ಕೆ.ಆರ್.ಎಸ್ ಡ್ಯಾಂ ನಲ್ಲಿ ಬಿರುಕು ಬಂದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು : ಜೈಪ್ರಕಾಶ್
Team Udayavani, Jul 9, 2021, 1:42 PM IST
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕೆ ಆರ್ ಎಸ್ ಡ್ಯಾಂ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈ ಪ್ರಕಾಶ ಪತ್ರಿಕಾ ಪಕಟಣೆಯನ್ನು ಹೊರಡಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೆ ಆರ್ ಎಸ್ ಡ್ಯಾಂ ನಲ್ಲಿ ಬಿರುಕು ಬಂದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅಣೆಕಟ್ಟು ಸುರಕ್ಷತಾ ಸಮಿತಿ ಕಾಲ ಕಾಲಕ್ಕೆ ಡ್ಯಾಂ ಸುರಕ್ಷತೆ ಬಗ್ಗೆ ಪರಿಶೀಲಿಸಿ ವರದಿಯನ್ನು ನೀಡಿದೆ ಎಂದಿದ್ದಾರೆ.
ಡ್ಯಾಂನ ಬಾಡಿ ವಾಲ್ ನಲ್ಲಿ ಯಾವುದೇ ರೀತಿಯ ಬಿರುಕುಗಳು ಇಲ್ಲವೆಂದು ಪ್ರೀ ಮತ್ತು ಪೋಸ್ಟ್ ಪರಿಶೀಲನಾ ವರದಿಗಳು ತಿಳಿಸಿವೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇನ್ನು ಅಣೆಕಟ್ಟೆಯ ಪುನಶ್ಚೇತನಾ ಕಾಮಗಾರಿಗೆ ವಿಶ್ವ ಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದಿಂದ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.