ಚಾರ್ಮಾಡಿ:ರಸ್ತೆ ಕುಸಿತಕ್ಕೆ ತಾತ್ಕಾಲಿಕ ಕ್ರಮ
Team Udayavani, Jul 25, 2021, 7:35 AM IST
ಬೆಳ್ತಂಗಡಿ : ಮಳೆಯ ತೀವ್ರತೆಯಿಂದಾಗಿ ರಸ್ತೆಯಲ್ಲೇ ನೀರು ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಮಣ್ಣು ಕುಸಿತಗೊಂಡ ಸ್ಥಳದಲ್ಲಿ ಶನಿವಾರ ಮರಳು ಚೀಲಗಳನ್ನು ಜೋಡಿಸಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿದೆ.
ಈಗಾಗಲೇ ಶಿರಾಡಿ ಘಾಟಿ ರಸ್ತೆ ಕುಸಿತದಿಂದ ಅಲ್ಲಿ ಸಂಪೂರ್ಣ ಸಂಚಾರ ನಿರ್ಬಂಧಿಸಲಾಗಿದ್ದು, ಚಾರ್ಮಾಡಿ ಹಾಗೂ
ಸಂಪಾಜೆ ಮೂಲಕ ರಸ್ತೆ ಅನಿವಾರ್ಯ ವಾಗಿತ್ತು. ಇದೀಗ ಚಾರ್ಮಾಡಿ ರಸ್ತೆಯ ದ.ಕ. ವಿಭಾಗದಲ್ಲಿ 6ನೇ ತಿರುವಿನಲ್ಲಿ ಕುಸಿತ ಭೀತಿ ಉಂಟಾದ್ದರಿಂದ ತತ್ಕ್ಷಣ ಉಭಯ ಜಿಲ್ಲಾಧಿಕಾರಿಗಳು ರಾತ್ರಿ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಕುಸಿತ ಪ್ರದೇಶದಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ಬ್ಯಾರಿಕೇಡ್, ತಡೆಬೇಲಿ ಅಳವಡಿಕೆ, ಚರಂಡಿಗಳಲ್ಲಿ ತುಂಬಿದ
ಮಣ್ಣು ತೆರವು ಮಾಡಲಾಗುತ್ತಿದೆ. ಮರಳಿನ ಚೀಲ ಕಸಿತ ಪ್ರದೇಶದಲ್ಲಿ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶಾಶ್ವತ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ದ.ಕ. ಜಿಲ್ಲಾ ವಿಭಾಗದ ಎಇಇ ಕೃಷ್ಣ ಕುಮಾರ್ ತಿಳಿಸಿದ್ದಾರೆ.