ವಿಜಯನಗರ ಬೆನ್ನಲ್ಲೇ ಹೊಸ ಜಿಲ್ಲೆ ಕೂಗು
ಬೆಳಗಾವಿ, ಉತ್ತರ ಕನ್ನಡ, ತುಮಕೂರಿನಲ್ಲೂ ಪ್ರತ್ಯೇಕ ಜಿಲ್ಲೆಗಳಿಗೆ ಹೆಚ್ಚಿದ ಬೇಡಿಕೆ
Team Udayavani, Oct 2, 2021, 5:55 AM IST
ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಆಗಿರುವುದರಿಂದ ಅದನ್ನೇ ಕೇಂದ್ರವಾಗಿಸಿ ಹೊಸ ಜಿಲ್ಲೆ ರಚಿಸಬೇಕು ಎಂಬುದು ಆಗ್ರಹ. ಹಿಂದೊಮ್ಮೆ ಒಮ್ಮೆ ಬೆಳಗಾವಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ತೀರ್ಮಾನ ಕೈಗೊಳ್ಳಲಾಗಿ ತ್ತಾದರೂ ಕನ್ನಡಪರ ಸಂಘಟನೆಗಳು ಮರಾಠಿಗರ ಪ್ರಾಬಲ್ಯ ಆಗುತ್ತದೆ ಎಂದು ಆಕ್ಷೇಪಿಸಿದ್ದರಿಂದ ಸ್ಥಗಿತಗೊಂಡಿತ್ತು.
ಬೆಂಗಳೂರು: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಬೆನ್ನಲ್ಲೇ ಬೆಳಗಾವಿ, ಉತ್ತರ ಕನ್ನಡ ಹಾಗೂ ತುಮಕೂರಿನಲ್ಲೂ ಹೊಸ ಜಿಲ್ಲೆಯ ಕೂಗು ಕೇಳಿ ಬರುತ್ತಿದೆ.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆ ವಿಭಜನೆ ಹೋರಾಟ ತೀವ್ರಗೊಳ್ಳುವ ಸಾಧ್ಯತೆಗಳೂ ಇವೆ.
ಬೆಳಗಾವಿ ಪ್ರಸ್ತುತ 14 ತಾಲೂಕು, 18 ವಿಧಾನಸಭೆ ಕ್ಷೇತ್ರ ಹಾಗೂ 2 ಲೋಕಸಭೆ ಕ್ಷೇತ್ರ ಒಳಗೊಂಡಿದ್ದು, ಇದನ್ನು 3 ಜಿಲ್ಲೆಯನ್ನಾಗಿ ಮಾಡಿ ಚಿಕ್ಕೋಡಿ ಹಾಗೂ ಗೋಕಾಕ್ ಜಿಲ್ಲೆಗಳನ್ನು ಘೋಷಿಸಬೇಕು. ಜತೆಗೆ 2 ಹೊಸ ತಾಲೂಕು ರಚನೆಯೂ ಆಗಬೇಕು ಎಂಬ ಬೇಡಿಕೆ ಇದೆ.
ಉತ್ತರ ಕನ್ನಡ ಪ್ರಸ್ತುತ 11 ತಾಲೂಕು, 6 ವಿಧಾನ ಸಭೆ ಕ್ಷೇತ್ರ ಒಂದು ಲೋಕಸಭೆ ಕ್ಷೇತ್ರ ಹೊಂದಿದೆ. ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸಹ ಬರಲಿದ್ದು, ಶಿರಸಿಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ರಚನೆಯಾಗಬೇಕು ಎಂಬ ಕೂಗು ಇದೆ.
ತುಮಕೂರಿನಲ್ಲಿ 10 ತಾಲೂಕು, 11 ವಿಧಾನಸಭೆ ಕ್ಷೇತ್ರಗಳಿದ್ದು, ಜಿಲ್ಲೆಯ ಶಿರಾ ಮತ್ತು ಪಾವಗಡ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ತುಮಕೂರು ಜಿಲ್ಲೆಯನ್ನು ವಿಭಜಿಸಿ ಮಧುಗಿರಿ ಅಥವಾ ತಿಪಟೂರು ಕೇಂದ್ರವಾಗಿ ಮತ್ತು ಶಿರಾವನ್ನು ಕೇಂದ್ರವಾಗಿಟ್ಟುಕೊಂಡು ಮತ್ತೊಂದು ಜಿಲ್ಲೆ ರಚನೆಯಾಗಬೇಕು ಎಂಬ ಹೊಸ ಬೇಡಿಕೆಯೂ ಇದೆ.
ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್ನ 5 ಸಾವಿರ ಕೋಟಿ ರೂ. ಹೂಡಿಕೆ
ಹೊಸ ಜಿಲ್ಲೆಗಳ ಹೋರಾಟ ಸಂಬಂಧ ಬೆಳಗಾವಿ, ಉತ್ತರ ಕನ್ನಡ, ತುಮಕೂರು ಭಾಗದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಮಠಾಧೀಶರು, ಹೋರಾಟಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೇಡಿಕೆಗೆ ಸ್ಪಂದನೆ
ನೂತನ ಜಿಲ್ಲಾ ರಚನೆ ಬೇಡಿಕೆಗೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಸ್ಪಂದನೆ ದೊರೆಯಿತು. ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ, ಚಾಮರಾಜನಗರ ಜಿಲ್ಲೆ ರಚನೆ ಯಾದವು. ಅನಂತರ ಎಸ್.ಎಂ.ಕೃಷ್ಣ ಅವಧಿಯಲ್ಲಿ ಉಡುಪಿ, ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಸಿದ್ದರಾಮಯ್ಯ ಅವಧಿಯಲ್ಲಿ ಯಾದಗಿರಿ ಜಿಲ್ಲೆ ರಚನೆಯಾಯಿತು. ಯಡಿಯೂರಪ್ಪ ಅವಧಿಯಲ್ಲಿ ವಿಜಯನಗರ ಜಿಲ್ಲೆ ರಚನೆ ತೀರ್ಮಾನ ಕೈಗೊಳ್ಳಲಾಯಿತು.
ಒಂದು ಜಿಲ್ಲೆ ರಚನೆಗೆ ಆರ್ಥಿಕವಾಗಿಯೂ ನೆರವು ಹಾಗೂ ಮೂಲಸೌಕರ್ಯದ ಜತೆಗೆ ಹುದ್ದೆಗಳ ಭರ್ತಿಯೂ ಸವಾಲು. ಅಗತ್ಯವಾದ್ದ ರಿಂದ ಆರ್ಥಿಕ ಇಲಾಖೆ ಒಪ್ಪಿಗೆ ಸಿಗುವುದು ಕಷ್ಟ. ಹೀಗಾಗಿ, ಹೊಸ ಜಿಲ್ಲೆ ರಚನೆ ವಿಚಾರದಲ್ಲಿ ಅಳೆದು ತೂಗಿ ತೀರ್ಮಾನ ಕೈಗೊಳ್ಳಬೇಕಿದೆ ಎಂಬ ಮಾತುಗಳೂ ಇವೆ.