರಂಭ ಮಾಡಿದ್ದು, ರಕ್ತದಾನದ ಮಹತ್ವದ ಕುರಿತು ಯುವಕರು, ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:ಜೂ.14 ವಿಶ್ವ ರಕ್ತದಾನಿಗಳ ದಿನ; ಜೀವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ
ವರ್ಷಕ್ಕೆ ಅಥವಾ 2 ವರ್ಷಕ್ಕೆ ಒಮ್ಮೆ ರಕ್ತದಾನ ಮಾಡುತ್ತಿದ್ದರು. ನಂತರ 6 ತಿಂಗಳಿಗೆ ಒಂದು ಬಾರಿಗೆ ಕೊಡುತ್ತಿದ್ದರು. ಆ ಮೇಲೆ 3 ತಿಂಗಳಿಗೆ ಒಮ್ಮೆ ರಕ್ತ ಕೊಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆ.ಮುತ್ತದಕಹಳ್ಳಿ ಪಿಹೆಚ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೆಟಲ್ ಬ್ಯಾಡ್ಮಿಂಟನ್ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿದರು. ಚೆಸ್ನಲ್ಲಿ ಮೂರು ಬಾರಿ ರಾಜ್ಯ ಮಟ್ಟಕ್ಕೆ ಹೋಗಿ ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಒಟ್ಟಾರೇ ಶಿಡ್ಲಘಟ್ಟ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಸರ್ಕಾರಿ ನೌಕರರು ಮಾತ್ರ ಬೇರೆಯವರ ಜೀವಗಳನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವ ಇವರ ಕಾರ್ಯವೈಖರಿಯನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯದ ದೇಹದಲ್ಲಿ ಮಾತ್ರ ರಕ್ತ ಉತ್ಪಾದನೆಯಾಗುತ್ತದೆ. ಸಮಾಜದಲ್ಲಿ ಆರೋಗ್ಯವಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಂಡು ಅಮೂಲ್ಯ ಜೀವಗಳನ್ನು ಉಳಿಸಿಬೇಕು. ಅದರಲ್ಲೂ ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಒಳ್ಳೆಯ ಕಾರ್ಯದಲ್ಲಿ ಪಾಲ್ಗೊಂಡು ಸಮಾಜದಲ್ಲಿ ಮಾದರಿಯಾಗಬೇಕು.
-ಕೆ.ಎನ್.ಎಂ ಮಂಜುನಾಥ್
ಒಬ್ಬರು ರಕ್ತದಾನ ಮಾಡಿದರೆ ನಾಲ್ಕು ಜನರ ಜೀವಗಳನ್ನು ಉಳಿಸಿಬಹುದಾಗಿದೆ ಅದೊಂದು ಸಂತೋಷವಾಗುತ್ತದೆ. ರಕ್ತ ಪಡೆದವರು ಪ್ರೇರಿರತಾಗಿ ಅವರು ಸಹ ರಕ್ತದಾನ ಮಾಡಲು ಮುಂದಾಗುತ್ತಾರೆ. ಆರೋಗ್ಯವಂತರು ರಕ್ತದಾನ ಮಾಡಬೇಕು. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ರಕ್ತ ಮಾಡಬೇಕೆಂದು ಮನವಿ ಮಾಡುತ್ತೇನೆ. ರಕ್ತದಾನಿಗಳ ಗುಂಪು ಮಾಡಿಕೊಂಡಿದ್ದೇವೆ ಯಾರಿಗಾದರೂ ತುರ್ತ ರಕ್ತ ಬೇಕು ಎಂದರೇ ಪೂರೈಕೆ ಮಾಡಲು ಸಿದ್ದರಿದ್ದೇವೆ.
-ಟಿ.ಟಿ.ನರಸಿಂಹಪ್ಪ