ಅಮೃತ ಭಾರತ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ ಚಾಲನೆ
Team Udayavani, Aug 24, 2021, 7:18 PM IST
ಬೆಂಗಳೂರು: ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಸೇರಿದಂತೆ ಮುಂತಾದ ಹೊಸ ಕಾರ್ಯಕ್ರಮಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತವನ್ನು ಕಳೆದ ಏಳು ವರ್ಷಗಳಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ಮುನ್ನಡೆಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಇಂದು ತಿಳಿಸಿದರು.
ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್, ಭೈರನಹಟ್ಟಿ ವಿರಕ್ತಮಠಗಳ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ಅಮೃತ ಭಾರತ ಮಹೋತ್ಸವವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೋದಿಯವರ ದೂರದೃಷ್ಟಿಯ ಆಡಳಿತದಿಂದಾಗಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವಾಗಿ ಪರಿವರ್ತಿಸಲು ಸಾಧ್ಯವಾಗಿದೆ. ಇದರಿಂದಾಗಿ ದೇಶಿಯ ಉತ್ಪಾದನೆ ಹೆಚ್ಚಳವಾಗಿ ರಫ್ತು ಚಟುವಟಿಕೆಗಳು ವಿಕಸನಗೊಂಡಿವೆ, ಕೃಷಿ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸುವ ಮೂಲಕ ಇಡೀ ಕಾಶ್ಮೀರವನ್ನು ಭಾರತದ ಒಕ್ಕೂಟ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಸೇರಿಸಿ ನಿಜವಾದ ಸ್ವಾತಂತ್ರ್ಯದ ಸೌಲಭ್ಯ ಅಲ್ಲಿಯ ಸ್ಥಳೀಯರಿಗೆ ಸಿಗುವಂತೆ ಕ್ರಮ ಕೈಗೊಂಡಿದ್ದಷ್ಟೇ ಅಲ್ಲ, ಅಲ್ಲಿಯ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣ ಸದ್ದಡಗಿಸಿ ಶಾಂತಿ ಮರುಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾದ ಮೋದಿಜಿಯವರ ದಿಟ್ಟ ಕ್ರಮ ನಿಜಕ್ಕೂ ಐತಿಹಾಸಿಕ ವಾಗಿದೆ ಎಂದು ಸಿ.ಸಿ. ಪಾಟೀಲರು ತಿಳಿಸಿದರು.
ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಸಮರೋಪಾದಿಯ ಕ್ರಮಗಳನ್ನು ವಿವರಿಸಿದ ಸಚಿವರು, ಪ್ರಸ್ತುತ ಕೋವಿಡ್ ಪಿಡುಗು ಕಡಿಮೆಯಾಗುತ್ತಿದೆ ಎಂದು ಕಂಡುಬರುತ್ತಿದ್ದರೂ ಅದನ್ನು ಮುಂದೆ ಕಡೆಗಣಿಸುವ ಹಾಗಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ತೋರಿದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಚಿವರು ಎಚ್ಚರಿಕೆ ನೀಡಿದರು.
ಶ್ರೀ ಶ್ರೀ ಶಾಂತಲಿಂಗ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ಅನುಕರಣೀಯ ಎಂದು ಸಚಿವರು ಪ್ರಶಂಸಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ರಾಷ್ಟ್ರವನ್ನು ನಂಬರ್ ಒನ್ ರಾಷ್ಟ್ರವನ್ನಾಗಿ ರೂಪಿಸಲು ಈ ಸ್ವಾತಂತ್ರ್ಯದ ಅಮೃತಮಹೋತ್ಸವವು ಹೊಸ ಪ್ರೇರಣೆ ನೀಡಲಿ ಎಂದು ಸಿ.ಸಿ.ಪಾಟೀಲರು ಹಾರೈಸಿದರು.