ಸಮುದ್ರ ಸೇತುವೆ ಯೋಜನೆ ಎಂಎಸ್ಆರ್ಡಿಸಿ ಟೆಂಡರ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ
Team Udayavani, Jul 6, 2021, 9:26 AM IST
ಮುಂಬಯಿ: ವರ್ಸೋವಾ ವಿರಾರ್ ಸಮುದ್ರ ಸೇತುವೆ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಕೈಗೆತ್ತಿಕೊಂಡಿದೆ.
ಯೋಜನೆಗಾಗಿ ವಿವರವಾದ ಡಿಪಿಆರ್ನ್ನು ಸಿದ್ಧಪಡಿಸಲು ಸಲಹೆಗಾರರನ್ನು ನೇಮಿಸಲು ಮುಂದಾಗಿದ್ದು, ಟೆಂಡರ್ ಅನ್ನು ಆಹ್ವಾನಿಸಲಾಗಿದೆ. ಆದರೆ ಟೆಂಡರ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ ಎಂಎಸ್ಆರ್ಡಿಸಿ ಟೆಂಡರ್ ಅನ್ನು ಒಂದು ತಿಂಗಳ ಕಾಲ ವಿಸ್ತರಿಸಬೇಕಾದ ಪರಿಸ್ಥಿತಿ ಇದೆ. ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮುಂಬಯಿ ನಗರ ಮತ್ತು ಪಶ್ಚಿಮ ಉಪನಗರಗಳಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದರ ಜತೆಗೆ ದೂರವನ್ನು ಕಡಿಮೆ ಮಾಡಲು ಸಾಗರ ಸೇತು ಯೋಜನೆಯನ್ನು ಕೈಗೊಳ್ಳಲಾಗಿದೆ. ಅದರಂತೆ ವರ್ಲಿ-ಬಾಂದ್ರಾ ಸಮುದ್ರ ಸೇತುವೆಯನ್ನು ಪೂರ್ಣಗೊಳಿಸಿ ಸೇವೆಗೆ ಒದಗಿಸಲಾಗಿದೆ. ಬಾಂದ್ರಾ- ವರ್ಸೋವಾ ಸಮುದ್ರ ಸೇತುವೆ ನಿರ್ಮಾಣ ಹಂತದಲ್ಲಿದೆ. ಅದೇ ಸಮಯದಲ್ಲಿ ವರ್ಲಿಯಿಂದ ನೇರವಾಗಿ ವಿರಾರ್ ತಲುಪಲು 42.75 ಕಿ.ಮೀ. ಉದ್ದದ ವರ್ಸೊವಾದಿಂದ ವಿರಾರ್ ಸಮುದ್ರ ಸೇತುವೆಯನ್ನು ನಿರ್ಮಿಸಲು ಎಂಎಸ್ಆರ್ಡಿಸಿ ನಿರ್ಧರಿಸಿದೆ. 13,000 ಕೋಟಿ ರೂ. ಗಳ ಎಂಟು ಪಥಗಳ ಸಮುದ್ರ ಸೇತುವೆ ಇದಾಗಿದ್ದು, ಈ ಯೋಜನೆಗೆ ಫೆಬ್ರವರಿ 2020ರಲ್ಲಿ ಹಸುರು ನಿಶಾನೆ ನೀಡಲಾಗಿದೆ.