ಯೋಗೇಶ್ವರ್ ಜಗದ್ಗುರುಗಳಿದ್ದ ಹಾಗೆ,3ನೇ ಕಣ್ಣು ಬಿಟ್ಟರೆ ಭಸ್ಮವಾಗುತ್ತೇವೆ:ರೇಣುಕಾಚಾರ್ಯ ಟೀಕೆ
Team Udayavani, Jul 9, 2021, 1:12 PM IST
ಬೆಂಗಳೂರು: ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ, 7 ಮಿನಿಸ್ಟರ್ ಮನೆ ಪಡೆಯಲು ಮತ್ತು ಕಾರಿನಲ್ಲಿ ಒಡಾಡಲು ನನ್ನ ಕೊಡುಗೆಯಿದೆ ಎಂದು ರೇಣುಕಾಚಾರ್ಯ ವಿರುದ್ಧ ಹೇಳಿಕೆ ನೀಡಿದ್ದ ಯೋಗೇಶ್ವರ್ ಗೆ ವ್ಯಂಗ್ಯವಾಗಿ ರೇಣುಕಾಚಾರ್ಯ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ನಮಗೆ ಜಗದ್ಗುರುಗಳಿದ್ದ ಹಾಗೇ. ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿದೆ ಅಂದರೆ, ನಾನು ಶಾಸಕನಾಗಿದ್ದೇನೆ ಅಂದರೆ, ಹಿಂದೆ ಅಬಕಾರಿ ಸಚಿವನಾಗಿದ್ದೇನೆ ಅಂದ್ರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ಅದಕ್ಕೆಲ್ಲ ಆ ಜಗದ್ಗುರುಗಳೇ ಕಾರಣ. ಪಕ್ಷ ಕಟ್ಟುವಲ್ಲಿ ಅವರ ಪಾತ್ರ ಬಹಳಷ್ಟು ದೊಡ್ಡದಿದೆ. ಹೀಗಾಗಿ ಅವರು ತುಂಬಾ ದೊಡ್ಡವರು. ಅವರ ಆಶೀರ್ವಾದಿಂದ ನಾನು 7 ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದೇನೆ ಎಂದು ವ್ಯಂಗ್ಯವಾಡಿದರು.
ಅವರ ಮೇಲೆ ಟೀಕೆ ಮಾಡಿದರೆ ಅವರ ಮೂರನೇ ದೃಷ್ಟಿ ನನ್ನ ಮೇಲೆ ಬಿಳುತ್ತದೆ. ಅವರ ಮೂರನೇ ಕಣ್ಣು ಬಿಟ್ಟರೆ ನಾನು ಭಸ್ಮವಾಗಿ ಬಿಡುತ್ತೇನೆ. ಅವರ ಆಶೀರ್ವಾದದಿಂದ ನಾನು ಕಾರಿನಲ್ಲಿ ಒಡಾಡುತ್ತಿದ್ದೇನೆ. ಅವರನ್ನು ನಾನು ಪರಮಾತ್ಮ ಸ್ಥಾನದಿಂದ ನೋಡುತ್ತಿದ್ದೇನೆ. ಹೀಗಾಗಿ ಅವರ ಕೆಂಗಣ್ಣಿಗೆ ಗುರಿಯಾಗಲು ನಾನು ಇಷ್ಟಪಡುವುದಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅಮಾನತು
ಚುನಾವಣಾ ಬಂದಾಗ ರಾಜಕಾರಣ ಮಾಡುವುದು ಸಹಜ. ಆದರೆ ನಮ್ಮಲ್ಲಿ ನಾವೇ ಪ್ರತಿಪಕ್ಷಗಳಾಗಿಬಿಟ್ಟಿದ್ದೇವೆ. ಇದರ ಬಗ್ಗ ನನಗೆ ಸಾಕಷ್ಟು ನೋವಾಗಿದೆ. ಮುಂದೆ ಸಹಾ ಅವರ ಆಶೀರ್ವಾದ ನಮ್ಮ ಮೇಲೆ ಇರಲಿ. ಆದರೆ ಅವರಿಗೆ ಒಂದೇ ಒಂದು ಮಾತುಗಳನ್ನ ಹೇಳುತ್ತೇನೆ, ನಾವು ನಿಮ್ಮನ್ನ ಗುರುಗಳು ಅಂತ ಒಪ್ಪಿಕೊಳ್ಳುತ್ತೇನೆ ಆದರೆ ಚನ್ನಪಟ್ಟಣದಲ್ಲಿ ಯಾಕೆ ಜನ ತಿರಸ್ಕರಿಸಿದರು ಎಂದು ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.
ಸುಮಲತಾ ಕುಮಾರ ಸ್ವಾಮಿಯವರ ನಡುವೆ ಮಾತಿನ ಸಮರ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ, ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸುಮಲತಾ ಪರವಾಗಿಯೂ ಮಾತನಾಡಲ್ಲ, ಕುಮಾರ ಸ್ವಾಮಿಯವರ ವಿರುದ್ಧವೂ ಮಾತನಾಡಲ್ಲ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅದಕ್ಕೆ ಸಚಿವರಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ, ಮೈಸೂರು ಸಂಸದರಿದ್ದಾರೆ ಅವರು ಪರಿಶೀಲನೆ ನಡೆಸುತ್ತಾರೆ. ಅಕ್ರಮವಾಗಿದ್ದರೆ ಕ್ರಮಕೈಗೊಳ್ಳುತ್ತಾರೆ ಎಂದರು.
ದೆಹಲಿ ಭೇಟಿ: ನಾನು ದೆಹಲಿಗೆ ಭೇಟಿ ಕೊಡುತ್ತೇನೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ನಿನ್ನೆ ಅಪ್ತ ಶಾಸಕರೆಲ್ಲ ಮುಖ್ಯಮಂತ್ರಿಗಳ ಭೇಟಿ ಮಾಡಿ ನನ್ನ ನಿವಾಸದಲ್ಲೂ ಸಮಾಲೋಚನೆ ನಡೆಸಿದ್ದೇವೆ. ಯಡಿಯೂರಪ್ಪ ನವರ ಬಗ್ಗೆ ಪದೇ ಪದೇ ಯಾವ ಭಾಷೆ ಬಳಿಕೆ ಮಾಡುತ್ತಿರುವುದು ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಮಾಡೋದು ಸರಿಯಲ್ಲ. ವರಿಷ್ಠರನ್ನ ಯಾವ ಸಂದರ್ಭದಲ್ಲಿ ಭೇಟಿಯಾಗಬೇಕು ಎಂಬುದನ್ನ ನಮ್ಮ ಶಾಸಕರೆಲ್ಲ ಸೇರಿ ಚರ್ಚೆ ಮಾಡುತ್ತೇವೆ. ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿ ಮಾಡುತ್ತೇವೆ, ಬೇರೆಯವರ ತರಹ ಕದ್ದು ಮುಚ್ಚಿ ದೆಹಲಿಗೆ ಹೋಗುವುದಿಲ್ಲ. ನಾಯಕರ ಮನೆಯ ಗೇಟ್ ಮುಟ್ಟಿ ವಾಪಸ್ ಬಂದರಲ್ಲ ಆ ರೀತಿ ಹೋಗುವುದಿಲ್ಲ. ವರಿಷ್ಠರ ಹತ್ತಿರ ದಿನಾಂಕ ನಿಗದಿ ಮಾಡಿ ದೆಹಲಿ ಭೇಟಿ ಕೊಡ್ತೀವಿ ಎಂದು ರೇಣುಕಾಚಾರ್ಯ ಹೇಳಿದರು.
ಪ್ರತ್ಯೇಕ ಸಭೆ ನಡೆಸಬಾರದು ಎಂಬ ಅರುಣ್ ಸಿಂಗ್ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವ ರೆಸಾರ್ಟ್ ನಲ್ಲಿ ಹೋಗಿ ಸಭೆ ನಡೆಸುತ್ತಿಲ್ಲ. ರೆಸಾರ್ಟ್ ನಲ್ಲಿ ಹೋಟೆಲ್ ಗಳಲ್ಲಿ ಸಭೆ ನಡೆಸಿದರೆ ತಪ್ಪು. ಬೆಂಗಳೂರು ಬಂದಾಗ ಅಪ್ತ ಶಾಸಕರು ನಮ್ಮಮನೆಯಲ್ಲಿ ಅಥವಾ ಶಾಸಕರ ಭವನದಲ್ಲಿ ಸೇರುತ್ತೇವೆ. ಊಟ ತಿಂಡಿಗೆ ಸೇರುತ್ತೇವೆ. ಸಂಘಟನೆ ಅಥಾವ ನಾಯಕತ್ವ ವಿರುದ್ಧ ಹೋಗುವುದಿಲ್ಲ ಎಂದರು.