ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ
Team Udayavani, Jun 22, 2021, 4:08 AM IST
ಕೊಲ್ಲೂರು: ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766ಸಿ ನಡುವಿನ ಕೊಲ್ಲೂರು-ನಿಟ್ಟೂರು ನಡುವೆ ನಾಗೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಜೂ. 30ರ ತನಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೊಲ್ಲೂರಿಗೆ ಸಾಗುವ ವಾಹನಗಳು ಸುತ್ತಿಬಳಸಿ ಸಾಗಬೇಕಾಗಿದೆ.
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ನಾಗೋಡಿಯಲ್ಲಿ 4 ವರ್ಷಗಳ ಹಿಂದೆ ರಸ್ತೆ ಕುಸಿತ ಕಂಡುಬಂದಿದ್ದು, ದುರಸ್ತಿ ಮಾಡಲಾಗಿತ್ತು. ಒಂದೂವರೆ ವರ್ಷದ ಹಿಂದೆ ಇಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ತಡೆಗೋಡೆ ಕಳೆದ ವರ್ಷದ ಬಿರುಸಿನ ಮಳೆಗೆ ಕುಸಿದಿತ್ತು. ಇದೀಗ ನಿರಂತರ ಮಳೆಯಿಂದಾಗಿ ಕಾಂಕ್ರೀಟ್ ರಸ್ತೆ ಕುಸಿದಿದೆ.
ನದಿ ಕೊರೆತ ಕಾರಣ
ಸಮೀಪದಲ್ಲೇ ನದಿ ಹರಿಯುತ್ತಿದ್ದು, ರಭಸದಿಂದ ನೀರು ಹರಿಯುವ ಕಾರಣ ಕೊರೆತ ಸಂಭವಿಸುತ್ತಿದೆ. ಕೊರೆತ ತಡೆಗಟ್ಟಲು ವಿನೂತನ ಮಾದರಿಯ ತಡೆಗೋಡೆ ನಿರ್ಮಾಣ ಕಾರ್ಯ ಮಂದಗತಿಯಿಂದ ಸಾಗುತ್ತಿದೆ. ಇಲಾಖೆಯ ವಿಳಂಬ ನೀತಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ ನಡುವಿನ ನಾಗೋಡಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಸಂಪರ್ಕ ಕೊಂಡಿಯಾಗಿದ್ದು, ಕುಸಿತದಿಂದ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ. ದುರಸ್ತಿ ಕಾರ್ಯ ಶೀಘ್ರ ನಡೆಯಬೇಕು ಎಂದು ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮ ಕೃಷ್ಣ ಭಟ್ ಅವರು ಆಗ್ರಹಿಸಿದ್ದಾರೆ.
ಬದಲಿ ಮಾರ್ಗ
ಶಿವಮೊಗ್ಗಕ್ಕೆ ತೆರಳುವವರು ಜೂ. 16ರಿಂದ ಆ. 30ರ ವರೆಗೆ ಸಿದ್ದಾಪುರ – ಹೊಸಂಗಡಿ – ಹುಲಿಕಲ್ ಘಾಟಿ – ನಗರ – ಹೊಸನಗರ – ಸಾಗರ ಮೂಲಕ ಸಾಗಬೇಕು ಎಂದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.