ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ಹೆದ್ದಾರಿ ಬಂದ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲು ಬೇಡ ಶ್ರೀ ರಮಣಾನಂದ ಸ್ವಾಮೀಜಿಗಳ ಹೇಳಿಕೆ
Team Udayavani, Oct 27, 2021, 12:44 PM IST
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ ಎಂದು ಹೆಸರು ಬದಲಾವಣೆ ಮಾಡಿದರೆ ಜಿಲ್ಲೆಯ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಿ ಉಗ್ರಹೋರಾಟ ಮಾಡಲು ಸಂಘಟನೆಗಳು ಸಿದ್ಧವಿವೆ ಎಂದು ಶಿವಾನಂದಾಶ್ರಮದ ಶ್ರೀ ರಮಣಾನಂದ ಸ್ವಾಮೀಜಿ ಎಚ್ಚರಿಸಿದರು. ನಗರದ ಪರಿವೀಕ್ಷಣಾ ಮಂದಿರದಲ್ಲಿ ರೈತ ಹಿತರಕ್ಷಣ ಸಮಿತಿ, ತಾಲೂಕು ಒಕ್ಕಲಿಗರ ಸಂಘ, ರಾಜ್ಯ ದಲಿತ ಕೂಲಿ ಕಾರ್ಮಿಕರ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಸಮುದಾಯದ ಸಂಘಟನೆಗಳು ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ದೇವನಹಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಯಾದರೇ ಜಿಲ್ಲೆಯ ಎಲ್ಲಾ ಹೆದ್ದಾರಿ ತಡೆದು ಉಗ್ರಹೋರಾಟ ಮಾಡಲು ಸಂಘಟನೆಗಳು ಸಜ್ಜಾಗಿವೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಇತಿಹಾಸ ಉಳಿಯಲು ಬೆಂಗಳೂರು ಗ್ರಾಮಾಂತರ ಎಂಬ ಹೆಸರೇ ಮುಂದುವರೆಯಬೇಕು, ಹೆಸರು ಬದಲಾದರೆ ಸ್ವಾಮೀಜಿಗಳೂ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಬದಲಾವಣೆ ಬೇಡ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರೇ ಮುಂದುವರಿಯಬೇಕು.ಬೆಂಗಳೂರು ಸುತ್ತಮುತ್ತ ಪ್ರಸ್ತುತ ಇರುವ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಈ ಎಲ್ಲಾ ಹೆಸರು ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಿದಂತೆ. ಯಾವುದೇ ಕಾರಣಕ್ಕೂ ಸರ್ಕಾರ ಹೆಸರು ಬದಲಾವಣೆ ಮಾಡಬಾರದು ಎಂದು ಒತ್ತಾಯ ಮಾಡಿದರು.
ಡಿಸಿ ಕಚೇರಿ ಮುತ್ತಿಗೆ: ಇತಿಹಾಸವಿರುವ ಹಾಗೂ ಕೆಂಪೇಗೌಡರ ಹೆಜ್ಜೆಗಳ ನೆನಪುಗಳಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ದೇವನಹಳ್ಳಿ ಎಂದು ಘೋಷಣೆ ಮಾಡಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾ ರ್ಯದರ್ಶಿ ಪ್ರದೀಪ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:- ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ
ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮ ರಾಜು, ಉಪಾಧ್ಯಕ್ಷ ರಾಮಕೃಷ್ಣಪ್ಪ, ರಾಜ್ಯ ದಲಿತ ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಗಂಗಬೈಲಪ್ಪ, ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್ .ಜಿ.ರಾಜು, ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾ ರ್ಯದರ್ಶಿ ಪ್ರದೀಪ್, ಬಿಜೆಪಿ ತಾಲೂಕು ಉಪಾ ಧ್ಯಕ್ಷ ಜಗದೀಶ್ಚೌಧರಿ, ನಮ್ಮ ಜನಸೈನ್ಯ ಸಂಸ್ಥಾಪಕ ಅಧ್ಯಕ್ಷ ನರಸಿಂಹಯ್ಯ, ರಾಜ್ಯಾಧ್ಯಕ್ಷ ನವೀನ್, ಮುಖಂಡರಾದ ಚೌಡಯ್ಯ, ಭೀಮರಾಜು, ಬೈರಪ್ಪ, ಬೈಲಪ್ಪ, ಬೆಟ್ಟಸ್ವಾಮಿಗೌಡ, ಸ್ಟುಡಿಯೋ ಪ್ರಕಾಶ್ ಮತ್ತಿತರರಿದ್ದರು.
“ಬೆಂಗಳೂರಿಂದ ವಿವಿಧ ಪ್ರದೇಶಗಳ ವಿಭಜನೆಯಾದಾಗ ಬೆಂಗಳೂರು ಗ್ರಾಮಾಂತರ ಎಂಬ ಹೆಸರು ಚಾಲನೆಗೆ ಬಂತು. ಆ ನಂತರ ರಾಮನಗರ ಜಿಲ್ಲೆ ವಿಭಜನೆ ಆದರೂ ಹೆಸರು ಮಾತ್ರ ಬೆಂಗಳೂರು ಗ್ರಾಮಾಂತರ ಎಂದೇ ಚಾಲನೆಯಲ್ಲಿ ಇದೆ. ಆದರೆ, ಈಗ ದೇವನಹಳ್ಳಿ ಎಂದು ಬದಲಾವಣೆ ಮಾಡಿದರೆ ಕೆಂಪೇಗೌಡರು ಸಲ್ಲಿಸಿದ ಸೇವೆಗೆ ಧಕ್ಕೆ ಮಾಡಿದಂತೆ ಆಗುತ್ತದೆ.” – ಶ್ರೀ ರಮಣಾನಂದ ಸ್ವಾಮೀಜಿ, ಶಿವಾನಂದಾಶ್ರಮ