ಗ್ರಾಮ ಸಮಸ್ಯೆ ಹೈ ಅಂಗಳಕ್ಕೆ
ನ್ಯಾಯಕ್ಕಾಗಿ ಗ್ರಾಮಸ್ಥರ ಹೋರಾಟ, ಮಾಹಿತಿ ಕೇಳಿದ ನ್ಯಾಯಾಲಯ ಶಾಸಕರ ಯಡವಟ್ಟು
Team Udayavani, Oct 27, 2021, 12:55 PM IST
ನೆಲಮಂಗಲ: ಗ್ರಾಮದ ಅಭಿವೃದ್ಧಿಗೆ ಬಂದಿದ್ದ 45ಲಕ್ಷ ರೂ. ಅನುದಾನವನ್ನು ಶಾಸಕರು ಹಾಗೂ ಕೆಲವು ಅಧಿಕಾರಿಗಳ ಎಡವಟ್ಟಿನಿಂದ ಬೇರೆ ಗ್ರಾಮಕ್ಕೆ ವರ್ಗಾವಣೆ ಮಾಡಿದ ಪರಿಣಾಮ ಗ್ರಾಮದ ಅಭಿ ವೃದ್ಧಿ ಕುಂಠಿದ್ದು ನ್ಯಾಯ ದೊರಕಿಸಿಕೊಡುವಂತೆ ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರೆಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಗೋವಿಂದ ಪುರ ಗ್ರಾಮದಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ ಮಾಡಲು ಎನ್ಡಿಎಯಿಂದ 30 ಲಕ್ಷ ರೂ. ಹಾಗೂ ಅಲ್ಪ ಸಂಖ್ಯಾತ ಇಲಾಖೆಯಿಂದ 15ಲಕ್ಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸೂಚನೆ ನೀಡಿದ್ದರು. ಆದರೆ, ಅಭಿವೃದ್ಧಿ ಕೆಲಸಕ್ಕೆ ಸ್ಥಳಾವಕಾಶವಿಲ್ಲ ಎಂದು ವರದಿ ನೀಡುವ ಮೂಲಕ ಎನ್ಡಿಎ ಅನುದಾನ ಅನು ದಾನ, ಅಲ್ಪಸಂಖ್ಯಾತ ಅನುದಾನ ಬೇರೆ ಗ್ರಾಮಕ್ಕೆ ವರ್ಗಾವಣೆಯಾಗಿದೆ.
ಕುಗ್ರಾಮಕ್ಕೆ ಬಂದ 45 ಲಕ್ಷ ರೂ. ಅನುದಾನ ಕೆಲವರ ಹುನ್ನಾರದಿಂದ ಕೈತಪ್ಪಿದೆ. ಗ್ರಾಮಸ್ಥರು ನ್ಯಾಯಕ್ಕಾಗಿ ನ್ಯಾಯಾಲಯದ ಬಾಗಿಲಿಗೆ ಹೋಗಿದ್ದು ಈಗಾಗಲೇ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಕೆಲವು ಅಧಿಕಾರಿಗಳಿಂದ ತಿಳಿದುಬಂದಿದೆ. ಶಾಸಕರ ಆ ಎರಡು ಪತ್ರ ಗ್ರಾಮ ಅನುದಾನಕ್ಕೆ ಕತ್ತರಿ: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅರೆಬೊಮ್ಮನಹಳ್ಳಿ ಗ್ರಾಪಂನ ಗೋವಿಂದಪುರಕ್ಕೆ ಬಿಡುಗಡೆ ಯಾದ 45ಲಕ್ಷ ರೂ. ಅನುದಾನ ನೀಡದಂತೆ ಎರಡು ಪತ್ರ ಬರೆಯುತ್ತಾರೆ.
2018ರ ಮೇ 23ರಂದು ನೀಡುವ ಮೊದಲನೇ ಪತ್ರದಲ್ಲಿ ಅಲ್ಪ ಸಂಖ್ಯಾತರ ಇಲಾಖೆಯಿಂದ 15 ಲಕ್ಷ ಅನುದಾನ ಬಂದಿದೆ. ಎನ್ಡಿಎ ಅನುದಾನದ 30 ಲಕ್ಷ ರೂ. ಕೆಲಸ ಮಾಡಲು ಸಾಧ್ಯವಿಲ್ಲ. ಅರೆಬೊಮ್ಮನ ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಶಾಸಕರು ಪತ್ರ ಬರೆದು ವರ್ಗಾವಣೆ ಮಾಡಿಸುತ್ತಾರೆ.
ಇದನ್ನೂ ಓದಿ:- ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸುವೆ
ನಂತರ 2ನೇ ಪತ್ರವಾಗಿ 2018 ಜೂ.6ರಂದು ಎನ್ಡಿಎ ಅನುದಾನದಲ್ಲಿ ಗೋವಿಂದಪುರ ಗ್ರಾಮಕ್ಕೆ 30 ಲಕ್ಷ ರೂ.ಅನುದಾನ ನೀಡಲಾಗಿದ್ದು ಚಾಲ್ತಿಯಲ್ಲಿದೆ, ಈ ಗ್ರಾಮಕ್ಕೆ ಅಲ್ಪಸಂಖ್ಯಾತ ಇಲಾಖೆಯ 15ಲಕ್ಷ ಅನು ದಾನ ಅವಶ್ಯಕತೆ ಇಲ್ಲ. ಆದ್ದರಿಂದ ಅರೆಬೊಮ್ಮನಹಳ್ಳಿ ಅಲ್ಪಸಂಖ್ಯಾತ ಕಾಲೋನಿಗೆ ವರ್ಗಾವಣೆ ಮಾಡುವಂತೆ ಪತ್ರ ಬರೆದು 2ಕಾಮಗಾರಿ ಗ್ರಾಮಕ್ಕೆ ಸಿಗದಂತೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾಡಿದ್ದಾರೆ. ಶಾಸಕರಿಗೆ ಸಾಮಾನ್ಯ ಜ್ಞಾನವೂ ಇಲ್ಲದೇ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
“ನೆಲಮಂಗಲ ಶಾಸಕರ 2ಪತ್ರಗಳು ಗ್ರಾಮಕ್ಕೆ ಬಂದ 45 ಲಕ್ಷ ರೂ. ಅನುದಾನವನ್ನು ಬೇರೆ ಗ್ರಾಮಕ್ಕೆ ವರ್ಗಾವಣೆ ಆಗುವಂತೆ ಮಾಡಲಾಗಿದೆ. ನಮ್ಮ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ. ನ್ಯಾಯ ಕ್ಕಾಗಿ ಹೈಕೋರ್ಟ್ಗೆ ಹೋಗಿದ್ದು ನ್ಯಾಯ ಸಿಗುವ ಭರವಸೆ ಬಂದಿದೆ.” – ಸಯ್ಯದ್ ಅಬ್ದುಲ್, ಮಾಜಿ ಸದಸ್ಯರು, ಅರೆಬೊಮ್ಮನಹಳ್ಳಿ ಗ್ರಾಪಂ