ಪಂಜಾಬ್ : ತೀವ್ರ ಬಿಕ್ಕಟ್ಟಿನ ನಡುವೆ ಛನ್ನಿ ಸಂಪುಟ ರಚನೆ
ಹಗರಣದ ಕಳಂಕ ಹೊಂದಿದ ಮಾಜಿ ಸಚಿವರಿಗೂ ಸ್ಥಾನ
Team Udayavani, Sep 26, 2021, 5:47 PM IST
ಚಂಡೀಗಢ: ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಛನ್ನಿ ಭಾನುವಾರ ಸಂಪುಟ ರಚನೆ ಮಾಡಿದ್ದಾರೆ.
2022 ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಸಂಪುಟ ರಚನೆ ಮಾಡಲಾಗಿದ್ದು, 9 ಮಂದಿ ಅನುಭವಿಗಳನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದ್ದು, 6 ಮಂದಿ ಹೊಸ ಶಾಸಕರಿಗೆ ಮಣೆ ಹಾಕಲಾಗಿದೆ.
ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಅವರು ರಾಜಭವನದಲ್ಲಿ ನೂತನ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಿದರು.15 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸರು.
ಅಚ್ಚರಿಯಂತೆ ಮರಳು ಹಗರಣದ ಕಳಂಕ ಹೊಂದಿದ್ದ ಮಾಜಿ ಸಚಿವ ರಾಣಾ ಗುರ್ಜಿತ್ ಸಿಂಗ್ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚರಣ್ಜಿತ್ ಛನ್ನಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಇದೀಗ ಒಡೆದ ಮನೆಯಂತಾಗಿರುವ ಪಂಜಾಬ್ ಕಾಂಗ್ರೆಸ್ ನಲ್ಲಿ ಸಂಪುಟ ರಚನೆಯ ವಿದ್ಯಮಾನ ಹೊಸ ಸವಾಲನ್ನು ಎದುರಿಟ್ಟಿದೆ,ಈಗಾಗಲೇ ಕೆಲ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ.
‘ಇಂದು ಸಚಿವರಾಗಲು ಸಾಧ್ಯವಾಗದ ಶಾಸಕರುಗಳಿಗೆ ಸರಕಾರದ ಮಟ್ಟದಲ್ಲಿ ಉನ್ನತ ಸ್ಥಾನಮಾನ ಮತ್ತು ಪಕ್ಷದಲ್ಲಿ ಗೌರವಯುತ ಹುದ್ದೆ ನೀಡಲಾಗುವುದು’ ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಸುದ್ದಿಗಾರರ ಬಳಿ ಹೇಳಿದರು.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ಆಂತರಿಕ ಕಚ್ಚಾಟದ ಪರಿಣಾಮ ಕ್ಯಾಪ್ಟನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಹಿರಂಗವಾಗಿ ಸಿಧು ವಿರುದ್ಧ ದೇಶ ದ್ರೋಹದ ಆರೋಪ ಮಾಡಿದ್ದರು.