ಜಿಲ್ಲಾ ಆಸ್ಪತ್ರೆ ಮತ್ತೆ ಕೊರೊನಾ ಮುಕ್ತ
Team Udayavani, Jul 5, 2021, 8:02 PM IST
| ನಾಲ್ಕು ತಿಂಗಳ ಬಳಿಕ ಶೂನ್ಯಕ್ಕಿಳಿದ ಕೋವಿಡ್ ಪ್ರಕರಣ | 2ನೇ ಅಲೆಯಲ್ಲಿ ಹೈರಾಣಾದ ಬಸವನಾಡು
ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕಳೆದ ಮಾರ್ಚ್ 15ರಿಂದ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿದ್ದ ಜಿಲ್ಲಾ ಆಸ್ಪತ್ರೆ, ಇದೀಗ ಕೊರೊನಾ ಮುಕ್ತವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಕೊರೊನಾದಿಂದ ಮುಕ್ತಗೊಳಿಸಿ, ಮತ್ತೆ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಸಜ್ಜಾಗಿದೆ.
ಹೌದು, 450 ಹಾಸಿಗೆಯ ಜಿಲ್ಲಾ ಆಸ್ಪತ್ರೆಯನ್ನು 2ನೇ ಅಲೆಯ ಭೀಕರತೆಯಿಂದ ಕೊರೊನಾ ಆಸ್ಪತ್ರೆಯನ್ನಾಗಿ ರೂಪಾಂತರಗೊಳಿಸಲಾಗಿತ್ತು. ಕಳೆದ ಒಂದು ತಿಂಗಳಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಸೋಂಕಿಗೆ ಒಳಗಾದವರೂ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯನ್ನು ಕೊರೊನಾ ಮುಕ್ತಗೊಳಿಸಲು ಸೋಮವಾರ ನಡೆಯಲಿರುವ ಕೆಡಿಪಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
6 ಲಕ್ಷ ಜನರ ತಪಾಸಣೆ: ಜಿಲ್ಲೆಯಲ್ಲಿ ಸುಮಾರು 18 ಲಕ್ಷ ಜನಸಂಖ್ಯೆ ಇದ್ದು, 18 ವರ್ಷ ಮೇಲ್ಪಟ್ಟವರ ಸಂಖ್ಯೆ 13 ಲಕ್ಷದಷ್ಟಿದೆ. ಈ 13 ಲಕ್ಷ ಜನರಲ್ಲಿ ಈಗಾಗಲೇ 5.60 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇನ್ನುಳಿದವರಿಗೆ ಲಸಿಕೆ ಹಾಕಲು ಜಿಲ್ಲೆಯಾದ್ಯಂತ ಅಭಿಯಾನ ನಡೆಯುತ್ತಿದೆ. ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಈ ವರೆಗೆ 6,98,248 ಜನ ಸ್ಯಾಂಪಲ್ ತಪಾಸಣೆ ಮಾಡಿದ್ದು, ಅದರಲ್ಲಿ 35,018 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ 205 ಸಕ್ರಿಯ ಪ್ರಕರಣಗಳಿದ್ದು, 10 ಜನ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರೆಲ್ಲ ಹೋಂ ಐಸೋಲೇಶನ್ನಲ್ಲಿದ್ದಾರೆ. ತಪಾಸಣೆಗೊಂಡ ಒಟ್ಟು 6.98 ಲಕ್ಷ ಜನರಲ್ಲಿ 6,60,420 ಜನರಿಗೆ ನೆಗೆಟಿವ್ ಬಂದಿದ್ದು, ವಿವಿಧ ಕಾರಣಗಳಿಂದಾಗಿ 498 ಜನರ ಸ್ಯಾಂಪಲ್ಗಳು ರಿಜೆಕ್ಟ್ ಆಗಿದ್ದವು.
ಇನ್ನೂ 2210 ಜನರ ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ. ಈ ವರೆಗೆ ಸೋಂಕಿನಿಂದ ಚಿಕಿತ್ಸೆ ಪಡೆದ 34,496 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನೋವಿನ ಸಂಗತಿ ಎಂದರೆ 1 ಮತ್ತು 2ನೇ ಅಲೆಯಲ್ಲಿ ಒಟ್ಟರು 317 ಜನರು ಮೃತಪಟ್ಟಿದ್ದಾರೆ.
ನಾಲ್ಕು ತಿಂಗಳ ಬಳಿಕ ಶೂನ್ಯ: ರುದ್ರ ನರ್ತನ ತೋರಿದ್ದ ಕೊರೊನಾ ಸೋಂಕು, ಜಿಲ್ಲೆಯಲ್ಲಿ ನಿತ್ಯವೂ ನಾಲ್ಕಂಕಿ ದಾಟುತ್ತಿತ್ತು. ಒಂದು ಬಾರಿಯಂತೂ ಒಂದೇ ದಿನ 1300ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿ, ಇಡೀ ರಾಜ್ಯದಲ್ಲಿಯೇ ಸೋಂಕಿನ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿ ಜಿಲ್ಲೆ ಇತ್ತು. ರವಿವಾರ 2448 ಜನ ಸ್ಯಾಂಪಲ್ ಗಳ ವರದಿ ಬಂದಿದ್ದು, ಅದರಲ್ಲಿ ಒಬ್ಬರಿಗೂ ಸೋಂಕು ಪತ್ತೆಯಾಗಿಲ್ಲ ಎಂಬುದು ದೊಡ್ಡ ಖುಷಿಯ ವಿಷಯ.
ಕೊರೊನಾ ಮುಕ್ತ: ಜಿಲ್ಲಾ ಆಸ್ಪತ್ರೆಯನ್ನು ಕಳೆದ ಮಾರ್ಚ್ 15ರಿಂದಲೇ ಕೊರೊನಾ ಆಸ್ಪತ್ರೆಯನ್ನಾಗಿ 2ನೇ ಬಾರಿ, 2ನೇ ಅಲೆಗಾಗಿ ಮೀಸಲಿಡಲಾಗಿತ್ತು. ಕೊರೊನಾ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲು ಇಡೀ ಆಸ್ಪತ್ರೆಯನ್ನು ಮೀಸಲಿಟ್ಟು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ನೇತೃತ್ವದ ವೈದ್ಯರು, ನರ್ಸ್ಗಳು, ಕಿರಿಯ ಆರೋಗ್ಯ ಸಹಾಯಕರು ಸೇರಿದಂತೆ ಇಡೀ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿತರು, 10 ಜನ ಸಾರಿ ಕೇಸ್ (ಜ್ವರ-ಕೆಮ್ಮು-ನೆಗಡಿ ಇದ್ದವರಿದ್ದು, ತಪಾಸಣೆ ವರದಿ ಬರಬೇಕಿದೆ)ಗಳಿವೆ. ಇನ್ನು ಪ್ರತ್ಯೇಕ ವಾರ್ಡ್ನಲ್ಲಿ 33 ಜನ ಬ್ಲಾಕ್ ಫಂಗಸ್ ಕೇಸ್ಗಳಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟಾರೆ, ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಜೀವದ ಹಂಗು ತೊರೆದು, ಕಾರ್ಯ ನಿರ್ವಹಿಸಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಇಡೀ ತಂಡಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾ ಆಸ್ಪತ್ರೆ ಕೊರೊನಾ ಮುಕ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.