ತೆರಿಗೆ ದುಪ್ಪಟ್ಟು: ಅಧಿಕಾರಿಗಳ ವಿರುದ್ಧ ಸಿಟ್ಟು
ಉಳಿಸಿಕೊಂಡಿರುವ ಆಸ್ತಿ ತೆರಿಗೆ ಬಾಕಿಗೂ ಬಡ್ಡಿ ; ವಲಯ ವಿಂಗಡಣೆಯಲ್ಲಿ ಅಧಿಕಾರಿಗಳಿಂದ ಗೊಂದಲ
Team Udayavani, Aug 20, 2021, 6:37 PM IST
ಸಾಂದರ್ಭಿಕ ಚಿತ್ರ..
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ವಿಚಾರದಲ್ಲಿ ವಲಯ ವರ್ಗೀಕರಣ ಮಾಡಿ ತೆರಿಗೆ ಏರಿಕೆ ಮಾಡಿರುವ ಜತೆಗೆ ಬಡ್ಡಿಯ ಹೊರೆಯನ್ನೂ ಆಸ್ತಿದಾರರ ಮೇಲೆ ಹಾಕಿದ್ದಾರೆ.
ಮೂಲತಃ ಯಾವುದೇ ಆಸ್ತಿದಾರರು ಇಂತದ್ದೇ ವಲಯ ಬೇಕು ಎಂದು ಬಯಸಿರಲಿಲ್ಲ. ತಮ್ಮ ಆಸ್ತಿ ಯಾವ ವಲಯಕ್ಕೆ ಬರುತ್ತದೆ ಅದರಿಂದಾಗುವ
ಪ್ರಯೋಜನ ಏನು ಎಂಬುದು ಬಹುತೇಕ ಆಸ್ತಿದಾರರಿಗೆ ಗೊತ್ತೂ ಇಲ್ಲ. ಸತತ ಎರಡು ವರ್ಷದ ಕೋವಿಡ್ ಲಾಕ್ಡೌನ್ ಸಂಕಷ್ಟದಲ್ಲಿ ತೆರಿಗೆ ಮನ್ನಾ ನಿರೀಕ್ಷೆಯಲ್ಲಿದ್ದ ಆಸ್ತಿದಾರರಿಗೆ ಉಳಿಸಿಕೊಂಡಿರುವ ತೆರಿಗೆ ಬಾಕಿಗೂ ಬಡ್ಡಿ ಹಾಕಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಆಸ್ತಿ ತೆರಿಗೆ ಸಂಬಂಧ ಪಾಲಿಕೆ ಅಧಿಕಾರಿಗಳು ಎಬಿಸಿಡಿಇ ಹಾಗೂ ಎಫ್ ವಲಯಗಳಾಗಿ ವಿಂಗಡಣೆ ಮಾಡಿರುವುದು ಶ್ರೀಸಾಮಾನ್ಯರಿಗೆ ತಿಳಿಯುತ್ತಿಲ್ಲ. ಯಾರು, ಯಾವ ವಲಯಕ್ಕೆ ಸೇರುತ್ತಾರೆ ಎಂಬುವುದೇ ಜನರಿಗೆ ಗೊತ್ತಿಲ್ಲ. ಕೆಲವು ಆಸ್ತಿ ತೆರಿಗೆದಾರರು ತಾವು ಹಳೇ ವಲಯದಲೆಲ್ಲೇ ಇದ್ದೇವೆ ಎಂದು ಕೊಂಡಿರುತ್ತಾರೆ. ಈ ಬಗ್ಗೆ ಅನೇಕ ರೀತಿಯ ಗೊಂದಲಗಳಿವೆ.
ಇದನ್ನೂ ಓದಿ:ನನ್ನ ಕ್ಷೇತ್ರದ ಜನರ ನೆರವಿಗೆ ನಾನು ಸದಾ ಸಿದ್ಧ: ಆರ್ ಅಶೋಕ
ಕೆಎಂಸಿ ಕಾಯ್ದೆ ಪ್ರಕಾರ ಕೂಡ ಇದು ಕಾನೂನು ಬಾಹಿರ.ವರ್ಗೀಕರಣದ ಬಗ್ಗೆ ಜನರಿಗೆ ಪೂರ್ಣ ಪ್ರಮಾಣ ಮಾಹಿತಿಯನ್ನು ನೀಡಬೇಕಾಗಿತ್ತು ಎಂಬುದು ಮಾಜಿ ಮೇಯರ್ಗಳ ವಾದ.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಲಕ್ಷಕ್ಕೂ ಹೆಚ್ಚು ವಸತಿ ಕಟ್ಟಡಗಳು, 23 ಸಾವಿರಕ್ಕೂ ಅಧಿಕ ವಸತಿ ಸಮುಚ್ಚಯಗಳು 1ಲಕ್ಷ 10 ಸಾವಿರ ಕ್ಕೂ ಅಧಿಕ ಕೈಗಾರಿಕಾ ಕಟ್ಟಡಗಳು, 3,758 ಐಟಿ ಸಂಸ್ಥೆಗಳು, 92 ಬಿಟಿ ಕಂಪನಿಗಳು, 2800ಕ್ಕೂ ಅಧಿಕ ಲಾಡ್ಜ್ ಗಳು , 640ಕ್ಕೂ ಹೆಚ್ಚು ಸ್ಟಾರ್ ಹೋಟೆಲ್ಗಳು, ಸೂಪರ್ ಸೆಷಾಲಿಟಿ ಆಸ್ಪತ್ರೆಗಳು, ಪಿಜಿ ಹಾಸ್ಟೆಲ್ ಗಳು, ಟೆಕ್ ಪಾರ್ಕ್ಗಳು, ಟೆಲಿಕಾಂ ಟವರ್ಗಳು ಸೇರಿದಂತೆ 3 ಲಕ್ಷಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳಿವೆ.
ಈ ಎಲ್ಲ ಕಟ್ಟಡಗಳಿಂದ ನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಿದರೆ ಪ್ರತಿ ವರ್ಷ ಸುಮಾರು 6 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಆದರೆ ಪಾಲಿಕೆ ಅಧಿಕಾರಿಗಳು ಆ ತೆರಿಗೆಯನ್ನು ವಸೂಲಿ ಮಾಡದೆ ವಲಯ ವರ್ಗೀಕರಣ ಹಾಗೂ ತೆರಿಗೆ ಪರಿಷ್ಕರಣೆ ಗೆ ಮುಂದಾಗಿರುವುದು ಪಕ್ಷಾತೀತವಾಗಿ ವಿರೋಧಕ್ಕೆ ಕಾರಣವಾಗಿದೆ.
ವಲಯ ವರ್ಗೀಕರಣ ವಿಚಾರದಲ್ಲಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಜಾಹೀರಾತು ನೀಡಬೇಕಿತ್ತು.ಆ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ ಎಂಬುದು ಆಸ್ತಿದಾರರ ಅಳಲು. ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಒಂದು ರೀತಿಯಲ್ಲಿ ತೊಘಲಕ್ ದರ್ಬಾರ್ದಂತೆ ಎಂದು ಪಾಲಿಕೆಯ ಮಾಜಿ ಸದಸ್ಯರು ಆಕ್ರೋಶ ಹೊರಹಾಕುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ 80 ಸಾವಿರ ಕ್ಕೂ ಹೆಚ್ಚು ಆಸ್ತಿಗಳ ವಿಚಾರದಲ್ಲಿ ವಲಯ ವರ್ಗೀಕರಣ ಸಂಬಂಧಿತ ವಿಷಯದಲ್ಲಿ ತಪ್ಪಾಗಿದೆ ಎಂಬ ವಿಷಯ ಮುಂದಿಟ್ಟುಕೊಂಡು 2016 ರಿಂದ ಸುಮಾರು ಐದು ವರ್ಷಗಳ ಆಸ್ತಿ ತೆರಿಗೆಗೆ ವಾರ್ಷಿಕ ಶೇ.24 ಬಡ್ಡಿದರ ವಿಧಿಸಿ, ಬಾಕಿ ತೆರಿಗೆ ವಿಧಿಸಲು ಕಂದಾಯಾಧಿಕಾರಿಗಳು ತೆರಿಗೆದಾರರಿಗೆ ನೋಟಿಸ್ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಹೇಳುತ್ತಾರೆ
ಕೋವಿಡ್ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರಿಗೆ ರಿಯಾಯ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುವುದು.
-ಡಾ.ಸಿ.ಎನ್.ಅಶ್ವತ್ಥನಾರಾಯಣ,
ಉನ್ನತ ಶಿಕ್ಷಣ ಇಲಾಖೆ ಸಚಿವ
ಆಸ್ತಿ ತೆರಿಗೆ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ಗೊಂದಲ ಮೂಡಿಸುತ್ತಿದ್ದಾರೆ.ಸಾರ್ವಜನಿಕರಿಗೆ ಹೊರೆಯಾಗುವಂತಹ ತೀರ್ಮಾನ ತೆಗೆದು ಕೊಳ್ಳುವುದು ತಪ್ಪು. ಜನರಿಗೆ ಹೊರೆಯಾಗಿರುವ ದುಪ್ಪಟ್ಟು ಆಸ್ತಿ ತೆರಿಗೆ ಹಾಕುವ ನಿರ್ಧಾರವನ್ನು ಸರ್ಕಾರಕೂಡಲೇ ಹಿಂಪಡೆಯಬೇಕು.
– ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಪಾಲಿಕೆ ಅಧಿಕಾರಿಗಳು ಕೈಗೊಂಡಿರುವುದು ಕೆಎಂಸಿ ಕಾಯ್ದೆಗೆ ವಿರುದ್ಧ. ಜನಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ಇಂತಹ ತೀರ್ಮಾನ ಕೈಗೊಂಡಿರುವುದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಆಸ್ತಿ ತೆರಿಗೆ ಸಂಬಂಧ ಪಾಲಿಕೆ ಅಧಿಕಾರಿಗಳು ಎ.ಬಿ.ಸಿ.ಡಿ.ಇ ಹಾಗೂ ಎಫ್ ವಲಯ ಗಳಾಗಿ ವಿಂಗ ಡಣೆ ಮಾಡಿರುವುದು ಶ್ರೀ ಸಾಮಾನ್ಯರಿಗೆ ತಿಳಿಯುತ್ತಿಲ್ಲ.ಯಾರು,ಯಾವ ವಲಯಕ್ಕೆ ಸೇರುತ್ತಾರೆ ಎಂಬುವುದೇ ಜನರಿಗೆ ಗೊತ್ತಿಲ್ಲ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಮೇಯರ್
ಆಸ್ತಿ ತೆರಿಗೆ ವಿಚಾರ ಈಗಾಗಲೇಸರ್ಕಾರದ ಗಮನಕ್ಕೆ ತರಲಾಗಿದೆ.ಈ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಪಾಲಿಕೆ ಹಿಂದಕ್ಕೆ ಪಡೆಯುವ ಸಾಧ್ಯತೆಇದೆ.
– ಪದ್ಮನಾಭ ರೆಡ್ಡಿ, ಪಾಲಿಕೆ ಮಾಜಿ ಸದಸ್ಯ
ಕೋವಿಡ್ ಸಂಕಷ್ಟದ ಸಮಯದಲ್ಲಿ ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ವಿಚಾರದಲ್ಲಿ ವಲಯವಾರು ವಿಗಂಡಣೆ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳ ತಪ್ಪಿನಿಂದಾಗಿ ಸಾರ್ವಜನಿಕರಿಗೆ ದುಪ್ಪಟ್ಟು ತೆರಿಗೆ ಹಾಕುವುದು ಒಳ್ಳೆಯದಲ್ಲ.
-ನಟರಾಜ್, ಪಾಲಿಕೆಯ ಮಾಜಿ ಮೇಯರ್
– ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು