Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Team Udayavani, Mar 23, 2024, 2:20 PM IST
ದೇವನಹಳ್ಳಿ: ಮಳೆ ಇಲ್ಲದೆ ಬೀರು ಬೇಸಿಗೆಯಿಂದ ವಿದ್ಯುತ್ ಕಡಿತ ಸಾರ್ವಜನಿಕರು ಮತ್ತು ರೈತರನ್ನು ಕಾಡುತ್ತಿದೆ. ಸಮೀಪದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯುತ್ ಕಿರಿಕಿರಿ ಉಂಟು ಮಾಡುತ್ತಿದೆ.
ಗೃಹ ಜ್ಯೋತಿ ಜಾರಿ ಬಳಿಕ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ ಎಂಬ ಆರೋಪದ ಮಧ್ಯೆ, ಬೇಸಿಗೆ ಪ್ರಾರಂಭವಾಗಿರುವುದರಿಂದ ಕೃಷಿ ಪಂಪ್ ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಕಂಗಾಲು ಆಗಿದ್ದಾರೆ. ಅಲ್ಲದೆ, ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು, ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ಹೆಚ್ಚುವರಿ ವಿದ್ಯುತ್ ಪರಿವರ್ತಕ ಅವಶ್ಯ: ಬೇಸಿಗೆಯ ಬಿಸಿಲು ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಮನೆಯಲ್ಲಿರುವಾಗ ಸೆಕೆಯಿಂದ ತಪ್ಪಿಸಿಕೊಳ್ಳಲು ಫ್ಯಾನಿನ ಮೊರೆ ಹೋಗಬೇಕಾಗುತ್ತದೆ. ಪಟ್ಟಣ ಪ್ರದೇಶದಲ್ಲಿ ಹಲವು ಮಂದಿ ಯುಪಿಎಸ್ ಸೋಲಾರ್, ಆಧುನಿಕ ಸೌಲಭ್ಯಗಳಿಂದ ಬೆಳಕಿನ ವ್ಯವಸ್ಥೆ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ವಿದ್ಯುತ್ ಇಲ್ಲದೆ ಪರೀಕ್ಷೆ ಸಿದ್ಧವಾಗುವುದು ಹೇಗೆ ಎಂಬ ಪ್ರಶ್ನೆ ಪೋಷಕರಿಗೆ ಕಾಡುತ್ತಿದೆ. ವಿದ್ಯುತ್ ಪರಿವರ್ತಕದಲ್ಲಿ ಓವರ್ ಲೋಡ್ ಸಮಸ್ಯೆಯಾಗುತ್ತಿದ್ದು, ವಿವಿಧೆಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಕೆ ಅವಶ್ಯವಿದೆ. ಆದರೆ, ರೈತರಿಗೆ ಖರ್ಚು ಹೆಚ್ಚು ಬರುವುದರಿಂದ ಮಾಡುವುದಾದರೂ ಏನು ಎಂಬಂತೆ ಕೈಚೆಲ್ಲಿ ರೈತರು ಕುಳಿತಿದ್ದಾರೆ. ಬೆಳಗ್ಗೆಯೇ 8 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಿದ್ಯುತ್ ಕಂಬ ಸರಿಪಡಿಸಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿರುವ ಕಂಬಗಳು ಹಾಳಾಗಿದ್ದು, ಸರಿಪಡಿಸಲು ಬೆಸ್ಕಾಂ ನಿರ್ಲಕ್ಷಿéಸಿದೆ. ಕೂಡಲೇ ಸರಿಪಡಿಸಲು ಮುಂದಾಗಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.
ವಿದ್ಯುತ್ ಸೌಲಭ್ಯಕ್ಕೆ ಪರದಾಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ರೈತ ಕುಟುಂಬಗಳು ಪಂಪ್ಸೆಟ್ ಅವಲಂಭಿಸಿವೆ. ಗ್ರಾಮೀಣ ಭಾಗದ ಬಹುತೇಕ ರೈತರು ವಿದ್ಯುತ್ ಸೌಲಭ್ಯಕ್ಕೆ ಪರದಾಡಿ ಸುಸ್ತಾಗಿ ರೈತರು, ರೈತ ಮುಖಂಡರು ಕೃಷಿ ಮಾಡುವುದೇ ಬೇಡಪ್ಪ ಎಂಬ ಮಟ್ಟಿಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಹೊಸದಾಗಿ ಕೃಷಿ ಚಟುವಟಿಕೆ ನಡೆಸಲು ಪ್ರಸ್ತುತ ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಬೇಕಿದೆ. 10-12 ಸಾವಿರ ರೂ.ಗಳನ್ನು ವಿದ್ಯುತ್ ಕಂಪನಿಗೆ ಕಟ್ಟಬೇಕು. ವಿದ್ಯುತ್ ಪರಿವರ್ತಕ, ಕಂಬ, ತಂತಿಗಳು ಸೇರಿದಂತೆ ಇತರೆ ಪರಿಕರಗಳನ್ನು ರೈತರೇ ಖುದ್ದು ಖರೀದಿ ಮಾಡುವುದರಿಂದ ಹೊಸಬರಿಗೆ ಕೃಷಿ ಮಾಡಲು ವಿದ್ಯುತ್ ಪರಿವರ್ತಕದ ತಲೆನೋವು ಶುರುವಾಗಿದೆ.
ಬೆಳಗಿನ ಅವಧಿಯಲ್ಲಿ 4 ಗಂಟೆ ಹಾಗೂ ರಾತ್ರಿ ವೇಳೆ 3 ಗಂಟೆ ವಿದ್ಯುತ್ ನೀಡುವುದಾಗಿ ಹೇಳಲಾಗಿದ್ದು, ಸುಸೂತ್ರವಾಗಿ ಸಿಗದೆ, ಕಣ್ಣಾಮುಚ್ಚಾಲೆ ಯಾಟವಾ ಡುತ್ತಿದೆ. ಬಹುತೇಕ ಕಡೆಗಳಲ್ಲಿ ಗಂಟೆಗಟ್ಟಲೇ ಕಡಿತಗೊಂಡಿದೆ. ಲೋಡ್ ಶೆಡ್ಡಿಂಗ್, ವೋಲ್ಟೆàಜ್ ಕಿರಿಕಿರಿಯಿಂದ ರೈತರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಅಸಮರ್ಪಕ ವಿದ್ಯುತ್ನಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ರೈತರು ತಾವು ಬೆಳೆಯುವ ಬೆಳೆಗಳಿಗೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ. ಬೆಸ್ಕಾಂ ಸಮರ್ಪಕವಾಗಿ ವಿದ್ಯುತ್ ನೀಡಬೇಕಿದೆ.-ವೆಂಕಟನಾರಾಯಣಪ್ಪ, ರಾಜ್ಯ ಉಪಾಧ್ಯಕ್ಷ, ರೈತ ಸಂಘ
ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆಗೆ ರೈತರ ಸ್ವಂತ ಖರ್ಚು ಸುಮಾರು 1 ಲಕ್ಷ ರೂ.ಗೂ ಮೇಲ್ಪಟ್ಟು ಆಗುತ್ತದೆ. ಸರ್ಕಾರ ಸೋಲಾರ್ ಅಳವಡಿಸ ಲು ರೈತರಿಗೆ ಶೇ.50ರಷ್ಟು ಸಬ್ಸಿಡಿ ನೀಡಲು ಮುಂದಾಗಬೇಕು. ಬರದ ನಡುವೆ ನೀರು, ವಿದ್ಯುತ್ ಸಮಸ್ಯೆ ಸಾಮಾನ್ಯ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಪರದಾಡುವಂತಾಗಿದೆ.-ಚಿಕ್ಕೇಗೌಡ, ರೇಷ್ಮೆ ಬೆಳೆಗಾರ, ಕೊಯಿರ
ಬೆಳಗ್ಗೆ 4, ರಾತ್ರಿ 3 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಕೊಡ ಲಾಗುತ್ತಿದೆ. ಲೋಡ್ಶೆಡ್ಡಿಂಗ್, ಮರ ಬೀಳುವುದು ಇನ್ನಿತರೆ ಅಡೆತಡೆಯಿಂದ ಸಮಯದಲ್ಲಿ ವ್ಯತ್ಯಾಸ ವಾಗಲಿದೆ. ದಿನದಲ್ಲಿ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. -ಲಕ್ಷ್ಮೀಕಾಂತ, ಎಇಇ, ಬೆಸ್ಕಾಂ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ