ಶಿರಸಿ, ಸಿದ್ದಾಪುರದಲ್ಲಿಅತೀಹೆಚ್ಚುಮಳೆ
ಗುಂಡಬಾಳ ನದಿ ತೀರದಲ್ಲಿ ಪ್ರವಾಹ ಭೀತಿತುಂಬಿ ಹರಿಯುತ್ತಿವೆ ಹಳ್ಳಕೊಳ್ಳಕೆಲವೆಡೆ ಹಾನಿ
Team Udayavani, Jun 18, 2021, 7:26 PM IST
ಕಾರವಾರ: ಜಿಲ್ಲೆಯಲ್ಲಿ ಗುರುವಾರ ಮಳೆ ಇಳಿಮುಖವಾಗಿದೆ. ಆಗಾಗ ಮಳೆ ಬಿದ್ದಿದ್ದು, ಅಬ್ಬರ ಕಡಿಮೆಯಾಗಿದೆ. ಬುಧುವಾರ ಶಿರಸಿ, ಸಿದ್ದಾಪುರದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ. ಗುರುವಾರ ಕರಾವಳಿಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಕೃಷಿ ಚಟುವಟಿಕೆಗೆ ಮಳೆ ಬಿಡುವು ನೀಡಿದಂತಾಗಿದೆ. ಮಳೆಯಿಂದಾಗಿ ನದಿಗಳಿಗೆ ಜೀವಕಳೆ ಬಂದಿದೆ.
ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಗುರುವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 41.8 ಮಿ.ಮೀ, ಭಟ್ಕಳ 27.0, ಹಳಿಯಾಳ 31.4, ಹೊನ್ನಾವರ 40.6, ಕಾರವಾರ 30.8 , ಕುಮಟಾ 28.2, ಮುಂಡಗೋಡ 81.8, ಸಿದ್ದಾಪುರ 125.2. ಶಿರಸಿ 95.5, ಜೋಯಿಡಾ 78.6, ಯಲ್ಲಾಪುರ 58.6 ಮಿ.ಮೀ. ಮಳೆಯಾಗಿದೆ.
ಮುಂಡಗೋಡ: ತಾಲೂಕಿನದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ ಎಡ್ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿ ಜನ ಜೀವನ ಅಸ್ತವ್ಯಸ್ತಗೊಂಡಿದೆ
. ಚವಡಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲವಳ್ಳಿ ಗ್ರಾಮದ ರತ್ನವ್ವಾ ವಡ್ಡರ ಎಂಬುವರ ಮನೆ ಬಿದ್ದಿದೆ. ಪಟ್ಟಣದ ಗಾಂಧಿನಗರದ ಲಲಿತಾ ರಾಮು ಕೊರವರ ಎಂಬುವರ, ಗಣೇಶಪುರ ಗ್ರಾಮದ ಜಯಶೀಲಾ ವಡ್ಡರ ಹಾಗೂ ಲಕ್ಕೊಳಿ ಗ್ರಾಮದಲ್ಲಿ ಸುರೇಶ ವಡ್ಡರ ಎಂಬುವರ ಮನೆಯ ಗೋಡೆಗಳು ಕುಸಿದು ಬಿದ್ದು ಹಾನಿಯಾಗಿದ್ದರೆ, ಇದೇ ಗ್ರಾಮದ ಪರಶುರಾಮ ಅಗಸರ ಎಂಬುವರ ದನದ ಕೊಟ್ಟಿಗೆ ಬಿದ್ದು ಹಾನಿಯಾಗಿದೆ. ಗುರುವಾರ ಸ್ಥಳಕ್ಕೆ ಗ್ರಾಮ ಲೆಕ್ಕಾ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲ ಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.