ವಿದ್ಯಾರ್ಥಿಗಳೇ ಆರೋಗ್ಯದತ್ತ ಗಮನಹರಿಸಿ
ರೋಗ ಮುಕ್ತಕ್ಕೆ ನಿಯಮಿತ ಆಹಾರ, ಯೋಗ ಸಹಕಾರಿ
Team Udayavani, Sep 10, 2021, 3:50 PM IST
ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸದೃಢ ಶರೀರ ಮುಖ್ಯ ಎಂದು ನವೋದಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಕುಮಾರ್ ತಿಳಿಸಿದರು.
ಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜು, ನವೋದಯ ಪ್ರಥಮ ದರ್ಜೆ ಕಾಲೇಜು, ನೆಹರು ಯುವ ಕೇಂದ್ರ ಮತ್ತು ನವೋದಯ ಯುವಕ-ಯುವತಿ ಮಂಡಳಿ ಸಹಯೋಗದಲ್ಲಿ ನಡೆದ ಫಿಟ್ ಇಂಡಿಯಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಇಂದು ಯುವ ಸಮುದಾಯ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಗಮನ ನೀಡಬೇಕು. ದೇಶದಲ್ಲಿ 12.5 ಕೋಟಿಗಿಂತ ಅಧಿಕ ಯುವ ಸಮುದಾಯ ಸಕ್ಕರೆ
ಕಾಯಿಲೆ, ಇತರೆ ರೋಗಗಳಿಂದ ಬಳಲುತ್ತಿದ್ದು, ಉತ್ತಮ ನಡಿಗೆ, ನಿಯಮಿತ ಆಹಾರ ಸೇವನೆ, ಯೋಗದ ಮೂಲಕ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಹೇಳಿದರು.
ಚಳವಳಿ ರೂಪುಗೊಳ್ಳಲು ಸಹಕರಿಸಿ: ಪ್ರಧಾನಿ ನರೇಂದ್ರ ಮೋದಿಯವರ ಈ ಯೋಜನೆ ಸದೃಢ ಭಾರತದ ನಿರ್ಮಾಣದ ಮೂಲಕ ಗುಣಮಟ್ಟದ ಕ್ರೀಡಾಪಟುಗಳು ಬೆಳೆಯಲು ಸಹಕಾರಿಯಾಗಿದೆ. ಫಿಟ್ ಇಂಡಿಯಾ ಕಾರ್ಯಕ್ರಮ ಒಂದು ಚಳವಳಿಯಾಗಿ ರೂಪುಗೊಳ್ಳಲು
ಎಲ್ಲರೂ ಸಹಕರಿಸಬೇಕು ಎಂದರು.
ಇದನ್ನೂ ಓದಿ:ನಾನು ಕಾಶ್ಮೀರಿ ಪಂಡಿತ ,ನನ್ನದು ಕಾಶ್ಮೀರಿ ಪಂಡಿತ ಕುಟುಂಬ: ರಾಹುಲ್ ಗಾಂಧಿ
ಸಾಧನೆಯತ್ತ ಹೆಜ್ಜೆ ಇಡಿ:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯದ ಮೂಲಕ ಸಾಧನೆಯತ್ತ ಹೆಜ್ಜೆ ಇಡಬೇಕು. ದಿನನಿತ್ಯ ಬೇಗ ಏಳುವುದು, ನಡಿಗೆ ನಿಮ್ಮ ಮೆದುಳನ್ನು
ಚುರುಕಾಗಿ ಮಾಡಿ ಓದಲು ಸಹಾಯಕವಾಗುತ್ತದೆ ಎಂದು ಹೇಳಿದರು.
ನೆಹರು ಯುವ ಕೇಂದ್ರದ ತಾಲೂಕು ಸಂಚಾಲಕಿ ಟಿ.ಎಸ್.ಪವಿತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಿರೀಶ್, ಸಿದ್ದಲಿಂಗಸ್ವಾಮಿ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ನಡೆಯಿತು.