ನಗರ ಹೃದಯಭಾಗದ ಒಳರಸ್ತೆಗಳು ಮತ್ತಷ್ಟು ಸುಧಾರಣೆಯಾಗಲಿ
ಬಿಜೈ, ಕದ್ರಿ ಉತ್ತರ, ಕದ್ರಿ ದಕ್ಷಿಣ, ಶಿವಬಾಗ್ ವಾರ್ಡ್
Team Udayavani, Nov 1, 2021, 5:59 AM IST
ಮಹಾನಗರ: ಅಧಿಕ ಮಳೆ ಬರುವ, ಸದಾ ನೀರು ಹರಿಯುವ ಪ್ರದೇಶಕ್ಕೆ ಡಾಮರು ರಸ್ತೆ ಸೂಕ್ತವಲ್ಲ; ಅಂಥ ಕಡೆ ಗೆ ಕಾಂಕ್ರೀಟ್ ಅಳವಡಿಸುವುದೇ ಹೆಚ್ಚು ಪ್ರಯೋಜನಕಾರಿ ಎನ್ನುವುದು ತಜ್ಞರ ಅಭಿಮತ. ಆದರೆ ಕೆಲವು ಕಡೆ ಕಾಂಕ್ರೀಟ್ ಹಾಕಿದ ರಸ್ತೆ ಕೂಡ ಕೆಟ್ಟು ಹೋಗುತ್ತದೆ. ಅದಕ್ಕೊಂದು ನಿರ್ದಶನವೆಂದರೆ, ನಗರದ ಕದ್ರಿ ಶಿವಬಾಗ್ ವಾರ್ಡ್ ವ್ಯಾಪ್ತಿಯಲ್ಲಿ ಪಂಪ್ವೆಲ್ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಒಳರಸ್ತೆಯೇ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಕದ್ರಿ ಶಿವಬಾಗ್ನಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗೆ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಹಿಂಬದಿಯ ಭಾಗದಲ್ಲಿ ಸುಮಾರು ಆರೇಳು ವರ್ಷಗಳ ಹಿಂದೆ ಆಂಶಿಕ ಕಾಂಕ್ರೀಟ್ ಹಾಕಲಾಗಿದ್ದು, ಈಗ ಅದು ಅಲ್ಲಲ್ಲಿ ಗುಂಡಿ ಬಿದ್ದಿದೆ. ಕಾಂಕ್ರೀಟ್ ಮಿಶ್ರಣಕ್ಕೆ ಹಾಕಿದ್ದ ಸಿಮೆಂಟ್, ಹೊಗೆ ಎದ್ದು ಹೋಗಿ, ಜಲ್ಲಿಕಲ್ಲುಗಳು ಮಾತ್ರ ಉಳಿದಿವೆ. ಕೆಲವೆಡೆ ಆಳವಾದ ಗುಂಡಿ ಸೃಷ್ಟಿಯಾಗಿವೆ. ಈ ಅವಸ್ಥೆಗೆ ಮುಖ್ಯ ಕಾರಣ ಕಳಪೆ ಕಾಮಗಾರಿ. ಟೆಂಡರು ವಹಿಸಿಕೊಂಡವರು ಕಾಂಕ್ರೀಟ್ ಹಾಕುವಾಗ ಅದಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಸಿಮೆಂಟ್ ಮಿಶ್ರಣ ಮಾಡದೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸಿದ್ದರಿಂದ ಹೀಗಾಯಿತು ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತವೆ. ಪಾಲಿಕೆಯ ಬಿಜೈ, ಕದ್ರಿ ಉತ್ತರ, ಕದ್ರಿ ದಕ್ಷಿಣ, ಶಿವಬಾಗ್ ವಾರ್ಡ್ಗಳಲ್ಲಿ ಒಂದು ಸುತು ಹಾಕಿದಾಗ ಕೆಲವು ಒಳ ರಸ್ತೆಗಳು ಚೆನ್ನಾಗಿದ್ದರೂ ಇನ್ನು ಕೆಲವು ಒಳರಸ್ತೆಗಳು ಹದಗೆಟ್ಟಿವೆ.
ನಾಗರಿಕರ ಬೇಡಿಕೆಗಳೇನು?
- ಬಿಜೈ ಭಜನ ಮಂದಿರ ರಸ್ತೆಯಲ್ಲಿ ಪೈಪ್ಲೈನ್ಗಾಗಿ ಅಗೆದು ಗುಂಡಿ ಮುಚ್ಚಿದಲ್ಲಿ ಮತ್ತೆ ಹೊಂಡ ನಿರ್ಮಾಣವಾಗಿದ್ದು, ದುಸ್ತಿಗೊಳಿಸಬೇಕಿದೆ.
-ನಂತೂರಿನಲ್ಲಿ ದಲಿತ ಕಾಲನಿಯ ಒಳ ರಸ್ತೆ ಕೆಲವು ಕಡೆ ಹದಗೆಟ್ಟಿದ್ದು, ದುರಸ್ತಿ ಆಗಬೇಕಾಗಿದೆ.
ಇದನ್ನೂ ಓದಿ:‘ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು. ಬಿ. ರಾಜಲಕ್ಷ್ಮೀ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಡಾಮರು ಕಾಣದೆ ಹಲವು ವರ್ಷಗಳೇ ಕಳೆದಿವೆ
ಕದ್ರಿ ದಕ್ಷಿಣ ವಾರ್ಡ್ನಲ್ಲಿ ತಂದೂರ್ ಬಾರ್ ಆ್ಯಂಡ್ ರೆಸ್ಟೊರೆಂಟ್ ಬಳಿಯಿಂದ ವಿನಯ ನರ್ಸಿಂಗ್ ಹೋಂ ಮುಂಭಾಗ ಪಿಂಟೋಸ್ ಲೇನ್ ಕಡೆಗೆ ಹೋಗುವ ಒಳ ರಸ್ತೆಯು ಅಲ್ಲಲ್ಲಿ ಗುಂಡಿ ಬಿದ್ದಿದೆ. ಕದ್ರಿಯ ಜಾರ್ಜ್ ಮಾರ್ಟಿಸ್ ರಸ್ತೆಯಿಂದ ಕದ್ರಿ ಶ್ಮಶಾನ ಕಡೆಗೆ ಹೋಗುವ ಒಳ ರಸ್ತೆಯಲ್ಲಿ ಭಾಗಶಃ ಕಾಂಕ್ರೀಟ್ ಅಳವಡಿಸಲಾಗಿದ್ದು, ಬಾಕಿ ಉಳಿದ ರಸ್ತೆಯ ಅಲ್ಲಿಲ್ಲಿ ಡಾಮರು ಕಿತ್ತು ಹೋಗಿದ್ದು, ಹೊಂಡಗಳು ನಿರ್ಮಾಣವಾಗಿವೆ. ಕದ್ರಿ ಸಕೀìಟ್ ಹೌಸ್ ಹಿಂಭಾಗದ ರಸ್ತೆ ಡಾಮರು ಕಾಣದೆ ಹಲವು ವರ್ಷಗಳೇ ಕಳೆದಿವೆ. ನಂತೂರಿನಲ್ಲಿ ದಲಿತ ಕಾಲನಿಯ ಒಳ ರಸ್ತೆ ಕೆಲವು ಕಡೆ ಹದಗೆಟ್ಟಿದ್ದು, ದುರಸ್ತಿ ಆಗಬೇಕಾಗಿದೆ. ಕದ್ರಿ ಕಂಬಳ ರಸ್ತೆಯಲ್ಲಿ ಒಳಚರಂಡಿ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈಗ ಈ ರಸ್ತೆಯಲ್ಲಿ ವಾಹನ ಸಂಚಾರವನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮಹಾನಗರ ಪಾಲಿಕೆಯ ಬಿಜೈ, ಕದ್ರಿ ಉತ್ತರ, ಕದ್ರಿ ದಕ್ಷಿಣ, ಶಿವಬಾಗ್ ವಾರ್ಡ್ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ, ಮಾಹಿತಿ ಸಂಗ್ರಹಿಸಿದ್ದು, ಕೆಲವು ಕಡೆ ಕಾಂಕ್ರೀಟ್ ಹಾಕಿದ ರಸ್ತೆ ಕೂಡ ಕೆಟ್ಟು ಹೋಗಿದೆ. ಕಾಂಕ್ರೀಟ್ ಮಿಶ್ರಣಕ್ಕೆ ಹಾಕಿದ್ದ ಸಿಮೆಂಟ್ ಮತ್ತು ಹೊಗೆ ಎದ್ದು ಹೋಗಿ, ಜಲ್ಲಿಕಲ್ಲುಗಳು ಮಾತ್ರ ಉಳಿದಿವೆ. ಕೆಲವೆಡೆ ರಸ್ತೆಗಳು ಡಾಮರು ಕಾಣದೆ ಹಲವು ವರ್ಷಗಳೇ ಸಂದಿದ್ದು, ಸಂಚಾರ ಸಂಕಷ್ಟಕರವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಿ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್ಗೆ ಕಳುಹಿಸಬಹುದು.
-ಹಿಲರಿ ಕ್ರಾಸ್ತಾ