ಯುಟ್ಯೂಬ್ ನೋಡಿ ಎಟಿಎಂ ಕಳ್ಳತನಕ್ಕೆ ಸ್ಕೆಚ್
Team Udayavani, Oct 24, 2021, 10:18 AM IST
ಬೆಂಗಳೂರು: ಯುಟ್ಯೂಬ್ ನೋಡಿ ಎಟಿಎಂ ಕೇಂದ್ರದಲ್ಲಿ ಕಳ್ಳತನ ಮಾಡಲು ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಸಮರ್ಜಿತ್ ಸಿಂಗ್ (27) ಮತ್ತು ರಾಜ್ ಕುಮಾರ್ (35) ಬಂಧಿತರು. ಆರೋಪಿಗಳಿಂದ 8 ಲಕ್ಷ ರೂ. ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಈ ಹಿಂದೆಯೂ ನಗರದ ಕೆಲವೆಡೆ ಎಟಿಎಂಗೆ ಕನ್ನ ಹಾಕಿ ಪೊಲೀಸರ ಬಲೆಗೆ ಬಿದ್ದು ಜಾಮೀನು ಪಡೆದು ಹೊರ ಬಂದು ಮತ್ತೆ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಹರಿಯಾಣದಿಂದ ರೈಲಿನಲ್ಲಿ ದೆಹಲಿಗೆ ಬಂದು, ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬಳಿಕ ನಗರದ ನಾನಾ ಪ್ರದೇಶಗಳಲ್ಲಿರುವ ಎಟಿಎಂಗಳನ್ನು ಗುರುತಿಸುತ್ತಿದ್ದರು.
2-3 ದಿನಗಳು ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಸಿಸಿ ಕ್ಯಾಮೆರಾಗಳ ಸಂಪರ್ಕ ತೆಗೆಯುತ್ತಿದ್ದರು. ರಾತ್ರಿ ಎಟಿಎಂಗೆ ಬಂದು ಶೆಟರ್ ಮುಚ್ಚಿ ಮೊದಲು ಎಟಿಎಂ ಯಂತ್ರದ ಇಂಟರ್ನೆಟ್ ಕೇಬಲ್ ಕತ್ತರಿಸುತ್ತಿದ್ದರು. ನಂತರ ಯುಟ್ಯೂಬ್ ನೋಡಿ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರದ ಒಂದು ಭಾಗವನ್ನು ತುಂಡರಿಸಿ ಅದರೊಳಗಿರುವ ಹಣ ದೋಚುತ್ತಿದ್ದರು.
ಇದನ್ನೂ ಓದಿ:- ಹಿಂಗಾರು ಬಿತ್ತನೆಗೆ ಮರಳಿ ಬಂದ ಗ್ರಾಮಸ್ಥರು
ಹಣ ಕೈಗೆ ಸಿಗುತ್ತಿದ್ದಂತೆ ಕ್ಯಾಬ್ ಬುಕ್ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ವಿಮಾನದಲ್ಲೇ ಪರಾರಿಯಾಗುತ್ತಿದ್ದರು. ಆಗಸ್ಟ್ 20ರಂದು ಉತ್ತರಹಳ್ಳಿಯಲ್ಲಿರುವ ಬ್ಯಾಂಕ್ವೊಂದರ ಎಟಿಎಂಗೆ ನುಗ್ಗಿದ್ದ ಆರೋಪಿಗಳು 17 ಲಕ್ಷ ರೂ. ದೋಚಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕಿದ ಸಾಮಗ್ರಿಗಳು, ಸಿಡಿಆರ್, ಹಳೇ ಎಟಿಎಂ ಕಳ್ಳರ ಮಾಹಿತಿ ಪಡೆದು, ದೆಹಲಿಗೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.